ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಗೆ ಮುಖ್ಯಮಂತ್ರಿ ಆಗಮಿಸುತ್ತಿರುವುದು ನಮಗೆ ಸಿಕ್ಕ ಗೌರವ. ಇದರಲ್ಲಿ ಯಾವುದೇ ಇಲಾಖೆ ಅಧಿಕಾರಿಗಳು ಅಥವಾ ನೌಕರರು ಬೇಜವಾಬ್ದಾರಿತನ ತೋರಿದರೆ ಸಹಿಸುವುದಿಲ್ಲ. ಪ್ರತಿಯೊಬ್ಬರೂ ಸಂಪೂರ್ಣ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅಧಿಕಾರಿಗಳಿಗೆ ಆದೇಶಿಸಿದರು.ಜೂ.೮ ರಂದು ಮಾಲೂರು ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಸಾಧನಾ ಸಮಾವೇಶ, ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನ್ಯಾಯಾಂಗ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಿಎಂ ಕಾರ್ಯಕ್ರಮದ ಸಿದ್ಧತೆಯಲ್ಲಿ ಕೆಲವು ಇಲಾಖೆಗಳ ನಿರಾಸಕ್ತಿ ಗಮನಿಸಿದ ಜಿಲ್ಲಾಧಿಕಾರಿ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ನಮಗೆ ಜವಾಬ್ದಾರಿ ವಹಿಸಿಲ್ಲ, ನಾವ್ಯಾಕೆ ಬರಬೇಕು, ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬ ಧೋರಣೆಯನ್ನು ಯಾವುದೇ ಅಧಿಕಾರಿಗಳು ತಾಳಬಾರದು. ಜಿಲ್ಲಾಡಳಿತದ ಪ್ರತಿಯೊಂದು ವಿಭಾಗದ ಅಧಿಕಾರಿಗಳು ಮತ್ತು ನೌಕರರು ಇದರಲ್ಲಿ ಸಂಪೂರ್ಣವಾಗಿ ಭಾಗಿಯಾಗಬೇಕು. ಜನರನ್ನು ಸುಮ್ಮನೆ ಕರೆತಂದು ನಿಲ್ಲಿಸುವುದಲ್ಲ, ಅವರಿಗೆ ಸರಿಯಾದ ಸೌಲಭ್ಯ ಸಿಗುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ವಿವಿಧ ಯೋಜನೆಗಳಡಿ ಒಟ್ಟು ೨೬,೬೨೭ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವ ಗುರಿ ಹೊಂದಲಾಗಿದೆ. ಸಮಾವೇಶದ ಒಟ್ಟು ಯೋಜನೆಗಳ ಅಂದಾಜು ವೆಚ್ಚ ೨,೦೭೭ ಕೋಟಿ ರು.ಗೂ ಅಧಿಕವಾಗಿದೆ ಎಂದರು.ಮಾಲೂರು ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ ೨,೨೦೦ ನಿವೇಶನಗಳ ಲೇಔಟ್ ಪ್ಲಾನ್ ಅಪ್ರೂವಲ್ ಮತ್ತು ನಿವೇಶನ ನಿಗದಿಯ ಪ್ರಗತಿ ಪರಿಶೀಲಿಸಿದ ಅವರು, ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿರುವ ಹಕ್ಕುಪತ್ರಗಳ ವಿತರಣೆ ಸಮಾವೇಶದೊಳಗೆ ಪೂರ್ಣಗೊಳಿಸಲು ಯುದ್ಧೋಪಾದಿಯಲ್ಲಿ ಕೆಲಸ ಮಾಡುವಂತೆ ಆದೇಶಿಸಿದರು. ಇದಕ್ಕೆ ನಗರಾಭಿವೃದ್ಧಿ ಕೋಶದಿಂದ ಶೇ.೪೦ರಷ್ಟು ಹಣ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಲಾಯಿತು.

ತಾಲೂಕಿನ ಪ್ರತಿ ನ್ಯಾಯಬೆಲೆ ಅಂಗಡಿಯಿಂದ ಕನಿಷ್ಠ ೧೦೦ ಜನರಂತೆ ಒಟ್ಟು ೧೦,೦೦೦ ಜನ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆತರಲು ಸಾರಿಗೆ ವ್ಯವಸ್ಥೆ ಮಾಡಲು ಸೂಚನೆ ನೀಡಲಾಯಿತು.

ನೋಂದಾಯಿತ ಕಾರ್ಮಿಕರಿಗೆ ವಿತರಿಸಲು ೧,೦೦೦ ಕಿಟ್‌ಗಳನ್ನು ಸಿದ್ಧಪಡಿಸಲಾಗಿದ್ದು, ಫಲಾನುಭವಿಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಡಿಸಿ ಆದೇಶಿಸಿದರು.ಗೃಹ ಆರೋಗ್ಯ ಯೋಜನೆಯಡಿ ಮನೆ ಬಾಗಿಲಿಗೆ ಚಿಕಿತ್ಸೆ ಪಡೆದ ಕನಿಷ್ಠ ೧,೦೦೦ ಜನರನ್ನು ಆಶಾ ಕಾರ್ಯಕರ್ತೆಯರ ಮೂಲಕ ಸಮಾವೇಶಕ್ಕೆ ಕರೆತರಲು ನಿರ್ದೇಶನ ನೀಡಲಾಯಿತು.ಜನರಿಗೆ ಸೌಲಭ್ಯ ವ್ಯವಸ್ಥೆ:

ಮಾಲೂರು ಶಾಸಕ ಕೆ.ವೈ. ನಂಜೇಗೌಡ ಮಾತನಾಡಿ, ಸಿಎಂ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರು, ನೆರಳು ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಜಿಲ್ಲಾಡಳಿತದೊಂದಿಗೆ ನಮ್ಮ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಲಿವೆ ಎಂದು ಭರವಸೆ ನೀಡಿದರು.ಸಭೆಯಲ್ಲಿ ಕೋಲಾರ ಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಎಡಿಸಿ ಎಸ್.ಎಂ. ಮಂಗಳ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್, ಜಿಪಂ ಉಪಕಾರ್ಯದರ್ಶಿ ಟಿ.ಕೆ. ರಮೇಶ್, ಎಸಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಮಾಲೂರು ತಹಸೀಲ್ದಾರ್ ರೂಪ ಇದ್ದರು.