ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಿದ್ದಾಪುರದ 2400 ಎಕರೆ ಬಿಬಿಟಿಸಿ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ವಿರುದ್ಧ ಕೊಡವರು ಜಾಗೃತರಾಗದಿದ್ದರೆ ಅಪಾಯ ಕಾದಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಎಚ್ಚರಿಸಿದ್ದಾರೆ.ಸಿದ್ದಾಪುರದ ಕಾಫಿ ತೋಟದ ಬೃಹತ್ ಭೂಪರಿವರ್ತನೆ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಭೂಪರಿವರ್ತನೆಗಳ ವಿರುದ್ಧ ಸಿಎನ್ಸಿ ಸಂಘಟನೆ ವತಿಯಿಂದ ಬಾಳೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಬಿಟಿಸಿ ಕಾಫಿ ತೋಟದಲ್ಲಿ ಒಂದು ಸಾವಿರ ಮರಗಳನ್ನು ಕಡಿಯಲು ಅನುಮತಿ ಪಡೆದು ಕೋಟ್ಯಾಂತರ ರು. ಬೆಲೆ ಬಾಳುವ ಸುಮಾರು 3- 4 ಸಾವಿರ ಮರಗಳನ್ನು ಹನನ ಮಾಡಲಾಗಿದೆ. ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.ಕಾಫಿ ತೋಟಗಳ ಭೂಪರಿವರ್ತನೆಯಿಂದ ಕೊಡಗಿನ ಎಲ್ಲ ಗ್ರಾಮಗಳು ನಾಶವಾಗುತ್ತಿವೆ. ಮಣ್ಣು ಅಗೆಯುವ ಕೆಲಸದಿಂದ ಬಹುವಾರ್ಷಿಕ ಜಲಮೂಲಗಳ ನರ ಕೇಂದ್ರಗಳು ಈಗಾಗಲೇ ಮುಚ್ಚಿವೆ. ಇದರಿಂದ ಕೊಡಗಿನ ಮೇಲಾಗುವ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕು. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಿದಾಗ ಮಾತ್ರ ಪವಿತ್ರ ಕೊಡವ ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.
ಆದಿಮಸಂಜಾತ ಕೊಡವರ ಹಕ್ಕುಗಳನ್ನು ಉಳಿಸಿಕೊಳ್ಳಲು, ರಕ್ಷಿಸಲು, ನಮ್ಮ ಅನುವಂಶಿಕ ಭೂಮಿ ಸಂರಕ್ಷಿಸಲು, ಮಾತೃ ಭೂಮಿ, ಶಾಶ್ವತವಾದ ದೀರ್ಘಕಾಲಿಕ ಜಲಸಂಪನ್ಮೂಲಗಳು, ನಯನ ಮನೋಹರ ಪರಿಸರ, ಭೂಗೋಳವನ್ನು ನೈಸರ್ಗಿಕವಾಗಿ ವಿಹಂಗಮ ಪರ್ವತಗಳು, ಬೆಟ್ಟಗಳು, ನಿತ್ಯಹರಿದ್ವರ್ಣದ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಜೈವಿಕ ವೈವಿಧ್ಯತೆ, ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಜಾನಪದ ಪರಂಪರೆ ಮತ್ತು ಭೂಮಿಯೊಂದಿಗೆ ಬೆಸೆದುಕೊಂಡಿರುವ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಘೋಷಣೆಯಾಗಬೇಕು ಎಂದರು.17ರಂದು ಸಿದ್ದಾಪುರದಲ್ಲಿ...:
ಬೃಹತ್ ಭೂಪರಿವರ್ತನೆ ವಿರುದ್ಧ 17 ರಂದು ಸಿದ್ದಾಪುರದಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ. ಮುಂದಿನ ದಿನಗಳಲ್ಲಿ ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಚೇರಂಬಾಣೆ, ಮೂರ್ನಾಡು, ಕಕ್ಕಬೆ, ನಾಪೋಕ್ಲು, ವಿರಾಜಪೇಟೆ, ಗೋಣಿಕೊಪ್ಪ, ತಿತಿಮತಿ, ಪೊನ್ನಂಪೇಟೆ, ಹುದಿಕೇರಿ, ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ ಮತ್ತಿತರೆಡೆ ಕೂಡ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಸಲಾಗುವುದು ಎಂದರು.ಪೋಡಮಾಡ ಜಾನಕಿ, ಮಾಪಂಗಡ ಯಮುನಾ, ಗಾಂಡಂಗಡ ಪ್ರತಿಮಾ, ಅಡ್ಡೇಂಗಡ ಪೊನ್ನಮ್ಮ, ಅಡ್ಡೇಂಗಡ ಗ್ರೀಷ್ಮಾ, ಮಲ್ಚಿರ ಕವಿತಾ ಬೋಜಪ್ಪ, ಮುಕ್ಕಾಟಿರ ಜಾನಕಿ ವಾಸು, ಅರ್ಮಣಮಾಡ ಮಮತಾ, ಕೊಕ್ಕಂಗಡ ಸ್ಮಿತ, ಅಡ್ಡೇಂಗಡ ಕಾವೇರಮ್ಮ, ಮಾಪಂಗಡ ಅಶೋಕ್, ಪೋಡಮಾಡ ಗಿರೀಶ್, ಕಾಂಡೇರ ಸುರೇಶ್, ಅಲ್ಮೇಂಗಡ ಬೋಸ್ ಮಂದಣ್ಣ, ಅಲ್ಮೇಂಗಡ ಪೊನ್ನಪ್ಪ, ಮಚ್ಚಮಾಡ ದೊರೆ ಉತ್ತಯ್ಯ, ಮೇಚಂಡ ಕಿಶು, ಚೆಕ್ಕೇರ ಸೂರ್ಯ ಅಯ್ಯಪ್ಪ, ಮತ್ತಿತರರು ಮಾನವ ಸರಪಳಿ ನಿರ್ಮಿಸಿ ಬೃಹತ್ ಭೂಪರಿವರ್ತನೆ ವಿರುದ್ಧ ಮತ್ತು ಕೊಡವ ಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
;Resize=(128,128))
;Resize=(128,128))