ಬಡವರ ಆರ್ಥಿಕ ಸಬಲತೆಗೆ ಸಹಕಾರ ಸಂಸ್ಥೆ ಅನುಕೂಲ

| Published : Nov 17 2024, 01:20 AM IST

ಬಡವರ ಆರ್ಥಿಕ ಸಬಲತೆಗೆ ಸಹಕಾರ ಸಂಸ್ಥೆ ಅನುಕೂಲ
Share this Article
  • FB
  • TW
  • Linkdin
  • Email

ಸಾರಾಂಶ

ಸಾವಿರಾರು ಸಹಕಾರ ಸಂಸ್ಥೆಗಳು ಇದೀಗ ಕೋಟ್ಯಂತರ ಜನರಿಗೆ ಸುಲಭ ಮಾರ್ಗದಲ್ಲಿ ಸಕಾಲಕ್ಕೆ ಸಾಲ ಸೌಲಭ್ಯ ಒದಗಿಸುತ್ತಿವೆ. ಇದರಿಂದ ಸಣ್ಣಪುಟ್ಟ ಉದ್ದಿಮೆದಾರರು, ಮಹಿಳೆಯರು ಸಾಲ ಪಡೆದು ಆರ್ಥಿಕವಾಗಿ ಸಬಲರಾಗುವ ಜತೆಗೆ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ.

ಧಾರವಾಡ:

ಬಡವರು, ಮಹಿಳೆಯರು, ಯುವಕರು, ಸಣ್ಣ ವ್ಯಾಪಾರ ನಡೆಸುವರು ಸಹ ಆರ್ಥಿಕವಾಗಿ ಸಬಲರಾಗಲು ಸಹಕಾರ ಕ್ಷೇತ್ರದ ಸಂಸ್ಥೆಗಳು ಸೂಕ್ತ ಮಾರ್ಗಗಳಾಗಿವೆ ಎಂದು ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟರು.

ತಾಲೂಕಿನ ನರೇಂದ್ರ ಗ್ರಾಮದಲ್ಲಿ ಶನಿವಾರ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಶಾಖೆ ಹಾಗೂ ನವೋದಯ ಸಂಘಗಳನ್ನು ಉದ್ಘಾಟಿಸಿದ ಅವರು, ಸಾವಿರಾರು ಸಹಕಾರ ಸಂಸ್ಥೆಗಳು ಇದೀಗ ಕೋಟ್ಯಂತರ ಜನರಿಗೆ ಸುಲಭ ಮಾರ್ಗದಲ್ಲಿ ಸಕಾಲಕ್ಕೆ ಸಾಲ ಸೌಲಭ್ಯ ಒದಗಿಸುತ್ತಿವೆ. ಇದರಿಂದ ಸಣ್ಣಪುಟ್ಟ ಉದ್ದಿಮೆದಾರರು, ಮಹಿಳೆಯರು ಸಾಲ ಪಡೆದು ಆರ್ಥಿಕವಾಗಿ ಸಬಲರಾಗುವ ಜತೆಗೆ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ಇತ್ತೀಚೆಗೆ ಸಹಕಾರ ಇಲಾಖೆ ಆರಂಭಿಸಿ, ಸಹಕಾರ ವಲಯದಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರ್ಯಕ್ರಮಗಳನ್ನು ರೂಪಿಸಿದೆ. ವಿಶ್ವಕರ್ಮ ಯೋಜನೆಯ ಮೂಲಕ ಸಣ್ಣ ಸಮುದಾಯಗಳ ಉದ್ಯೋಗಕ್ಕೆ ಆರ್ಥಿಕ ನೆರವು ನೀಡುತ್ತಿದೆ. ಇದರಿಂದ ಅನೇಕರಿಗೆ ಉದ್ಯೋಗ ಲಭಿಸಿದೆ ಎಂದರು.

ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ‌ಶಿಸ್ತು ಮತ್ತು ಪ್ರಾಮಾಣಿಕತೆ ಅತಿ ಮುಖ್ಯ. ಈ ದಿಸೆಯಲ್ಲಿ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಕಡಿಮೆ ಅವಧಿಯಲ್ಲಿಯೇ ನಾಲ್ಕು ಶಾಖೆಗಳನ್ನು ಹೊಂದಿರುವುದು ಸಹಕಾರ ಕ್ಷೇತ್ರದಲ್ಲಿನ ಭರವಸೆ ಹೆಚ್ಚಿಸಿದೆ ಎಂದ ಅವರು, ನರೇಂದ್ರ ಹಾಗೂ ಸುತ್ತಲಿನ ಗ್ರಾಮಗಳು ಸಹಕಾರಿಯ ಸದುಪಯೋಗ ಮಾಡಿಕೊಳ್ಳಬೇಕು ಎಂದು‌ ಬೆಲ್ಲದ ಹೇಳಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಸುಳ್ಳದ ಶಿವ ಸಿದ್ದರಾಮೇಶ್ವರ ಶಿವಾಚಾರ್ಯರು, ನರೇಂದ್ರ ಮಳೆಪ್ಪಜ್ಜನ ಮಠದ ಸಂಗಮೇಶ ಸ್ವಾಮೀಜಿ, ಗಾಮನಗಟ್ಟಿಯ ಮಡಿವಾಳೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಠೇವಣಿ ಪ್ರಮಾಣಪತ್ರ ಮತ್ತು ಸಾಲಪತ್ರಗಳನ್ನು ಗಣ್ಯರು ವಿತರಿಸಿದರು. ಕೆಸಿಸಿ ಬ್ಯಾಂಕ್ ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ, ನಿರ್ದೇಶಕ ಸಿದ್ದಪ್ಪ ಸಪ್ಪೂರಿ, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಸಿದ್ದಪ್ಪ ಪ್ಯಾಟಿ, ಮುಖಂಡರಾದ ಮಾಜಿ ಜಿಪಂ ಸದಸ್ಯರಾದ ನಿಜನಗೌಡ ಪಾಟೀಲ, ಪ್ರೇಮಾ ಕೊಮಾರದೇಸಾಯಿ, ನರೇಂದ್ರ, ಕುರುಬಗಟ್ಟಿ, ಯಾದವಾಡ, ಲೋಕೂರ ಗ್ರಾಪಂ ವ್ಯಾಪ್ತಿ ಜನತೆ ಇದ್ದರು. ಬ್ಯಾಂಕ್‌ ಸಿಇಒ ತೇಜಸ್ವಿ ನಾಯಕ ಇದ್ದರು. ಅಜ್ಜಪ್ಪ ಹೊರಕೇರಿ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಸ್ಥಾಪಕ ಮಲ್ಲಿಕಾರ್ಜುನ ಹೊರಕೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೆಂಕಟೇಶ ತೆಲಗರ ಸ್ವಾಗತಿಸಿದರು. ಆಶ್ಮಾ ನದಾಫ್ ನಿರೂಪಿಸಿದರು. ಶ್ವೇತಾ ದೊಡಮನಿ ವಂದಿಸಿದರು.