ಗಜೇಂದ್ರಗಡದಲ್ಲಿ ಕರ ವಸೂಲಿ ಅಭಿಯಾನ: ₹13 ಲಕ್ಷ ಸಂಗ್ರಹ

| Published : Dec 17 2024, 01:01 AM IST

ಸಾರಾಂಶ

ಗಜೇಂದ್ರಗಡ ತಾಲೂಕಿನಾದ್ಯಂತ ಡಿ. ೧೨ರಂದು ಬೆಳಗ್ಗೆ ೬ ಗಂಟೆಯಿಂದ ಸಂಜೆ ೮ ಗಂಟೆ ವರೆಗೆ ನಡೆದ ಕರ ವಸೂಲಿ ಅಭಿಯಾನದಲ್ಲಿ ೧೩ ಗ್ರಾಪಂಗಳಲ್ಲಿ ₹೧೩ ಲಕ್ಷಕ್ಕೂ ಅಧಿಕ ತೆರಿಗೆ ಸಂಗ್ರಹಣೆ ಮಾಡಲಾಗಿದೆ.

ಗಜೇಂದ್ರಗಡ: ತಾಲೂಕಿನಾದ್ಯಂತ ಡಿ. ೧೨ರಂದು ಬೆಳಗ್ಗೆ ೬ ಗಂಟೆಯಿಂದ ಸಂಜೆ ೮ ಗಂಟೆ ವರೆಗೆ ನಡೆದ ಕರ ವಸೂಲಿ ಅಭಿಯಾನದಲ್ಲಿ ೧೩ ಗ್ರಾಪಂಗಳಲ್ಲಿ ₹೧೩ ಲಕ್ಷಕ್ಕೂ ಅಧಿಕ ತೆರಿಗೆ ಸಂಗ್ರಹಣೆ ಮಾಡಲಾಗಿದೆ.

ತಾಲೂಕಿನಲ್ಲಿ ತೆರಿಗೆ ವಸೂಲಿ ಕಡಿಮೆ ಹಿನ್ನೆಲೆ ಜಿಪಂ ಮತ್ತು ಗಜೇಂದ್ರಗಡ ತಾಪಂ ಸಹಯೋಗದಲ್ಲಿ ಡಿ. ೧೨ರಿಂದ ೧೪ರ ವರೆಗೆ ೩ ದಿನಗಳ ಕಾಲ ನಡೆದ ಕರ ವಸೂಲಿ ಅಭಿಯಾನದಲ್ಲಿ ₹೧೩೮೭೨೬೨ ಹಣ ತೆರಿಗೆ ಸಂಗ್ರಹಣೆ ಮಾಡಲಾಗಿದ್ದು, ಇದು ಎಲ್ಲರ ಗಮನ ಸೆಳೆಯುವ ಜತೆಗೆ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ. ಈ ಅಭಿಯಾನದಲ್ಲಿ ನಿಡಗುಂದಿ, ಗುಳಗುಳಿ, ಮುಶಿಗೇರಿ ಗ್ರಾಪಂಗಳಲ್ಲಿ ಶೇ. ೧೦೦ ಪ್ರಗತಿ ಸಾಧಿಸಿ ವಿಶೇಷ ಗಮನ ಸೆಳೆದಿವೆ.

ತೆರಿಗೆ ವಸೂಲಿ ಅಭಿಯಾನ: ತಾಲೂಕಿನಲ್ಲಿ ವಿಶೇಷ ಕರ ವಸೂಲಿ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್, ಡಿಇಒ, ವಾಟರ್ ಮ್ಯಾನ್‌ಗಳು, ಜಿಕೆಎಂ ಸೇರಿದಂತೆ ಗ್ರಾಪಂ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು.

ಕರ ವಸೂಲಿ ಅಭಿಯಾನದ ವಿಶೇಷತೆ: ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ಕನಿಷ್ಠ ೨೦೦ ಆಸ್ತಿ ಮಾಲೀಕರನ್ನು ಗುರುತಿಸಿ ಅವರಿಗೆ ತಗಾದೆ ನೋಟಿಸು ನೀಡಿ ತೆರಿಗೆ ವಸೂಲಿ ಮಾಡಬೇಕು. ತೆರಿಗೆ ಪಾತಿಸದೇ ಬಾಕಿ ಉಳಿಸಿಕೊಂಡಿರುವ ಮೊಬೈಲ್ ಟವರ್ ಕಂಪನಿಗಳಿಗೆ ನೋಟಿಸು ಜಾರಿ ಮಾಡಿ, ಸಂಪೂರ್ಣ ಮೊತ್ತ ಪಾವತಿಸಿಕೊಳ್ಳುವುದು. ತೆರಿಗೆ ಪಾವತಿ ಬಾಕಿ ಹೊಂದಿರುವ ಅಂಗಡಿ ಮಾಲೀಕರು, ಉದ್ದಿಮೆದಾರರು, ಸರ್ಕಾರಿ ನೌಕರರರಿಗೆ ನೋಟಿಸು ನೀಡಿ ಶೇ. ೧೦೦ರಷ್ಟು ಬಾಕಿ ವಸೂಲಿ ಮಾಡಲು ಸೂಚಿಸಲಾಗಿತ್ತು. ಅದರಂತೆ ಅಭಿಯಾನದ ದಿನದಂದು ಕರ ವಸೂಲಿ ಮಾಡಲಾಗಿದೆ.

ಅಭಿಯಾನಕ್ಕೆ ಮೇಲುಸ್ತುವಾರಿಗಳ ನಿಯೋಜನೆ: ಡಿ. ೧೨ರಂದು ನಡೆದ ಕರ ವಸೂಲಿ ಅಭಿಯಾನಕ್ಕೆ ಪ್ರತಿ ಗ್ರಾಪಂಗೆ ತಾಪಂ ಸಿಬ್ಬಂದಿಯನ್ನು ಮೇಲುಸ್ತುವಾರಿಗಳನ್ನಾಗಿ ನಿಯೋಜನೆ ಮಾಡಿ, ಅಭಿಯಾನದಲ್ಲಿ ಭಾಗವಹಿಸಿ, ಕರ ವಸೂಲಿ ಮಾಡುವಂತೆ ತಿಳಿಸಲಾಗಿತ್ತು. ಅದರಂತೆ ಎಲ್ಲ ಸಿಬ್ಬಂದಿ ಅಂದಿನ ದಿನ ಅಭಿಯಾನದಲ್ಲಿ ಭಾಗವಹಿಸಿ, ಕರ ವಸೂಲಿ ಮಾಡುವಲ್ಲಿ ಕೈಜೋಡಿಸಿ, ಅಧಿಕ ಪ್ರಮಾಣದಲ್ಲಿ ತೆರಿಗೆ ಸಂಗ್ರಹಣೆ ಮಾಡಲಾಗಿದೆ.ಜಿಪಂ ಹಾಗೂ ತಾಪಂ ವತಿಯಿಂದ ಕರ ವಸೂಲಿ ಅಭಿಯಾನ ಹಮ್ಮಿಕೊಳ್ಳಲು ಸೂಚಿಸಿತ್ತು. ಅದರಂತೆ ಡಿ. ೧೨ರಿಂದ ೧೪ರ ವರೆಗೆ ಅಭಿಯಾನ ಹಮ್ಮಿಕೊಂಡು, ₹೩,೪೪,೫೨೨ ಕರ ವಸೂಲಿ ಮಾಡಲಾಗಿದೆ. ಈ ಅಭಿಯಾನದಲ್ಲಿ ಉದ್ದಿಮೆದಾರರು, ಸರ್ಕಾರಿ ನೌಕರರು, ಅಂಗಡಿಕಾರರು ೩ ವರ್ಷದಿಂದ ಬಾಕಿ ಇರುವ ಮನೆಗಳನ್ನು ಗುರುತಿಸಿ, ಅವರಿಗೆ ನೋಟಿಸ್ ನೀಡಿ ವಸೂಲಿ ಮಾಡಲಾಗಿದೆ. ಗುರಿ ಸಾಧಿಸಿರುವುದು ಖುಷಿ ತಂದಿದೆ ಎಂದು ಮುಶಿಗೇರಿ ಪಿಡಿಒ ಮಂಜುನಾಥ ಮೇಟಿ ಹೇಳಿದರು.ಮುಶಿಗೇರಿ ಗ್ರಾಮ ಪಂಚಾಯಿತಿಯಲ್ಲಿ ಕರ ವಸೂಲಿ ಅಭಿಯಾನ ಮಾಡಿ ನಮ್ಮ ಪಿಡಿಒ ನೇತೃತ್ವದ ತಂಡ ₹೩.೪೪ ಲಕ್ಷಕ್ಕೂ ಅಧಿಕ ತೆರಿಗೆ ಸಂಗ್ರಹಣೆ ಮಾಡಿ ಪಂಚಾಯತಿಯ ಆದಾಯ ಹೆಚ್ಚಿಸಿದ್ದಾರೆ. ನಮ್ಮ ಎಲ್ಲ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡಿದ್ದು, ಅವರಿಗೆ ಅಭಿನಂದನೆಗಳು ಎಂದು ಮುಶಿಗೇರಿ ಗ್ರಾಪಂ ಅಧ್ಯಕ್ಷ ರಾಜಶೇಖರ ಮಾಲಗಿತ್ತಿ ಹೇಳಿದರು.