ಸಾರಾಂಶ
ಕನ್ನಡಪ್ರಭ ವಾರ್ತೆ ವಾಡಿ
ಮಕ್ಕಳೇ ನಿಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸರಕಾರಿ ಶಾಲೆಗೆ ಬನ್ನಿ ಶಾಲೆಯನ್ನು ಬಿಟ್ಟು ದುಡಿಮೆಗೆ ಹೋದರೆ ಜೀವನದಲ್ಲಿ ಬಹಳ ಪಶ್ಚತಾಪ ಪಡಬೇಕಾಗುತ್ತದೆ ಎಂದು ಎಲ್ಎಲ್ಎಫ್ ಬೇಸಿಗೆ ರಜೆಯ ಶಿಬಿರದ ಶಿಕ್ಷಕಿ ಅಂಬಿಕಾ ಶಿರವಾಳ ಹೇಳಿದರು.ಸಮೀಪದ ಕಮರವಾಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬೇಸಿಗೆ ರಜೆಯಲ್ಲಿ ಒಂದು ತಿಂಗಳ ಕಾಲ ನಡೆದ ಶಿಬಿರದ ಸಮಾರೋಪ ಸಮಾರಂಭದ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ನಿಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಪ್ರತಿ ದಿನ ತಪ್ಪದೆ ಶಾಲೆಗೆ ಬರುವ ಮೂಲಕ ಪಾಠ ಪ್ರವಚನ ಕಡೆ ಹೆಚ್ಚು ಗಮನಹರಿಸಬೇಕು. ಶೈಕ್ಷಣಿಕ ಗುಣಮಟ್ಟ ಉತ್ತೇಜಿಸಲು ಸರಕಾರ ಸಾಕಷ್ಟು ಯೋಜನೆಗಳು ರೂಪಿಸುತ್ತಿದೆ. ಮಕ್ಕಳಿಗಾಗಿ ಮದ್ಯಾಹ್ನದ ಬಿಸಿಯೂಟ, ಸಮವಸ್ತ್ರ ಪೂರೈಕೆ ಹಾಗೂ ಪಠ್ಯಪುಸ್ತಕ ಸೇರಿದಂತೆ ಹಲವು ಸೌಲಭ್ಯಗಳು ನೀಡಲಾಗುತ್ತಿದೆ. ಸರಕಾರಿ ಶಾಲೆಯಲ್ಲೇ ಸಿಗುವ ಗುಣಮಟ್ಟ ಶಿಕ್ಷಣ ಖಾಸಗಿ ಶಾಲೆಯಲ್ಲಿ ಸಿಗೋದಿಲ್ಲ. ಖಾಸಗಿ ಶಾಲೆಗಳಿಗೆ ಮೊರೆ ಹೋಗದೆ ನಿಮ್ಮೂರಿನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ವೀರಣ್ಣ ಪಂಚಾಳ ಮಾತನಾಡಿ, ರಜೆಯ ಅವಧಿಯಲ್ಲಿ ಮಕ್ಕಳು ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಕಲಿಕೆ ಸಾಧ್ಯವಾಗಿದೆ. ಶೈಕ್ಷಣಿಕ ಜಾಗೃತಿ ಪಾಲಕರಲ್ಲಿ ಇರಬೇಕು. ಮಕ್ಕಳನ್ನು ಸೃಜನಾತ್ಮಕವಾಗಿ ಬೆಳೆಸಬೇಕು. ಅವರಲ್ಲಿರುವ ಪ್ರತಿಭೆಗಳ ಗುರುತಿಸಿ ಪ್ರೋತ್ಸಾಹಿಸಲು ಶಿಬಿರಗಳು ತುಂಬಾ ಉಪಯುಕ್ತವಾಗಿದೆ ಎಂದರು.5ನೇ ತರಗತಿ ವಿದ್ಯಾರ್ಥಿನಿ ಜ್ಯೋತಿ ಕೊಟಗಾರ ಶ್ರೀಸರಸ್ವತಿ ದೇವಿಯ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದರು. ಬೇಸಿಗೆ ರಜೆಯ ತರಬೇತಿ ಪಡೆದ ಹಲವು ವಿದ್ಯಾರ್ಥಿಗಳು ಖುಷಿಯಿಂದ ಶಿಕ್ಷಕರ ಜೋತೆಯಲ್ಲಿ ಸಮಾಲೋಚನೆ ನಡೆಸಿದರು.