ಸಾರಾಂಶ
ಹೊಳೆನರಸೀಪುರ: ತಾಲೂಕಿನ ಕಾಮೇನಹಳ್ಳಿಯ ಗ್ರಾಮಸ್ಥರಿಗೆ ಭಾನುವಾರ ಕರಾಳ ದಿನವಾಗಿದ್ದು, ಬಡ ರೈತರ ಜೀವನಕ್ಕೆ ಬೆನ್ನೆಲುಬಿನಂತಿದ್ದ ೪೦ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗೆ ಉರುಳಿ ಬಿದ್ದು, ರೈತರ ಬದುಕು ದುಸ್ಥರವಾಗಿದೆ. ಭಾನುವಾರ ಸಂಜೆ ಜೋರು ಗಾಳಿ, ಮಳೆಯು ಕೆಲವು ಪ್ರದೇಶಗಳಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜತೆಗೆ ಬಿಸಿಲ ಬೇಗೆಯಿಂದ ಬೆಂದು ಬಳಲುತ್ತಿದ್ದ ಜನರಿಗೆ ಮಳೆ ನಿರಾಳತೆ ಮೂಡಿಸಿದೆ. ಆದರೆ ಹಳೇಕೋಟೆ ಹೋಬಳಿಯ ಕಾಮೇನಹಳ್ಳಿಯಲ್ಲಿ ನಿವೃತ್ತ ಶಿಕ್ಷಕ ಜನಾರ್ದನಾಚಾರ್, ಅಣ್ಣಯ್ಯಣ್ಣನವರ ಪುತ್ರ ಸಣ್ಣಪ್ಪ, ಬೋರೇಗೌಡ ಪುತ್ರ ಸುರೇಶ, ಭೀಮೇಶ, ದೊಡ್ಡಯ್ಯ, ನಾಗರಾಜ್ ಹಾಗೂ ಇತರರ ೪೦ಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗೆ ಉರುಳಿ ಬಿದ್ದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಮೇನಹಳ್ಳಿಯ ಓಂಕಾರ ಮೂರ್ತಿ ಎಂಬುವರು ಮಾತನಾಡಿ, ಕಲ್ಪವೃಕ್ಷ ಧರೆಗೆ ಉರುಳಿವೆ. ಜತೆಗೆ ರೈತರ ಬದುಕು ರಸ್ತೆಗೆ ಬಿದ್ದಿದೆ. ಆದ್ದರಿಂದ ತಾಲೂಕು ಆಡಳಿತ ಅಗತ್ಯ ಕ್ರಮಕೈಗೊಂಡು ರೈತರಿಗೆ ಪರಿಹಾರ ಕೊಡಿಸುವ ಜತೆಗೆ ಅವರ ಬದುಕಿಗೆ ಆಸರೆಯಾಗಬೇಕಿದೆ ಎಂದು ವಿನಂತಿಸಿದ್ದಾರೆ.