ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೇಜರ್‌ ಆರ್ಟಿರಿಯಲ್‌ ರಸ್ತೆಯು (ಎಂಎಆರ್‌) ವರ್ಷದ 365 ದಿನವೂ ಹಳದಿ, ನೇರಳೆ, ಗುಲಾಬಿ ಸೇರಿ ವಿವಿಧ ಹೂವುಗಳಿಂದ ಕಂಗೊಳಿಸುವಂತೆ ಮಾಡಲು ಅನ್‌ಬಾಕ್ಸಿಂಗ್‌ಬಿಎಲ್‌ಆರ್‌ ಸಂಸ್ಥೆ ‘ಬ್ಲೂಮ್‌ ಅವೆನ್ಯೂ’ ಎಂಬ ಬೃಹತ್‌ ಹಸಿರೀಕರಣ ಯೋಜನೆಗೆ ಚಾಲನೆ ನೀಡಿದೆ.

ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡ ಲೇಔಟ್‌ನ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯನ್ನು ಸಂಪರ್ಕಿಸುವ ಮೇಜರ್‌ ಆರ್ಟಿರಿಯಲ್‌ ರಸ್ತೆಯ (ಎಂಎಆರ್‌) 8 ಕಿ.ಮೀ. ವ್ಯಾಪ್ತಿಯಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದೆ. ರಾಜ್ಯ ಸರ್ಕಾರದ 15 ಲಕ್ಷ ಸಸಿ ನೆಟ್ಟು ಗಿನ್ನಿಸ್‌ ವಿಶ್ವದಾಖಲೆ ನಿರ್ಮಿಸುವ ಅಭಿಯಾನದ ಭಾಗವಾಗಿ, ಬಿಡಿಎ ಸಹಯೋಗದಲ್ಲಿ ಆರು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಗಿದೆ.

‘ಬ್ಲೂಮ್ ಅವೆನ್ಯೂ’ ಯೋಜನೆಯು ಹಲವು ವಿಶೇಷ ಅಂಶಗಳನ್ನು ಒಳಗೊಂಡಿದೆ. ಸ್ಥಳೀಯ ಹೂಬಿಡುವ ಏಳು ವಿಭಿನ್ನ ಜಾತಿಯ ಮರಗಳನ್ನು ಗುರುತಿಸಲಾಗಿದೆ. ಇದರಲ್ಲಿ ಬಹುತೇಕ ಸ್ಥಳೀಯ ಮತ್ತು ಕೆಲ ವಿದೇಶಿ ಮರಗಳಾಗಿವೆ. ಸಂಪಿಗೆ, ಬೌಹಿನಿಯಾ (ಕಂಚುವಾಳ), ಕಾರ್ವಿಯಾ ಸೆಬೆಸ್ಟೇನಾ, ಹೊಳೆದಾಸವಾಳ, ಟ್ಯಾಬೆಬುಯಾ ಇತ್ಯಾದಿ ತಳಿಗಳ ಸಸಿಗಳನ್ನು ಬಣ್ಣಗಳ ಆಧಾರದಲ್ಲಿ ಕ್ರಮಬದ್ಧವಾಗಿ ಆಯ್ಕೆ ಮಾಡಲಾಗಿದೆ. ಇದರ ಪರಿಣಾಮವಾಗಿ ವರ್ಷಪೂರ್ತಿ ರಸ್ತೆಯ ಯಾವುದಾದರೂ ಭಾಗದಲ್ಲಿ ಹೂಗಳು ಅರಳುವಂತಾಗಲಿದೆ.

ಅಲ್ಲದೆ, ಮರಗಳು ಬೆಳೆದಂತೆ ಪಕ್ಷಿಗಳು ಹಾಗೂ ಚಿಟ್ಟೆಗಳನ್ನು ಆಕರ್ಷಿಸುವ ಪರಿಸರ ವ್ಯವಸ್ಥೆ ನಿರ್ಮಿಸುವ ಗುರಿಯನ್ನೂ ಯೋಜನೆ ಹೊಂದಿದೆ. ಸಸಿಗಳ ಸಂರಕ್ಷಣೆಗಾಗಿ ನೀರುಣಿಕೆ, ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನೊಳಗೊಂಡಂತೆ ಮೂರು ವರ್ಷಗಳ ಕಾಲ ವಿಶೇಷ ಪಾಲನಾ ಯೋಜನೆಯನ್ನೂ ರೂಪಿಸಲಾಗಿದೆ.


ಈ ಯೋಜನೆಯು ಬೆಂಗಳೂರಿನ ಸಸ್ಯಶಾಸ್ತ್ರ ಮತ್ತು ಪರಿಸರ ಪರಂಪರೆ ಮುಂದುವರಿಸುವ ಪ್ರಯತ್ನವಾಗಿದೆ. ಜರ್ಮನ್ ತೋಟಗಾರ ಹಾಗೂ ಸಸ್ಯಶಾಸ್ತ್ರಜ್ಞ ಗುಸ್ತಾವ್ ಹರ್ಮನ್‌ ಕ್ರುಂಬೀಗಲ್ ಮತ್ತು ಪರಿಸರ ತಜ್ಞ ಎಸ್.ಜಿ.ನೆಗಿನಹಾಳ್ ಅವರ ಪರಂಪರೆಯಿಂದ ಪ್ರೇರಿತವಾಗಿ ಯೋಜನೆ ರೂಪಿಸಲಾಗಿದೆ. ಯೋಜನೆಗೆ ಅಗತ್ಯವಿರುವ ಸಸಿಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಒದಗಿಸಿದ್ದು, ಅನ್‌ಬಾಕ್ಸಿಂಗ್ ಬಿಎಲ್‌ಆರ್ (ಯುಬಿಎಲ್‌ಆರ್) ಸಂಸ್ಥೆಯು ಯೋಜನೆಗೆ ಹಣಕಾಸು ನೆರವು ನೀಡಿ, ನೆಲಮಟ್ಟದ ಎಲ್ಲ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದೆ. ನಗರದ ಹಸಿರು ಸಂಪತ್ತು ಹೆಚ್ಚಿಸುವ ಜತೆಗೆ ಪರಿಸರ ಸಂರಕ್ಷಣೆ, ಜೀವ ವೈವಿಧ್ಯವೃದ್ಧಿ ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಬ್ಲೂಮ್ ಅವೆನ್ಯೂ’ ಯೋಜನೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಪ್ರಾಜೆಕ್ಟ್‌ ಬ್ಲೂಮ್‌:

ಹಲವು ವರ್ಷಗಳ ಹಿಂದೆ ಜರ್ಮನ್ ಸಸ್ಯಶಾಸ್ತ್ರಜ್ಞ ಕ್ರುಂಬಿಗಲ್‌ ಅವರು, ಬೆಂಗಳೂರನ್ನು ವರ್ಷಪೂರ್ತಿ ಅರಳುವ ಹೂವುಗಳ ನಗರವನ್ನಾಗಿ ರೂಪಿಸಿದ್ದರು. ಇದು ದಶಕಗಳ ನಂತರವೂ ಬೆಂಗಳೂರಿನ ಸೌಂದರ್ಯಕ್ಕೆ ಹೊಸ ಮೆರುಗು ನೀಡುತ್ತಿದೆ. ಅದರಿಂದ ಪ್ರೇರಣೆ ಪಡೆದಿರುವ ‘ಪ್ರಾಜೆಕ್ಟ್ ಬ್ಲೂಮ್’ ಸ್ಥಳೀಯ ಸಸ್ಯಪ್ರಭೇದಗಳು ಹೂವಿನ ಅಲಂಕಾರಗಳ ಮೂಲಕ ಮುಂದಿನ ಪೀಳಿಗೆಗಾಗಿ ನಗರದ ನೈಸರ್ಗಿಕ ಪರಂಪರೆ ಹೆಚ್ಚಿಸಲಿದೆ. ನಾಗರಿಕರು, ಸಂಸ್ಥೆಗಳು ಮತ್ತು ಸರ್ಕಾರ ಈ ಯೋಜನೆಗೆ ಕೈಜೋಡಿಸಿರುವುದು ವಿಶೇಷ.

- ಪ್ರಶಾಂತ್‌ ಪ್ರಕಾಶ್‌, ಅಧ್ಯಕ್ಷ, ಅನ್‌ಬಾಕ್ಸಿಂಗ್‌ಬಿಎಲ್‌ಆರ್‌ಕೋಟ್‌:

ಮಾದರಿ ರಸ್ತೆ

‘ಬ್ಲ್ಯೂಮ್‌ ಅವೆನ್ಯೂ’ ಯೋಜನೆಯಡಿ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯುದ್ದಕ್ಕೂ ಹಸಿರು ಹಾಗೂ ಅರಳುವ ವಾತಾವರಣ ನಿರ್ಮಾಣವಾಗುವುದರಿಂದ ಸ್ಥಳೀಯ ನಿವಾಸಿಗಳು ಮತ್ತು ಸಮುದಾಯಗಳಿಗೆ ಅಪಾರ ಪ್ರಯೋಜನವಾಗಲಿದೆ. ಪ್ರಮುಖ ರಸ್ತೆಗಳನ್ನು ಹೇಗೆ ಪರಿವರ್ತಿಸಬಹುದು ಎಂಬುದಕ್ಕೆ ಇದು ಮಾದರಿಯಾಗಲಿದೆ.

- ಎನ್.ಎ ಹ್ಯಾರಿಸ್, ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೋಟ್‌:

ಸಂಪೂರ್ಣ ಸಹಕಾರ

ಬ್ಲ್ಯೂಮ್‌ ಅವೆನ್ಯೂ ಯೋಜನೆಗೆ ಬಿಡಿಎ ಸಂಪೂರ್ಣ ಸಹಕಾರ ನೀಡಿದೆ. ಇಂಥ ಮಾದರಿಯ ಸಹಭಾಗಿತ್ವಗಳು ನಗರಾದ್ಯಂತ ಇನ್ನಷ್ಟು ಬೆಳೆಯಲಿ ಎಂಬುದು ನಮ್ಮ ಆಶಯ. ಇದರಿಂದ ಮಾಗಡಿ ರಸ್ತೆ–ಮೈಸೂರು ರಸ್ತೆ ಕಾರಿಡಾರ್ ಇನ್ನಷ್ಟು ಹಸಿರಿನಿಂದ ಕೂಡಿದ್ದು, ಆಕರ್ಷಕವಾಗಲಿದೆ.

-ಮೇಜರ್‌ ಪಿ.ಮಣಿವಣ್ಣನ್‌, ಆಯುಕ್ತರು, ಬಿಡಿಎ.