ಗ್ಯಾರಂಟಿಗಳಿಗಾಗಿ ರಾಜ್ಯದ ಬೊಕ್ಕಸ ಖಾಲಿ ಮಾಡಿದ ಸಿಎಂ

| Published : Nov 08 2023, 01:00 AM IST

ಸಾರಾಂಶ

ಮೊಳಕಾಲ್ಮುರು: ಪ್ರತಿ ಸಮಸ್ಯೆಗೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ನಿರ್ವಹಣೆಯ ನೆಪದಲ್ಲಿ ಬರ ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣದ ಚಿಕ್ಕಕೆರೆ ಮತ್ತು ನೆಲಗೇತಹಟ್ಟಿ ಸೇರಿದಂತೆ ವಿವಿಧ ಕಡೆಯಲ್ಲಿ ಬಿಜೆಪಿಯ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಅವರು, ಪರಿಶೀಲನೆ ನಡೆಸಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌

ಮೊಳಕಾಲ್ಮುರು: ಪ್ರತಿ ಸಮಸ್ಯೆಗೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ನಿರ್ವಹಣೆಯ ನೆಪದಲ್ಲಿ ಬರ ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ ಪಟ್ಟಣದ ಚಿಕ್ಕಕೆರೆ ಮತ್ತು ನೆಲಗೇತಹಟ್ಟಿ ಸೇರಿದಂತೆ ವಿವಿಧ ಕಡೆಯಲ್ಲಿ ಬಿಜೆಪಿಯ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಅವರು, ಪರಿಶೀಲನೆ ನಡೆಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಅಧಿಕಾರದ ಆಸೆಯಿಂದ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿ ಮಾಡಿ ರಾಜ್ಯವನ್ನು ದಿವಾಳಿಯ ಹಂತಕ್ಕೆ ತಂದಿದ್ದಾರೆ. ರಾಜ್ಯದಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲ ಆವರಿಸಿದ್ದರೂ ಬೆಳೆ ಪರಿಹಾರ ನೀಡುವಲ್ಲಿ ಯೋಜನೆಯನ್ನು ರೂಪಿಸುವಲ್ಲಿ ವಿಫಲವಾಗಿದೆ. ಹಳ್ಳಿಗಳಲ್ಲಿ ಉದ್ಯೋಗ ಇಲ್ಲದೆ ಗುಳೆ ಹೋಗುವಂತಾ ಸ್ಥಿತಿ ನಿರ್ಮಾಣವಾಗಿದೆ. ರೈತರು ಬೆಳೆ ನಷ್ಟದಿಂದ ಸಂಕಷ್ಟದಲ್ಲಿದ್ದರೂ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಕಿತ್ತಾಡುತ್ತಿರುವುದು ನೂರು ದಿನಗಳ ಸಾಧನೆಯಾಗಿದೆ ಎಂದರು. ಕ್ಷೇತ್ರವು ರಾಜ್ಯದಲ್ಲಿ ಹಿಂದುಳಿದ ಪ್ರದೇಶ ಎಂದು ಹೆಸರಾಗಿದೆ. ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಇದಾಗಿದೆ. ಜನತೆ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಬರ ನಿರ್ವಹಣೆ ವಿಶೇಷ ಅನುದಾನಗಳು ರೂಪಿಸಿಲ್ಲ. ರಾಗಿ, ಶೇಂಗಾ, ಸೂರ್ಯಕಾಂತಿ, ಮೆಕ್ಕೆ ಜೋಳ ಬೆಳೆಗಳು ಸಂಪೂರ್ಣವಾಗಿ ಒಣಗಿವೆ. ಅಧಿಕಾರ ಹಂಚಿಕೆಯಲ್ಲಿ ಕಾಲ ಕಳೆಯುತ್ತಿರುವ ರಾಜ್ಯ ಸರ್ಕಾರ ಬರಗ ಬಗ್ಗೆ ಯಾವುದೇ ಗಂಬೀರ ಪ್ರಯತ್ನಗಳು ನಡೆಸದೆ ಕಾಲ ಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯಿಂದಾಗಿ ಬಿಜೆಪಿ ನಾಯಕರು 17 ತಂಡಗಳನ್ನು ರಚಿಸಿಕೊಂಡು ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿಯನ್ನು ಅಧ್ಯಯನ ನಡೆಸುತ್ತಿದೆ. ಇದರಿಂದ ಎಚ್ಚೆತ್ತ ಮುಖ್ಯಮಂತ್ರಿ ಬರದ ಅದ್ಯಯನಕ್ಕಾಗಿ ಜಿಲ್ಲಾ ಪ್ರವಾಸ ಕೈಗೊಳ್ಳಲು ಮಂತ್ರಿಗಳಿಗೆ ಸೂಚಿಸಿದ್ದಾರೆ. ಸರ್ಕಾರದ ಬಳಿ ಗ್ಯಾರಂಟಿಗಳಿಗೆ ಹಣವಿದ್ದಲ್ಲಿ ಬೆಳೆ ಪರಿಹಾರಕ್ಕೆ ಹಣ ನೀಡಿ ರೈತರಿಗೆ ನೆರವಾಗಬೇಕು. ಗ್ಯಾರಂಟಿಗೆ ಕೊಟ್ಟ ಮಹತ್ವವನ್ನು ಅನ್ನದಾತರಿಗೂ ನೀಡಬೇಕು. ಕಾಟಚಾರಕ್ಕೆ ಕೆಲವು ಕೋಟಿಗಳ ಹಣವನ್ನು ಡಿ.ಸಿಗಳಿಗೆ ನೀಡಿ ಬರ ಪರಿಹಾರ ಒದಗಿಸಿದ್ದೇವೆ ಎಂದು ಬೀಗಬಾರದು ಎಂದು ಟೀಕಿಸಿದರು. ವಿ.ಪ ಸದಸ್ಯ ಕೆ.ಎಸ್.ನವೀನ್. ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,ಎಸ್.ತಿಪ್ಪೇಸ್ವಾಮಿ, ಮಂಡಲ ಅಧ್ಯಕ್ಷ ಇ.ರಾಮರೆಡ್ಡಿ, ಮುಖಂಡರಾದ ಎಂ.ವೈ.ಟಿ.ಸ್ವಾಮಿ, ಶಿವಣ್ಣ,ಪಟ್ಟಣ ಪಂಚಾಯಿತಿ ಸದಸ್ಯ ಮಹಂತೇಶ, ಪರಮೇಶ್ವರಪ್ಪ, ಶಾರದಮ್ಮ, ಇದ್ದರು.