ಸಾರಾಂಶ
ರಾಮನಗರ: ವಿಪಕ್ಷಗಳು ಮಾತ್ರವಲ್ಲ ಸ್ವಪಕ್ಷಿಯರ ವಿರೋಧದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಾರ್ಥಕ್ಕಾಗಿ ಜಾತಿಗಣತಿ ಬಹಿರಂಗ ಪಡಿಸಲು ಮುಂದಾಗಿದ್ದಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ರಾಜ್ಯಾಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ ಟೀಕಿಸಿದರು.
ನಗರದ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ವೀರಶೈವ ಲಿಂಗಾಯತ ಮಹಾಸಂಗಮ ಮತ್ತು ಜಗದ್ಗುರು ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು, ಜಾತಿಗಣತಿ ಉದ್ದೇಶ ಸಮಾಜದಲ್ಲಿನ ಎಲ್ಲ ಜಾತಿಗಳಿಗೂ ಸಮಾನ ನ್ಯಾಯ ಸಿಗಬೇಕು ಎಂಬುದು ನೆಪ ಮಾತ್ರವಾಗಿದ್ದು, ಇದರಲ್ಲಿ ರಾಜಕಾರಣದ ಸ್ವಾರ್ಥ ಅಡಗಿದೆ. ರಾಜಕಾರಣಿಗಳು ಪಕ್ಷವನ್ನು ಒಡೆಯುವಂತೆ ಜಾತಿ ಗಣತಿ ಹೆಸರಿನಲ್ಲಿ ಜಾತಿ ಧರ್ಮಗಳನ್ನು ಒಡೆಯಲು ಮುಂದಾಗಿದ್ದಾರೆ. ಜಾತಿಗಣತಿಯನ್ನು ಎಲ್ಲರೂ ಬೇಡ ಎನ್ನುತ್ತಿದ್ದರೂ ಮುಖ್ಯಮಂತ್ರಿ ಬಹಿರಂಗ ಪಡಿಸುತ್ತೇನೆ ಎನ್ನುತ್ತಿರುವುದು ಏಕೆಂದು ತಿಳಿಯುತ್ತಿಲ್ಲ ಎಂದರು.ಸಮಾಜದವರು ಜಗದ್ಗುರು ಶ್ರೀ ರೇಣುಕಾಚಾರ್ಯ ಮತ್ತು ಬಸವಣ್ಣನವರ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ವಿನಾಕಾರಣ ಮೇಲುಕೀಳೆಂಬ ಕಿತ್ತಾಟ ಬೇಡ. ಸಮುದಾಯದ ಒಗ್ಗಟ್ಟು, ಅಭಿವೃದ್ಧಿಗೆ ಪೂರಕವಾಗಲಿದೆ. ನಾವು ಒಗ್ಗಟ್ಟು ಪ್ರದರ್ಶನ ಮಾಡಿದರೆ ಸರ್ಕಾರವೂ ನಮ್ಮ ಮಾತು ಕೇಳುತ್ತದೆ. ಈ ವಿಷಯದಲ್ಲಿ ಅಲ್ಪಸಂಖ್ಯಾತರು ಉತ್ತಮವಾಗಿದ್ದಾರೆ. ಆರ್ಡರ್ ಮಾಡಿ ಅವರ ಕೆಲಸ ಮಾಡಿಸಿಕೊಳ್ಳುತ್ತಾರೆ. ಸರ್ಕಾರವೂ ಅವರ ಮಾತನ್ನು ತೆಗೆದುಹಾಕುವುದಿಲ್ಲ. ಅವರನ್ನು ರಾಜಕಾರಣಿಗಳು ನಮ್ಮ ಬ್ರದರ್ ಎಂದು ಕರೆಯುತ್ತಾರೆ. ನಮ್ಮ ನಿಮ್ಮನ್ನು ಕರೆಯುತ್ತಾರೆಯೇ ಎಂದು ಪ್ರಶ್ನಿಸಿದರು.
ಎಲ್ಲರನ್ನೂ ಒಗ್ಗೂಡಿಸುವುದೇ ಧರ್ಮ. ಜಗತ್ತಿನ ಎಲ್ಲಾ ಸಮಾಜವೂ ದೇವರನ್ನು ನಂಬುತ್ತಾರೆ. ಪ್ರತಿ ಧರ್ಮದವರೂ ತಮಗೆ ತೊಂದರೆಯಾದಾಗ ದೇವರ ಮೊರೆ ಹೋಗುತ್ತಾರೆ. ಅನ್ಯ ಧರ್ಮವನ್ನು ಅಲ್ಲಗಳೆಯದೇ ನಮ್ಮ ಧರ್ಮವನ್ನು ಉಳಿಸಿ ಬೆಳೆಸೋಣ. ನಮ್ಮ ಮಕ್ಕಳಿಗೆ ಧರ್ಮದ ಬಗ್ಗೆ ಅರಿವು ಮೂಡಿಸಿ, ಎಲ್ಲರಿಗೂ ಧರ್ಮದ ತಿಳಿವಳಿಕೆ ಹೇಳಬೇಕು. ನಮ್ಮಲ್ಲಿ ಐಕ್ಯತೆ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಕೆಲವರು ವೈಯಕ್ತಿಕ ಲಾಭಕ್ಕೆ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಾರೆ. ನಿಮ್ಮ ಆಚರಣೆಗಳು ನಿಮ್ಮ ಮನೆಯೊಳಗಿರಲಿ, ಒಳಜಗಳವನ್ನು ಬೀದಿಗೆ ತರುವುದು ಬೇಡ. ಮಾನವ ಧರ್ಮಕ್ಕೆ ಜಯವಾಗಲಿ ಎಂದ ರೇಣುಕಾಚಾರ್ಯರು, ಇವ ನಮ್ಮವ ಎಂಬ ಬಸವಣ್ಣನವರ ತತ್ವವನ್ನು ಅಳವಡಿಸಿಕೊಳ್ಳಿ ಎಂದು ಹೇಳಿದರು.
ಸಮಾಜದಲ್ಲಿರುವ ಎಲ್ಲ ಸಮುದಾಯಗಳಲ್ಲಿಯೂ ಒಳಜಗಳ ಸಾಮಾನ್ಯ. ಅದು ತುಂಬಾ ಅಪಾಯಕಾರಿ. ಮನೆಯೊಳಗಿನ ಜಗಳವನ್ನು ಬೀದಿಗೆ ತರುವುದು ಬೇಡ. ನಮ್ಮ ಸಮುದಾಯದ ಪ್ರಗತಿಗೆ ನಾವೆಲ್ಲರೂ ಒಗ್ಗಟ್ಟಿನಿಂದಿರಬೇಕು. ಭಗವಂತನನ್ನು ಭಕ್ತನ ಕೈಯಲ್ಲಿಡುವ ಧರ್ಮವಿದ್ದರೆ ಅದು ನಮ್ಮಧರ್ಮ ಮಾತ್ರ. ನಮ್ಮ ಮಕ್ಕಳಿಗೆ ಧೀಕ್ಷೆ ಕೊಡಿಸುವ ಜತೆಗೆ ಧರ್ಮದ ಬಗ್ಗೆ ತಿಳಿವಳಿಕೆ ಮೂಡಿಸಬೇಕಿದೆ ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದರು.ಶ್ರೀವನಸಿರಿ ಶರಣಾಶ್ರಮದ ಸಂಸ್ಥಾಪಕ ಡಾ.ಶಂಕರ ಆರಾಧನಾ ಗೂರೂಜಿ ಮಾತನಾಡಿ, ಇಷ್ಟಲಿಂಗ ಪೂಜೆ ಎಲ್ಲಾ ಧರ್ಮದ ಹಿತಕ್ಕಾಗಿ ಮಾಡಲಾಗುತ್ತಿದೆ. ಎಲ್ಲಾ ಧರ್ಮಗಳು ಸಂತಸವಾಗಿರಲಿ ಎಂಬುದೇ ವೀರಶೈವ ಲಿಂಗಾಯತ ಧರ್ಮದ ಮೂಲ ಆಶಯವಾಗಿದೆ. ವೀರಶೈವ ಲಿಂಗಾಯತ ಧರ್ಮಾಚಾರಣೆಗಳು ಕಡಿಮೆಯಾಗಿದ್ದೇ ಎಲ್ಲಾ ಧರ್ಮದಲ್ಲಿ ಸಮಸ್ಯೆ ಗಳು ಹೆಚ್ಚಾಗಲು ಕಾರಣವಾಗಿದೆ ಎಂದರು.
ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ಜಿಲ್ಲಾಧ್ಯಕ್ಷ ಪೊಲೀಸ್ ರುದ್ರೇಶ್ ಮಾತನಾಡಿ, ಯುವ ಮತ್ತು ಮಹಿಳಾ ಘಟಕ ರಚಿಸಿ ಐದು ಸಾವಿರ ಸದಸ್ಯರನ್ನು ಮಾಡಿಕೊಂಡು ದೊಡ್ಡ ಮಟ್ಟದಲ್ಲಿ ಸಮಾವೇಶ ಆಯೋಜನೆ ಮಾಡೋಣ. ಹಿರಿಯರ ಮಾರ್ಗದಲ್ಲಿ ಸಂಘಟನೆಯನ್ನು ಬಲಪಡಿಸೋಣ ಎಂದು ತಿಳಿಸಿದರು.ಮುಖಂಡರಾದ ವಿದ್ವಾನ್ ಚಂದ್ರಶೇಖರಯ್ಯ, ನಿವೃತ್ತ ಪ್ರಾಂಶುಪಾಲ ಡಾ.ಮಹದೇವಯ್ಯ, ಮುಖಂಡರಾದ ಪುಷ್ಪಲತಾ, ರಾಜಶೇಖರ್ ಕುಮಾರ್, ಶಿವಲಿಂಗಪ್ರಸಾದ್, ಮಹದೇವಶಾಸ್ತ್ರಿ, ಸುಧಾರಾಣಿ,ಸುನೀತಾ ಮತ್ತಿತರರು ಉಪಸ್ಥಿತರಿದ್ದರು.
ಬಾಕ್ಸ್ .....................ಪದಾಧಿಕಾರಿಗಳ ಆಯ್ಕೆ
ವಿಶ್ವ ವೀರಶೈವ ಲಿಂಗಾಯತಿ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಪೊಲೀಸ್ ರುದ್ರೇಶ್, ಜಿಲ್ಲಾ ಗೌರವಾಧ್ಯಕ್ಷರಾಗಿ ಮಹದೇವಯ್ಯ, ಉಪಾಧ್ಯಕ್ಷರಾಗಿ ಶಾಂತಪ್ಪ ಕೊಡಿಯಾಲ್, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆಯಾಗಿ ಪುಷ್ಪಲತಾ, ರಾಮನಗರ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಸುಧಾರಾಣಿ ಆಯ್ಕೆಯಾಗಿದ್ದಾರೆ ಎಂದು ವಿಶ್ವ ವೀರಶೈವ ಲಿಂಗಾಯತ ಒಕ್ಕೂಟದ ರಾಜ್ಯಾಧ್ಯಕ್ಷ ಜ್ಯೋತಿ ಪ್ರಕಾಶ್ ಮಿರ್ಜಿ ಪ್ರಕಟಿಸಿದರು.ಕೋಟ್ .............
ಯುವ ಮತ್ತು ಮಹಿಳಾ ಘಟಕಗಳನ್ನು ರಚಿಸಿ ಐದು ಸಾವಿರ ಸದಸ್ಯರನ್ನು ಸೇರಿಸಿಕೊಂಡು ದೊಡ್ಡ ಮಟ್ಟದಲ್ಲಿ ಸಮಾವೇಶ ಆಯೋಜನೆ ಮಾಡೋಣ. ಹಿರಿಯರ ಮಾರ್ಗದಲ್ಲಿ ಸಂಘಟನೆಯನ್ನು ಬಲಪಡಿಸೋಣ. ಶೀಘ್ರದಲ್ಲಿಯೇ ಬೃಹತ್ ಸಮಾವೇಶ ಆಯೋಜಿಸಲಾಗುವುದು.- ಪೊಲೀಸ್ ರುದ್ರೇಶ್, ಜಿಲ್ಲಾಧ್ಯಕ್ಷರು, ವೀರಶೈವ ಲಿಂಗಾಯತ ಒಕ್ಕೂಟ
12ಕೆಆರ್ ಎಂಎನ್ 2.ಜೆಪಿಜಿರಾಮನಗರದ ಬಸವೇಶ್ವರ ಪ್ರಾರ್ಥನಾ ಮಂದಿರದಲ್ಲಿ ಆಯೋಜಿಸಿದ್ದ ವಿಶ್ವ ವೀರಶೈವ ಲಿಂಗಾಯತ ಮಹಾಸಂಗಮ ಮತ್ತು ಜಗದ್ಗುರು ಶ್ರೀ ರೇಣುಕಾಚಾರ್ಯರ ಯುಗಮಾನೋತ್ಸವ ಜಯಂತಿ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.