ಕಾರ್ಕಳ: ಸಿಎಂ ಸಿದ್ದರಾಮಯ್ಯ ಅವರ ಕಾರ್ಕಳ ಭೇಟಿ ಬಳಿಕ ಬ್ಯಾನರ್ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಾರ್ಕಳ ಕಾಬೆಟ್ಟು ಪ್ರದೇಶದಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನಾ ಕಾರ್ಯಕ್ರಮದ ಮುನ್ನ ಹಾಕಲಾಗಿದ್ದ ಸರಕಾರಿ ಬ್ಯಾನರ್‌ನಲ್ಲಿ ಸ್ಥಳೀಯ ಶಾಸಕ ವಿ ಸುನೀಲ್ ಕುಮಾರ್ ಅವರ ಫೋಟೋ ಕಾಣಿಸದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಭವನಕ್ಕೆ ಅನುದಾನ ಒದಗಿಸಿದ್ದ ಅಂದಿನ ಸಚಿವ ಕೋಟ ಶ್ರಿನಿವಾಸ ಪೂಜಾರಿ ಹಾಗೂ ಶಾಸಕರ ಚಿತ್ರಗಳಿಲ್ಲದೆ ಬ್ಯಾನರ್ ಹಾಕಲಾಗಿದೆ ಎಂದು ಟೀಕೆ ಕೇಳಿಬಂದಿತ್ತು. ಘಟನೆ ಫೆ.24ರ ರಾತ್ರಿ ನಡೆದಿದ್ದು, ಮಾಹಿತಿ ತಿಳಿದ ಕೂಡಲೇ ಜಿಲ್ಲಾಡಳಿತ ಬ್ಯಾನರ್ ಬದಲಿಸಿದೆ. ಫೆ.25ರಂದು ಸಿಎಂ ಆಗಮಿಸಿದ ಸಂದರ್ಭದಲ್ಲಿ ಬ್ಯಾನರ್‌ನಲ್ಲಿ ಶಾಸಕ ಹಾಗೂ ಸಂಸದರ ಚಿತ್ರಗಳನ್ನು ಸೇರಿಸಲಾಗಿತ್ತು.ಇದರ ನಡುವೆಯೇ ಉದ್ಘಾಟನಾ ವೇದಿಕೆಯಲ್ಲಿ ಕೇವಲ ಕಾಂಗ್ರೆಸ್ ನಾಯಕರ ಭಾವಚಿತ್ರಗಳನ್ನು ಪ್ರದರ್ಶಿಸಲಾಗಿದೆ ಎಂದು ಬಿಜೆಪಿ ಆರೋಪಿಸಿ, ಇದು ಸರ್ಕಾರಿ ಕಾರ್ಯಕ್ರಮದ ಶಿಷ್ಟಾಚಾರಕ್ಕೆ ವಿರುದ್ಧ ಎಂದು ಖಂಡಿಸಿತ್ತು. ಅಗತ್ಯವಿದ್ದರೆ ಪ್ರತಿಭಟನೆ ನಡೆಸುವುದಾಗಿ ಹಾಗೂ ಜಿಲ್ಲಾಡಳಿತಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆ ನೀಡಿತ್ತು. ಸದ್ಯ ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.