ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಸಿಎಂ ಚಾಲನೆ

| Published : Jun 04 2025, 12:36 AM IST

ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಸಿಎಂ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಕುಂಡಿ ಮಾದರಿಯಲ್ಲಿ ರಾಜ್ಯಾದ್ಯಂತ ಇರುವ ಐತಿಹಾಸಿಕ ಸ್ಮಾರಕ, ಶಿಲಾಶಾಸನ, ಕೋಟೆ ಕೊತ್ತಲುಗಳ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕನ್ನಡಪ್ರಭ ವಾರ್ತೆ ಗದಗ

ಲಕ್ಕುಂಡಿ ಮಾದರಿಯಲ್ಲಿ ರಾಜ್ಯಾದ್ಯಂತ ಇರುವ ಐತಿಹಾಸಿಕ ಸ್ಮಾರಕ, ಶಿಲಾಶಾಸನ, ಕೋಟೆ ಕೊತ್ತಲುಗಳ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮಂಗಳವಾರ ಇಲ್ಲಿ ‘ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ ಹಮ್ಮಿಕೊಂಡಿದ್ದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಲಕ್ಕುಂಡಿ ಚಾಲುಕ್ಯರ ರಾಜಧಾನಿ ಆಗಿತ್ತು. ಚಾಲುಕ್ಯರ ಕಾಲದಲ್ಲಿ ಇಲ್ಲಿ ದೇವಸ್ಥಾನ, ಕೋಟೆ ನಿರ್ಮಿಸಲಾಗಿದೆ. ಇಲ್ಲಿ ಸಿಗುವ ಅವಶೇಷಗಳಿಂದ ಆ ಕಾಲದ ಶಿಲಾಶಾಸನಗಳ ಪರಿಚಯ ಮತ್ತು ರಾಜ್ಯಭಾರದ ಮಾಹಿತಿ ದೊರಕಿದೆ. ಸಚಿವ ಎಚ್.ಕೆ.ಪಾಟೀಲರ ಆಸಕ್ತಿಯಿಂದಾಗಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ರಚನೆ ನಮ್ಮ ಸರ್ಕಾರದ ಅವಧಿಯಲ್ಲೇ ಆಗಿದೆ. ಇಲ್ಲಿ ದೊರೆತಿರುವ ಅವಶೇಷಗಳ‌ ಪುನರುಜ್ಜೀವನಕ್ಕೆ ಸರ್ಕಾರದಿಂದ ಹಣ ಕೊಟ್ಟಿದ್ದೇವೆ. ಇದರಿಂದ ಐತಿಹಾಸಿಕ ಕುರುಹುಗಳನ್ನು ಸಂಗ್ರಹಿಸಲು, ರಕ್ಷಿಸಲು ಸಾಧ್ಯವಾಗಿದೆ ಎಂದರು.

ಬಯಲು ವಸ್ತು ಸಂಗ್ರಹಾಲಯ:

ಈಗಾಗಲೇ ಇಲ್ಲಿ ಸಾಕಷ್ಟು ಮಹತ್ವದ ಅವಶೇಷ, ಶಿಲ್ಪಕಲೆ, ಶಿಲಾಶಾಸನ, ಮೂರ್ತಿಗಳು ಪತ್ತೆಯಾಗಿವೆ. ಉತ್ಖನನದ ಮೂಲಕ ಇನ್ನಷ್ಟು ಲಭಿಸಲಿವೆ. ಈ ಎಲ್ಲ ಕುರುಹುಗಳ ರಕ್ಷಣೆ ಮತ್ತು ಪ್ರದರ್ಶನಕ್ಕಾಗಿ ಲಕ್ಕುಂಡಿಯಲ್ಲಿ ‘ಬಯಲು ವಸ್ತು ಸಂಗ್ರಹಾಲಯ’ ನಿರ್ಮಿಸಲಾಗುವುದು. ಇದಕ್ಕೆ ಅಗತ್ಯವಿರುವ ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಹಿಂದೆ ಬಂಗಾರಪ್ಪನವರ ಸರ್ಕಾರದಲ್ಲಿ ಇಂಥ ದೇವಸ್ಥಾನ, ಐತಿಹಾಸಿಕ ಸ್ಮಾರಕಗಳ ಪುನರುಜ್ಜೀವನಕ್ಕೆ ಆರಾಧನ ಯೋಜನೆ ಜಾರಿಯಲ್ಲಿತ್ತು. ನಂತರದ ದಿನಗಳಲ್ಲಿ ಅದು ನಿಂತು ಹೋಗಿತ್ತು. ಈಗ ಪ್ರವಾಸೋದ್ಯಮ ಇಲಾಖೆ ಮೂಲಕ ಈ ಪುನಃಶ್ಚೇತನ ಕಾರ್ಯಗಳು ನಿರಂತರ ನಡೆಯುತ್ತಿವೆ. ಲಕ್ಕುಂಡಿ ಮಾದರಿಯಲ್ಲಿ ರಾಜ್ಯಾದ್ಯಂತ ಕಾರ್ಯಗಳು ನಡೆಯಲಿವೆ ಎಂದು ಹೇಳಿದರು.

ಪ್ರಾಚ್ಯಾವಶೇಷಗಳು ದೊರೆತ ಸ್ಥಳದ ಜಾಗ ಮತ್ತು ಮನೆಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದವರಿಗೆ ಇದೇ ವೇಳೆ ಅವರು ಧನ್ಯವಾದ ಅರ್ಪಿಸಿದರು.

ಉತ್ಖನನ ಕಾರ್ಯಕ್ಕೆ ಚಾಲನೆ:

ಇದಕ್ಕೂ ಮೊದಲು ಅವರು ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪ್ರಾಚೀನ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಾಲಿನಲ್ಲಿ ಕೈ ತೊಳೆದು ಬೆಳ್ಳಿ ಹಾರೆಯಿಂದ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದರು.

ಉತ್ಖನನ ಪ್ರಾರಂಭಿಸುವ ಪೂರ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಬೆಳ್ಳಿಯ ಬಿಂದಿಗೆಯಲ್ಲಿದ್ದ ಹಾಲನ್ನು ಸಿಎಂ ಕೈಗೆ ಹಾಕಿದರು, ಇದಕ್ಕೆ ನರಗುಂದ ಶಾಸಕ ಸಿ.ಸಿ.ಪಾಟೀಲ ಸಾಥ್ ನೀಡಿದರು. ಹಾಲಿನಿಂದ ಕೈ ತೊಳೆದ ಸಿಎಂ, ನಂತರ ಬೆಳ್ಳಿಯಿಂದ‌ ನಿರ್ಮಿಸಲಾದ ಹಾರೆಯಿಂದ ನೆಲ ಅಗೆಯುವ ಮೂಲಕ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದರು. ಬಳಿಕ, ಪಕ್ಕದ ಆವರಣದಲ್ಲಿ ಸಂಗ್ರಹಿಸಲಾದ ಪ್ರಾಚ್ಯ ವಸ್ತುಗಳನ್ನು ವೀಕ್ಷಿಸಿ, ಲಕ್ಕುಂಡಿಯ ಶ್ರೀಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.ಬಾಕ್ಸ್:

ಗಮನ ಸೆಳೆದ ಬೆಳ್ಳಿ ಸಾಮಗ್ರಿ:

ವಿಶೇಷವಾಗಿ ಬೆಳ್ಳಿಯಲ್ಲಿ ವಿನ್ಯಾಸಗೊಳಿಸಿದ ಗುದ್ದಲಿ, ಸಲಕಿ, ತ್ಯಾಪಿ, ಪಿಕಾಸಿ, ಹಾರೆ ಕೋಲು, ಮಣ್ಣು ತುಂಬುವ ಬುಟ್ಟಿ ಸೇರಿದಂತೆ ದೇವಸ್ಥಾನ ನಿರ್ಮಾಣಕ್ಕೆ ಬಳಸುವ ಸಾಮಗ್ರಿಗಳಿಂದಲೇ ಉತ್ಖನನ ಕಾರ್ಯಕ್ರಮಕ್ಕೆ‌ ಚಾಲನೆ ನೀಡಲಾಯಿತು. ಬಳಿಕ, ಆ ಎಲ್ಲ ವಸ್ತುಗಳನ್ನು ಸಿದ್ದರಾಮಯ್ಯ ಅವರಿಗೆ ನೆನಪಿನ ಕಾಣಿಕೆ ರೂಪದಲ್ಲಿ ನೀಡಲಾಯಿತು.ಬಾಕ್ಸ್‌;

ಉತ್ಖನನ ಉದ್ದೇಶ:

ಲಕ್ಕುಂಡಿ ಈ ಹಿಂದೆ ಚಾಲುಕ್ಯರ ರಾಜಧಾನಿಯಾಗಿತ್ತು. ಅಲ್ಲದೆ, ಹೊಯ್ಸಳರ ಆಡಳಿತದ ಪ್ರಭಾವಕ್ಕೂ ಒಳಗಾಗಿತ್ತು. ಜೊತೆಗೆ, 10ನೇ ಶತಮಾನದಲ್ಲಿಯೇ ಟಂಕಸಾಲೆ ನಿರ್ಮಾಣದೊಂದಿಗೆ ಪ್ರಮುಖ ವಾಣಿಜ್ಯ ನಗರವಾಗಿಯೂ ಅಭಿವೃದ್ಧಿ ಹೊಂದಿತ್ತು. ಅತ್ತಿಮಬ್ಬೆಯ ಲಕ್ಕುಂಡಿ ಶಾಸನ ಸೇರಿ ಕನ್ನಡ, ಸಂಸ್ಕೃತ ಭಾಷೆಯ ಹಲವು ಶಾಸನಗಳು ಇಲ್ಲಿ ಸಿಕ್ಕಿವೆ. ಹಿಂದೂ, ಜೈನ ಸ್ಮಾರಕಗಳು ಸೇರಿ ಕಲ್ಯಾಣ ಚಾಲುಕ್ಯ ಯುಗದ ಹಿಂದೂ ವಾಸ್ತುಶಿಲ್ಪದ ಅಧ್ಯಯನಕ್ಕೆ ಇದು ಪ್ರಮುಖ ಕೇಂದ್ರ. ನಂತರದ ದಿನಗಳಲ್ಲಿ ಪರಕೀಯರ ದಾಳಿ ಸೇರಿ ಹಲವು ಕಾರಣಗಳಿಂದ ಇಲ್ಲಿನ ಈ ಅವಶೇಷಗಳು ಹುದುಗಿ ಹೋಗಿವೆ. ಇವುಗಳ ಉತ್ಖನನ ನಡೆಸಿ, ಸಿಗುವ ಪ್ರಾಚ್ಯಾವಶೇಷಗಳನ್ನು ಸಂರಕ್ಷಿಸುವ ಕಾರ್ಯ ಇದಾಗಿದೆ.

+++ಲಕ್ಕುಂಡಿಯ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಇದನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸುವ ಗುರಿ ಇದರದು. ಇಲ್ಲಿನ ಉತ್ಖನನಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಇಲ್ಲಿ ಸಿಗುವ ಪ್ರಾಚ್ಯಾವಶೇಷಗಳ ಸಂರಕ್ಷಣೆಗೆ ತೆಲಂಗಾಣದ ವಾರಂಗಲ್‌ ನಲ್ಲಿರುವ ಮಾದರಿಯಲ್ಲಿ ಬಯಲು ವಸ್ತುಸಂಗ್ರಹಾಲಯ ಪ್ರಾರಂಭಿಸಲಾಗಿದೆ. 2024ರ ನವೆಂಬರ್‌ 22-24ರವರೆಗೆ ಲಕ್ಕುಂಡಿಯಲ್ಲಿ ನಡೆದ ಪ್ರಾಚ್ಯಾವಶೇಷ ಸಂಗ್ರಹ ಅಭಿಯಾನದಲ್ಲಿ 1,500 ಪ್ರಾಚ್ಯಾವಶೇಷಗಳು ಸಿಕ್ಕಿವೆ. ಹೀಗಾಗಿ, ಈ ಪ್ರಾಚ್ಯಾವಶೇಷಗಳ ಉತ್ಖನನ ನಡೆಸಿ, ಸಂಗ್ರಹಿಸುವುದು ಇದರ ಉದ್ದೇಶ. ಇಲ್ಲಿನ ಸ್ಮಾರಕಗಳ ಸಮೂಹವನ್ನು ವಿಶ್ವಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರ್ಪಡೆಗೊಳಿಸಲು ಯತ್ನ ಕೂಡ ನಡೆದಿದೆ.ಕೋಟ್‌:

ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಈ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ರಾಜ್ಯದ ಪಾರಂಪರಿಕ ಸಂಪತ್ತನ್ನು ಸಂರಕ್ಷಿಸುವ ದಿಸೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ.

ಶಿಕ್ಷಣ, ಅನ್ನ, ಆರೋಗ್ಯಕ್ಕೆ ಸರ್ಕಾರದ ಆದ್ಯತೆಶಿಕ್ಷಣ, ಅನ್ನ, ಆರೋಗ್ಯಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.ಮಂಗಳವಾರ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಕರ್ನಾಟಕ ಕುರುಬರ ಸಂಘ ಆಯೋಜಿಸಿದ್ದ ಕರ್ನಾಟಕ ಕುರುಬರ ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ತಿಳಿಸಿರುವ ಶಿಕ್ಷಣ, ಸಂಘಟನೆ, ಹೋರಾಟ ಎನ್ನುವ ಮಂತ್ರವನ್ನು ಎಲ್ಲರೂ ಪಾಲಿಸಬೇಕು. ಸಂವಿಧಾನ ಜಾರಿಯಾಗಿ 75 ವರ್ಷವಾದರೂ ಸಂಪೂರ್ಣ ಶಿಕ್ಷಣ ಸಾಧ್ಯವಾಗಿಲ್ಲ ಎಂದು‌‌ ಅವರು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಜಾರಿಗೆ ಮೊದಲೇ ಮುಂದಾಲೋಚನೆಯಿಂದ ಪತ್ತಿನ‌ ಸಹಕಾರ ಸಂಘ ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಶೂದ್ರ ವರ್ಗದ ಜನ‌ ಹಿಂದುಳಿಯಲು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದೇ ಪ್ರಮುಖ ಕಾರಣ. ಶೂದ್ರರು, ದಲಿತರು ಮಾತ್ರ ಶಿಕ್ಷಣ ಪಡೆಯುವಂತಿರಲಿಲ್ಲ. ಅಂಬೇಡ್ಕರ್ ಅವರ ಜೀವಮಾನದ ಹೋರಾಟವೇ ಈ‌ ಅಸಮಾನತೆ ಅಳಿಸುವುದಾಗಿತ್ತು. ಇದಕ್ಕೆ ಶಿಕ್ಷಣವೇ ಪ್ರಮುಖ‌ ಅಸ್ತ್ರ ಎಂದು ಅಂಬೇಡ್ಕರ್ ಮನಗಂಡಿದ್ದರು ಎಂದು ಹೇಳಿದರು.+++

ಶಿಕ್ಷಣ ದೊರಕದಿದ್ದರೆ ಸ್ವಾಭಿಮಾನಿಗಳಾಗಿ ಇರಲು ಸಾಧ್ಯವೇ ಇಲ್ಲ. ನನಗೆ ರಾಜಪ್ಪ ಎನ್ನುವ ಶಿಕ್ಷಕರು ಸಿಗದೇ ಹೋಗಿದ್ದರೆ ಶಿಕ್ಷಣವೂ ಸಿಗುತ್ತಿರಲಿಲ್ಲ, ನಾನು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ಕುರಿ, ಹಸು ಕಾಯ್ಕೊಂಡು ಇರಬೇಕಾಗಿತ್ತು. ಅದಕ್ಕೇ ನಮ್ಮ ಸರ್ಕಾರ ಶಿಕ್ಷಣ-ಆರೋಗ್ಯ-ಅನ್ನಕ್ಕೆ ಪ್ರಮುಖ ಆದ್ಯತೆ ನೀಡುತ್ತಿದೆ. ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿಯವರ ಆಶಯಗಳು ಈಡೇರಬೇಕಾದರೆ ಸರ್ವರಿಗೂ ಶಿಕ್ಷಣ ಸಿಗಬೇಕು. ಎಲ್ಲರಿಗೂ ಆರ್ಥಿಕ ಶಕ್ತಿ ಬರಬೇಕು ಎಂದರು.ಕೋಟ್:

ಗದಗ ನಗರದಲ್ಲಿ ನೂರು ವರ್ಷಗಳ ಹಿಂದೆಯೇ ಕುರುಬ ಸಮಾಜ ಸಂಘಟಿಸಿ ಸಹಕಾರ ಸಂಘ ಸ್ಥಾಪಿಸಿದ್ದು, ಅತ್ಯಂತ ಮುಂದಾಲೋಚನೆಯ ಸಾಮಾಜಿಕ ನ್ಯಾಯದ ಕಾರ್ಯವಾಗಿದೆ.- ಸಿದ್ದರಾಮಯ್ಯ, ಮುಖ್ಯಮಂತ್ರಿ.