ಕಾಡಾನೆ ದಾಳಿಗೆ ತೆಂಗಿನ ಮರಗಳು ನಾಶ

| Published : Feb 26 2025, 01:01 AM IST

ಸಾರಾಂಶ

ಕನಕಪುರ: ಕಾಡಾನೆ ದಾಳಿಗೆ ತೆಂಗಿನ ಮರಗಳು ಧರೆಗುರುಳಿರುವ ಘಟನೆ ನಾರಾಯಣಪುರ ಮತ್ತು ಕೆರೆಮೇಗಳದೊಡ್ಡಿ ಗ್ರಾಮಗಳಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕನಕಪುರ: ಕಾಡಾನೆ ದಾಳಿಗೆ ತೆಂಗಿನ ಮರಗಳು ಧರೆಗುರುಳಿರುವ ಘಟನೆ ನಾರಾಯಣಪುರ ಮತ್ತು ಕೆರೆಮೇಗಳದೊಡ್ಡಿ ಗ್ರಾಮಗಳಲ್ಲಿ ಸೋಮವಾರ ರಾತ್ರಿ ನಡೆದಿದೆ.

ತಾಲೂಕಿನ ಕಸಬಾ ಹೋಬಳಿ ನಾರಾಯಣಪುರ ಗ್ರಾಮದ ನಾಚಿ ನಾಗರಾಜು ಮತ್ತು ಅವರ ಸಹೋದರ ಶ್ರೀನಿವಾಸ್‌ಗೆ ಸೇರಿದ 200 ತೆಂಗಿನ ಮರಗಳನ್ನು ಆನೆಗಳು ನಾಶಗೊಳಿಸಿವೆ. ಅಳ್ಳಿಮಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆ ಮೇಗಳದೊಡ್ಡಿ ಗ್ರಾಮದಲ್ಲಿ ಪುಟ್ಟಸ್ವಾಮಿಗೌಡ, ಪುಟ್ಟ ಮಾದೇಗೌಡ, ನಾರಾಯಣಗೌಡ, ಕೃಷ್ಣಪ್ಪಗೆ ಸೇರಿದ 150 ತೆಂಗಿನ ಮರಗಳು ಕಾಡಾನೆ ದಾಳಿಗೆ ನಾಶವಾಗಿವೆ.

ತೆಂಗಿನಕಲ್ಲು ಅರಣ್ಯ ಮತ್ತು ಬಿಳಿಕಲ್ ಬೆಟ್ಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ರಾತ್ರಿ ವೇಳೆ ರೈತರ ಜಮೀನುಗಳ ಮೇಲೆ ದಾಳಿ ಮಾಡುತ್ತಿವೆ. ಸೋಮವಾರ ರಾತ್ರಿ ತೆಂಗಿನ ತೋಟಕ್ಕೆ ನುಗ್ಗಿ ತೆಂಗಿನ ಗಿಡಗಳನ್ನು ಮನಬಂದಂತೆ ಮುರಿದು ನಾಶಗೊಳಿಸಿವೆ. ಮತ್ತೋಂದು ಕಡೆ ತೆಂಗಿನಕಲ್ಲು ಅರಣ್ಯದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಕೆರೆಮೇಗಳದೊಡ್ಡಿ ಗ್ರಾಮದ ರೈತರ ಜಮೀನುಗಳ ಮೇಲೆ ದಾಳಿ ಮಾಡಿ ತೆಂಗಿನ ಗಿಡಗಳನ್ನು ಮುರಿದು ನಾಶಗೊಳಿಸಿವೆ.

ಕಾಡಾನೆ ದಾಳಿಯಿಂದ ನಾಶಗೊಂಡಿರುವ ತೆಂಗಿನ ಗಿಡಗಳು 6ರಿಂದ 7 ವರ್ಷದವಾಗಿದ್ದು ಈಗಷ್ಟೇ ಫಸಲು ಬಿಡಲು ಪ್ರಾರಂಭಿಸಿದ್ದವು. ಸರ್ಕಾರ ನೀಡುವ ಅಲ್ಪ ಪರಿಹಾರದಿಂದ ರೈತರಿಗೆ ನಷ್ಟವಾಗುತ್ತಿದೆ. ಹಾಗಾಗಿ ವೈಜ್ಞಾನಿಕವಾಗಿ ಪರಿಹಾರ ಕೊಡಬೇಕು ಎಂದು ರೈತರು ಮನವಿ ಮಾಡಿದರು.

ಬೇಸಿಗೆ ಪ್ರಾರಂಭಕ್ಕೂ ಮುಂಚೆಯೇ ಕಾಡಾನೆ ಹಾವಳಿಗೆ ರೈತರ ಬೆಳೆಗಳಿಗೆ ನುಗ್ಗಲು ಶುರುವಚ್ಚಿಕೊಂಡಿವೆ. ಮುಂದೆ ಬೇಸಿಗೆಯಲ್ಲಿ ನೀರಿಗಾಗಿ ಹೊರಬರುವ ಕಾಡಾನೆಗಳು ರೈತರ ಬೆಳೆಗಳ ಮೇಲೆ ದಾಳಿ ಹೆಚ್ಚಾಗುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳು ನಾಶವಾಗಲಿವೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಕಾಡಾನೆ ದಾಳಿಯಿಂದ ಆಗುವ ಬೆಳೆ ನಷ್ಟಕ್ಕೆ ಪರಿಹಾರ ಕೊಡುವುದರ ಬದಲು ಸರ್ಕಾರ ಕಾಡಾನೆಗಳು ಹೊರಗೆ ಬರದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ರಾಜ್ಯ ಸರ್ಕಾರ ಮುಂದಿನ ಬಜೆಟ್ ನಲ್ಲಿ ಕಾಡಾನೆ ತಡೆಗೆ ಹೆಚ್ಚಿನ ಹಣ ಮೀಸಲಿಟ್ಟು ಕಾಡಾನೆಗಳು ಹೊರಗೆ ಬರದಂತೆ ತಡೆಗಟ್ಟಬೇಕೆಂಬುದು ರೈತರ ಒತ್ತಾಯವಾಗಿದೆ.

ಅರಣ್ಯ ಅಧಿಕಾರಿಗಳು ಕಾಡಾನೆ ದಾಳಿಯಿಂದ ತೆಂಗಿನ ಮರಗಳು ನಾಶವಾದ ರೈತರ ತೋಟಗಳಿಗೆ ಭೇಟಿ ನೀಡಿ ಕಾಡಾನೆ ದಾಳಿಯಿಂದ ನಾಶವಾಗಿರುವ ತೆಂಗಿನ ಗಿಡಗಳನ್ನು ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದು ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

ಕೆ ಕೆ ಪಿ ಸುದ್ದಿ 03:

ಕನಕಪುರ ತಾಲೂಕಿನ ನಾರಾಯಣಪುರ ಮತ್ತು ಅರೆಮೇಗಳದೊಡ್ಡಿ ಗ್ರಾಮಗಳಲ್ಲಿ ಕಾಡಾನೆ ದಾಳಿಗೆ ನಾಶವಾಗಿರುವ ತೆಂಗಿನ ಮರಗಳು.