ಮೇ 28 ರಂದು ಬಕ್ರಿದ್ ಹಬ್ಬದಂದು, ಜಿಲ್ಲಾದ್ಯಂತ ಸಂಫೂರ್ಣವಾಗಿ ಕಸಾಯಿಖಾನೆಗಳನ್ನು ಬಂದ ಮಾಡುವಂತೆ ಆಗ್ರಹಿಸಿ, ಶ್ರೀ ರಾಮ ಸೇನೆಯ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮೇ 28 ರಂದು ಮುಸ್ಲಿಂ ಬಕ್ರಿದ್ ಹಬ್ಬದಂದು, ಜಿಲ್ಲಾದ್ಯಂತ ಸಂಫೂರ್ಣವಾಗಿ ಕಸಾಯಿಖಾನೆಗಳನ್ನು ಬಂದ ಮಾಡುವಂತೆ ಆಗ್ರಹಿಸಿ, ಶ್ರೀ ರಾಮ ಸೇನೆಯ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅಕ್ರಮವಾಗಿ ಕಸಾಯಿಖಾನೆಗಳಿಗೆ ಗೋವುಗಳನ್ನು ಸಾಗಾಟ ಮಾಡಿ ಅವುಗಳನ್ನು ಹತ್ಯೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲದೆ ಮೇ 28 ರಂದು ಮುಸ್ಲಿಮರ ಹಬ್ಬವಾದ ಬಕ್ರಿದ್‌ದಂದು ಸಾಕಷ್ಟು ಪ್ರಾಣಿಗಳ ಬಲಿ ಮಾಡಲಾಗುತ್ತದೆ. ಬಕ್ರಿದ್‌ಗೆ ಪ್ರಾಣಿಗಳನ್ನು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸಿದರು.

ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರಾಣಿಗಳನ್ನು ಅಕ್ರಮವಾಗಿ ಕಸಾಯಿಖಾನೆಗಳಿಗೆ ಸಾಗಾಟ ಮಾಡಿ ಅವುಗಳನ್ನು ಹತ್ಯೆ ಮಾಡಲಾಗುತ್ತಿದೆ. 28 ರಂದು ನಡೆಯಲಿರುವ ಬಕ್ರೀದ್ ಹಬ್ಬದಂದು ಅಷ್ಟೇ ಅಲ್ಲ ಜಿಲ್ಲಾಧ್ಯಂತ ಸಂಪೂರ್ಣವಾಗಿ ಪ್ರಾಣಿಗಳ ಹತ್ಯೆ ನಿಷೇಧಿಸಬೇಕು. ಹಿಂದೂ ಧರ್ಮದಲ್ಲಿ ಗೋ ಮಾತೆಯನ್ನು ಪೂಜೆ ಮಾಡುವ ನಾವು ನಮ್ಮ ಕಣ್ಣುಮುಂದೆಯೇ ಗೋ ಮಾತೆಯ ಹತ್ಯೆ ಮಾಡುವುದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ. ಇನ್ನು ಮುಂದೆ ಅಕ್ರಮವಾಗಿ ಪ್ರಾಣಿಗಳನ್ನು ಕಸಾಯಿಖಾನೆಗಳಿಗೆ ಸಾಗಾಟ ಮಾಡಿ ಹತ್ಯೆ ಮಾಡುವವರ ವಿರುದ್ಧ ಅಲ್ಲೇ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು. ಸಂವಿಧಾನದ ಕಲಂ 48ರ ಪ್ರಕಾರ ರಾಜ್ಯವು ಕೃಷಿ ಮತ್ತು ಪಶುಸಂಗೋಪನೆಯನ್ನು ವೈಜ್ಞಾನಿಕ ರೀತಿಯಲ್ಲಿ ಸಂಘಟಿಸಿ, ಗೋವುಗಳು ಹಾಗೂ ಕೃಷಿಗೆ ಮತ್ತು ಹಾಲು ಉತ್ಪಾದನೆಗೆ ಉಪಯುಕ್ತ ಜಾನುವಾರುಗಳ ಸಂರಕ್ಷಣೆ ಹಾಗೂ ಹತ್ಯೆ ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ. ಅದರಂತೆ ಕೂಡಲೇ ಸಂಪೂರ್ಣವಾಗಿ ಗೋಹತ್ಯೆ ನಿಷೇಧಿಸಬೇಕು ಎಂದು ಶ್ರೀ ರಾಮಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವುದರ ಮೂಲಕ ಕೆಲವೊಂದು ನಿಯಮಗಳನ್ನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.

ಕಟ್ಟುನಿಟ್ಟಾಗಿ ಜಾರಿ ಮಾಡಿ:

ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್‌ಗಳು ಹಾಗೂ ಗಡಿಭಾಗದಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲಿ ತಪಾಸಣೆ ವ್ಯವಸ್ಥೆ ಕಲ್ಪಿಸಬೇಕು. ಹೈನುಕಾರಿಕೆಗೆ ಗೋವುಗಳನ್ನು ಸಾಗಿಸುವ ವಾಹನಗಳ ದಾಖಲೆಗಳು, ಪರವಾನಗಿ, ಪಶುವೈದ್ಯಕೀಯ ಕಾನೂನುಬದ್ಧತೆ ಪ್ರಮಾಣಪತ್ರ ಹಾಗೂ ಸಾಗಾಣಿಕೆಯ ಪತ್ರ ಹೊಂದಿರಬೇಕು. ಅನಧಿಕೃತ ಕಸಾಯಿಖಾನೆಗಳು, ಅನುಮಾನಾಸ್ಪದ ಗೋದಾಮುಗಳು ಹಾಗೂ ಖಾಸಗಿ ಸ್ಥಳಗಳ ಮೇಲೆ ವಿಶೇಷ ದಾಳಿ ಮಾಡಿ ಗೋ ಹಂತಕರನ್ನು ಬಂಧಿಸಬೇಕು. ಜಿಲ್ಲಾದ್ಯಂತ ಸಂಪೂರ್ಣವಾಗಿ ಗೋ ಹತ್ಯೆಯನ್ನು ನಿಷೇಧ ಮಾಡಬೇಕು. ಒಂದು ವೇಳೆ ಜಿಲ್ಲೆಯಲ್ಲಿ ಎಲ್ಲಾದರೂ ಗೋವುಗಳು ಹತ್ಯೆ ಮಾಡಿದಲ್ಲಿ ಕಸಾಯಿಖಾನೆಯ ವಿರುದ್ಧ ಹಾಗೂ ಜಿಲ್ಲಾಡಳಿತದ ವಿರುದ್ಧ ಉಗ್ರವಾಗಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಈ ವೇಳೆ ಶ್ರೀ ರಾಮ ಸೇನೆ ಉಕ ಭಾಗದ ರಾಜ್ಯಾಧ್ಯಕ್ಷರ ರವಿಕುಮಾರ ಕೋಕಿತರ, ವಿನಯ ಅಂಗೊಳ್ಳಿ, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸೇರಿದಂತೆ ಹಲವರು ಕಾರ್ಯಕರ್ತರು ಇದ್ದರು.