ಸಾರಾಂಶ
ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ನಿಂದ ಜೂ. 16 ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸುತ್ತಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಮತ್ತು ವಿವಿಧ ಇಲಾಖಾ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಹಾಗೂ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯುವುದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ನಗರದ ಸುಗಮ ಸಂಚಾರಕ್ಕಾಗಿ ವಿವಿಧ ರಸ್ತೆ ಮಾರ್ಗ ಮತ್ತು ವಾಹನಗಳ ನಿಲುಗಡೆ ಸ್ಥಳ ಬದಲಾಯಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ಸುಗಳು ಸಂಚರಿಸುವ ಮಾರ್ಗ:
ಜೂ.16 ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಹರಿಹರ ಕಡೆಯಿಂದ ದೊಡ್ಡಬಾತಿ ಮುಖಾಂತರ ದಾವಣಗೆರೆಗೆ ಹಳೇ ಪಿ.ಬಿ.ರಸ್ತೆಯಲ್ಲಿ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ, ಕೆಎಸ್ಆರ್ಟಿಸಿ ಬಸ್ಸುಗಳು ಹರಿಹರ ನಗರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮೂಲಕ ಎನ್.ಎಚ್-48 ನಲ್ಲಿ ಚಲಿಸಿ ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಆವರಗೆರೆ ಮಾರ್ಗವಾಗಿ ಬಂದು ನೂತನವಾಗಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗದಲ್ಲಿ ಚಲಿಸಬೇಕು.
ಚಿತ್ರದುರ್ಗ ಮತ್ತು ಸಂತೆಬೆನ್ನೂರು ಮಾರ್ಗವಾಗಿ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳು ಬಾಡಾ ಕ್ರಾಸ್ ಮೂಲಕ ದಾವಣಗೆರೆ ನಗರಕ್ಕೆ ಅವರಗೆರೆ ಮಾರ್ಗವಾಗಿ ಬಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಅದೇ ಮಾರ್ಗವಾಗಿ ಮರಳಿ ಬಾಡಾ ಕ್ರಾಸ್ ಮೂಲಕ ಸಂಚರಿಸುವುದು. ಜಗಳೂರು ಮತ್ತು ಕಂಚಿಕೆರೆ ಮಾರ್ಗವಾಗಿ ಕಾರ್ಯಕ್ರಮಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳು ನೇರವಾಗಿ ಅರಳಿಮರ ಮತ್ತು ವೆಂಕಟೇಶ್ವರ ಸರ್ಕಲ್ಗೆ ಆಗಮಿಸದೇ ಬೇತೂರು ಹಳ್ಳದ ಹತ್ತಿರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಹಾಗೂ ಹತ್ತಿಸಿಕೊಂಡು ಅಲ್ಲಿಂದಲೇ ವಾಪಾಸ್ ಹೊರಡುವುದು.
ಚನ್ನಗಿರಿ ಕಡೆಯಿಂದ ಹದಡಿ ರಸ್ತೆ ಮೂಲಕ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೆಎಸ್ಆರ್ಟಿಸಿ ಬಸ್ಸುಗಳು ಹದಡಿ ಅಂಡರ್ ಪಾಸ್ ಮೂಲಕ ಹದಡಿ ರಸ್ತೆಯ ಮಾಗನೂರು ಬಸಪ್ಪ ಮೈದಾನದಲ್ಲಿ ಪ್ರಯಾಣಿಕರನ್ನು ಇಳಿಸಿ, ಇಲ್ಲಿಂದಲೇ ವಾಪಸ್ ಹೋಗಬೇಕು.
ಎಲ್ಲಾ ತರಹದ ಭಾರಿ ಮತ್ತು ಲಘು ಗೂಡ್ಸ್ ವಾಹನಗಳು:
ಎಲ್ಲಾ ತರಹದ ಭಾರಿ ಮತ್ತು ಲಘು ಗೂಡ್ಸ್ ವಾಹನಗಳು ದಾವಣಗೆರೆ ನಗರದ ಹಳೇ ಪಿ.ಬಿ ರಸ್ತೆಯ ಆಯುರ್ವೇದಿಕ್ ಕಾಲೇಜಿನಿಂದ ಡಿಸಿಎಂ ಅಂಡರ್ ಬ್ರಿಡ್ಜ್ ವರೆಗೆ ಹಾಗೂ ನಗರದ ಹದಡಿ ರಸ್ತೆಯಲ್ಲಿ ಐ.ಟಿ.ಐ ಕಾಲೇಜ್ ಸರ್ಕಲ್ನಿಂದ ಜಯದೇವ ಸರ್ಕಲ್ ಕಡೆಗೆ ಚಲಾಯಿಸದಂತೆ ಹಾಗೂ ನಗರದ ಶಾಮನೂರು ರಸ್ತೆಯಲ್ಲಿ ಶಾಮನೂರು ಅಂಡರ್ ಬ್ರಿಡ್ಜ್ನಿಂದ ಲಕ್ಷ್ಮೀ ಫ್ಲೋರ್ ಮಿಲ್ ಮತ್ತು ಶಾರದಾಂಭ ಸರ್ಕಲ್ ಕಡೆಗೆ ಚಲಾಯಿಸಬಾರದು.
ಖಾಸಗಿ ಬಸ್ ನಿಲ್ದಾಣದ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಬಸ್ಗಳು ಈ ಬಸ್ ನಿಲ್ದಾಣದಿಂದ ಕಾರ್ಯ ನಿರ್ವಹಿಸದಂತೆ ಹಾಗೂ ಅವುಗಳು ಆ ದಿನ ಎಪಿಎಂಸಿ ಮತ್ತು ಮಾಗನೂರು ಬಸಪ್ಪ ಮೈದಾನದಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ವಾಹನಕ್ಕೆ ಪಾರ್ಕಿಂಗ್ ವ್ಯವಸ್ಥೆ
ಕಾರ್ಯಕ್ರಮದ ನಿಮಿತ್ತ ಆಗಮಿಸುವ ಎಲ್ಲಾ ಬಸ್ಗಳು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಹಾಗೂ ಅರುಣ ವೃತ್ತದಿಂದ ವಿನೋಬ ನಗರ 3ನೇ ಮುಖ್ಯ ರಸ್ತೆಯ ಎಡ ಭಾಗದಲ್ಲಿ ಹಾಗೂ ನಗರದ ಪುಷ್ಪಾಂಜಲಿ ಚಿತ್ರಮಂದಿರದಿಂದ ಈರುಳ್ಳಿ ಮಾರ್ಕೇಟ್ ವರೆಗೆ ರೈಲ್ವೆ ಹಳಿ ಪಕ್ಕದಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ಬಸ್ಗಳನ್ನು ನಿಲ್ಲಿಸಬೇಕು.
ಎಲ್ಲಾ ದ್ವಿಚಕ್ರ ವಾಹನಗಳು ದಾವಣಗೆರೆ ನಗರದ ಬೀರಲಿಂಗೇಶ್ವರ ದೇವಾಸ್ಥಾನದ ಆವರಣ ಹಾಗೂ ಆರ್.ಎಲ್. ಲಾ ಕಾಲೇಜ್ ಹಿಂಭಾಗದ ಮೈದಾನದಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು. ನಾಲ್ಕು ಚಕ್ರದ ವಾಹನಗಳು ಅರುಣ ವೃತ್ತದ ಬಳಿ ಇರುವ ಹೊಳೆಹೊನ್ನೂರು ತೋಟದ ಖಾಲಿ ಜಾಗದಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.