ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಶತಃಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ:ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಶತಃಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆ ಕಾಂಗ್ರೆಸ್ಗೆ ಕಬ್ಬಿಣದ ಕಡಲೆ ಆಗಿದೆ. ಕಾಂಗ್ರೆಸ್ನ ನಾಗಾಲೋಟಕ್ಕೆ ಕಡಿವಾಣ ಬೀಳಲಿದೆ. ಫಲಿತಾಂಶ ಏನೇ ಇದ್ದರೂ, ಚುನಾವಣೆ ಬಳಿಕ ಸಿದ್ದರಾಮಯ್ಯ ರಾಜೀನಾಮೆ ಖಚಿತ ಎಂದರು.ಉಪ ಚುನಾವಣಾ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ನಲ್ಲಿ ಯಾವ ರೀತಿ ಭೂಕಂಪ ಆಗಲಿದೆ ಎಂಬುದನ್ನು ನಾನು ಈಗಲೇ ಹೇಳಲ್ಲ. ಅದು ಆ ಪಕ್ಷದ ಆಂತರಿಕ ವಿಚಾರ. ಆದರೆ, ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ, ಬಾಗಲಕೋಟೆಯಲ್ಲಿ ಚರಂತಿಮಠ ಗೆಲುವು ಸಾಧಿಸುತ್ತಾರೆ. ಇದಂತೂ ಸತ್ಯ ಎಂದರು.
ಎರಡು ಕ್ಷೇತ್ರಗಳಲ್ಲೂ ಆಡಳಿತ ವಿರೋಧಿ ಅಲೆಯನ್ನು ನೋಡುತ್ತಿದ್ದೇವೆ. ಮತದಾರರು ‘ಕಾಂಗ್ರೆಸ್ ನೋಟು, ಬಿಜೆಪಿಗೆ ಓಟು’ ಎಂಬ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರಿಗೆ ಆಕ್ರೋಶವಿದೆ. ‘ಸಾಕಪ್ಪಾ, ಸಾಕು ಕಾಂಗ್ರೆಸ್ ಸಹವಾಸ’ ಎನ್ನುವಷ್ಟರ ಮಟ್ಟಿಗೆ ಜನ ರೋಸಿಹೋಗಿದ್ದಾರೆ. ಹೆಲಿಕಾಪ್ಟರ್ ಬಿಟ್ಟು ನಡೆದುಕೊಂಡು ಬರುವಂತಹ ಅಭ್ಯರ್ಥಿ, ಶಾಸಕ ನಮಗೆ ಬೇಕೆನ್ನುತ್ತಿದ್ದಾರೆ ಎಂದರು.ನಮ್ಮ ಮುಖಂಡರೆಲ್ಲಾ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ದಾವಣಗೆರೆ ದಕ್ಷಿಣದ ಫಲಿತಾಂಶ ಬಂದ ನಂತರ ನಾನು ಮಾತನಾಡುತ್ತೇನೆ. ಈ ಸಲ ದಾವಣಗೆರೆಯಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಅಲ್ಲ, ತೆಲಂಗಾಣ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳೇ ಬಂದು ಪ್ರಚಾರ ನಡೆಸಿದರೂ ಬಿಜೆಪಿ ಎದುರು ಗೆಲ್ಲುವುದಕ್ಕೆ ಆಗುವುದಿಲ್ಲ ಎಂದು ವಿಜಯೇಂದ್ರ ಹೇಳಿದರು.
ನಾನು ಯಡಿಯೂರಪ್ಪನ ಮಗ, ಪಕ್ಷದ್ರೋಹ ಮಾಡೋನಲ್ಲ:ವಿಜಯೇಂದ್ರ ಅವರು ದಾವಣಗೆರೆ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಪರ ಸಾಫ್ಟ್ ಕಾರ್ನರ್ ಹೊಂದಿದ್ದಾರೆ ಎಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಪಕ್ಷದ ವಿಚಾರ ಬಂದಾಗ ಯಡಿಯೂರಪ್ಪ ಯಾವತ್ತೂ ಪಕ್ಷಕ್ಕೆ ದ್ರೋಹ ಮಾಡಿಲ್ಲ, ಮಾಡುವುದೂ ಇಲ್ಲ. ನಾನು ಅದೇ ಯಡಿಯೂರಪ್ಪನವರ ಮಗ. ಯಾರು ಏನು ಬೇಕಾದರೂ ಹೇಳಲಿ, ಪಕ್ಷಕ್ಕೆ ದ್ರೋಹ ಬಗೆಯಲಾರೆ ಎಂದರು.
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ‘ಕಬಾಬ್ ಮೇ ಹಡ್ಡಿ’ ಎಂಬ ಅರಿವಾಗಿದೆ. ಕಾಂಗ್ರೆಸ್ನವರ ಬೂಟ್ ಪಾಲಿಶ್ ಮಾಡೋಕೆ ಮುಸಲ್ಮಾನರಿರೋದಾ ಅಂತ ಅದೇ ಜನ ಆಕ್ರೋಶಗೊಂಡಿದ್ದಾರೆ. ಈ ಬಾರಿ ಅಲ್ಪಸಂಖ್ಯಾತರು ಅದ್ಯಾವ ಪ್ರಮಾಣದಲ್ಲಿ ಕಾಂಗ್ರೆಸ್ಗೆ ಓಟು ಮಾಡುತ್ತಾರೆ ಎಂಬುದು ಮತ ಎಣಿಕೆ ಮುಗಿದ ನಂತರ ಗೊತ್ತಾಗಲಿದೆ ಎಂದು ಹೇಳಿದರು.