ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಅರೇಯೂರು ಗ್ರಾಮದಲ್ಲಿ ನಡೆದ ೧೪ ಕೋಟಿ ರು.ಗಳ ವೆಚ್ಚದ ಮಸಗೋಡು, ಅರೆಯೂರು, ಹೊಸಳ್ಳಿ, ಕಣಿವೆ ಮಾರ್ಗದ ರಸ್ತೆಗೆ ಶುಕ್ರವಾರ ಭೂಮಿಪೂಜೆಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜು ನೆರವೇರಿಸಿದರು.ನಂತರ ಮಾತನಾಡಿ, ಇಂದು ಭೂಮಿಪೂಜೆ ಮಾಡಿದ ರಸ್ತೆ ಕಾಮಗಾರಿ 3-4 ದಿನಗಳಲ್ಲಿ ಪ್ರಾರಂಭವಾಗಲಿದೆ. ೧೦೦ ದಿನಗಳ ಒಳಗೆ ಕಾಮಗಾರಿ ಮುಕ್ತಾಯಗೊಳಿಸಬೇಕಾಗಿದೆ. ಈ ಗ್ರಾಮಗಳ ರಸ್ತೆ ಕಾಮಗಾರಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ೧೪ ಕೋಟಿ ರು.ಗಳ ಅನುದಾನವನ್ನು ಸರ್ಕಾರ ನೀಡಿದೆ. ಗ್ರಾಮಸ್ಥರ ರಸ್ತೆ ಸಮಸ್ಯೆಯನ್ನು ಶಾಸಕರು ಅರ್ಥ ಮಾಡಿಕೊಂಡು ಅನುದಾನ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಕಳೆದ ೨೫ ವರ್ಷಗಳ ನಂತರ ಕೊಡಗಿನ ಜನತೆ ಡಾ.ಮಂತರ್ ಗೌಡ ಮತ್ತು ಎ.ಎಸ್.ಪೊನ್ನಣ್ಣ ಅವರನ್ನು ಆಯ್ಕೆ ಮಾಡಿದ್ದಾರೆ. ಇಬ್ಬರು ಶಾಸಕರ ಬೇಡಿಕೆಗಳನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪ್ರೀತಿಯಿಂದ ಈಡೆರಿಸುತ್ತಿದ್ದಾರೆ ಎಂದು ಹೇಳಿದರು.ಕೊಡಗಿನಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವುದರಿಂದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಿದೆ ಎಂದು ಶಾಸಕರು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕೊಡಗಿನ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ೧೦೦ ಕೋಟಿ ರು. ಗಳ ವಿಶೇಷ ಅನುದಾನ ನೀಡಿದ್ದಾರೆ ಎಂದರು.ಚುನಾವಣೆ ಪೂರ್ವ ಕಾಂಗ್ರೆಸ್ ಸರ್ಕಾರದ ನೀಡಿದ ಭರವಸೆಗಳಾದ ೫ ಗ್ಯಾರೆಂಟಿಗಳನ್ನು ಜಾರಿಗೆ ತಂದಿದೆ. ದೇಶದಲ್ಲೇ ಮಾದರಿ ಯೋಜನೆಗಳಾಗಿದ್ದು, ಬೇರೆ ರಾಜ್ಯಗಳಲ್ಲೂ ಗ್ಯಾರೆಂಟಿಗಳನ್ನು ಜಾರಿಗೆ ತರಲಾಗುತ್ತಿದೆ. ಆದರೆ ಬಿಜೆಪಿ ಬಿಟ್ಟಿ ಯೋಜನೆಗಳೆಂದು ಅಪಪ್ರಚಾರ ಮಾಡುತ್ತ ಫಲಾನುಭವಿಗಳನ್ನು ಅವಮಾನ ಮಾಡುತ್ತಿರುವುದು ತಪ್ಪು ಎಂದು ಹೇಳಿದರು.ರೈತರ ಸಿ ಆ್ಯಂಡ್ ಡಿ ಜಾಗದ ಸಮಸ್ಯೆಯನ್ನು ಮುಖ್ಯಮಂತ್ರಿಗಳು, ಕಂದಾಯ ಮತ್ತು ಅರಣ್ಯ ಸಚಿವರಿಗೆ ಮನವರಿಕೆ ಮಾಡಿಕೊಡುವಲ್ಲಿ ಜಿಲ್ಲೆಯ ಶಾಸಕರು ಯಶಸ್ವಿಯಾಗಿದ್ದಾರೆ. ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ. ರೈತರಿಗೆ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಲಿದೆ. ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಧೈರ್ಯ ತುಂಬಿದರು.ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಸಚಿವರು ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ. ರಸ್ತೆಗಾಗಿ ಗ್ರಾಮಸ್ಥರು ಅನೇಕ ಬಾರಿ ಹೋರಾಟ ಮಾಡಿದ್ದರು. ಗ್ರಾಮಸ್ಥರಿಗೆ ರಸ್ತೆ ಮಾಡಿಕೊಡುವ ಭರವಸೆ ನೀಡಿದ್ದೆ. ಈಗ ೧೪ ಕೋಟಿ ರು.ಗಳ ಅನುದಾನ ಕೊಟ್ಟು ಮಾತು ಉಳಿಸಿಕೊಂಡಿದ್ದೇನೆ ಎಂದು ಹೇಳಿದರು.
ಇದೇ ರಸ್ತೆಯ ಸೇತುವೆ ನಿರ್ಮಾಣಕ್ಕೆ ೩.೫೦ ಕೋಟಿ ರು. ಅನುದಾನ ಒದಗಿಸುತ್ತೇನೆ. ನೇರಳೆ ಗ್ರಾಮದ ರೈತರ ಹಲವು ದಶಕಗಳ ರಸ್ತೆ ಬೇಡಿಕೆ ಈಡೇರಿಸುತ್ತೇನೆ. ೩೫ ಲಕ್ಷ ರು. ಅನುದಾನ ಕಲ್ಪಿಸುತ್ತೇನೆ. ಸೋಮವಾರಪೇಟೆ ತೋಳೂರುಶೆಟ್ಟಳ್ಳಿ, ಕೂತಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಬ್ಬಿಣ ಸೇತುವೆ ಕಾಮಗಾರಿ ಪ್ರಾರಂಭವಾಗಿದೆ. ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗುತ್ತವೆ. ನನ್ನ ಕ್ಷೇತ್ರದ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನೋದ್ ಕುಮಾರ್, ಅಕ್ರಮ-ಸಕ್ರಮ ಸಮಿತಿ ಸದಸ್ಯ ಬಿ.ಬಿ.ಸತೀಶ್, ಅರೇಯೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಪಾಪಯ್ಯ, ಪ್ರಮುಖರಾದ ಕೆ.ಎಂ. ಲೋಕೇಶ್, ಎಸ್.ಎಂ. ಡಿಸಿಲ್ವಾ, ಎಚ್.ಆರ್. ಸುರೇಶ್, ಜನಾರ್ಧನ್, ಸಬಿತಾ ಚನ್ನಕೇಶವ, ಚಂದ್ರಿಕಾ ಕುಮಾರ್, ಜಲಜಾ ದಿನೇಶ್, ಅನಂತ್ಕುಮಾರ್, ಸುನಿಲ್ ಇದ್ದರು.;Resize=(128,128))