ಸಾರಾಂಶ
‘ಆಪರೇಷನ್ ಸಿಂದೂರ’ ಹಿನ್ನೆಲೆಯಲ್ಲಿ ಗುಜರಾತ್ ಸೇರಿದಂತೆ ದೇಶದ ಏಳು ರಾಜ್ಯಗಳಲ್ಲಿ ಮುಂದೂಡಲ್ಪಟ್ಟಿದ್ದ ಕಾಮೆಡ್-ಕೆ ಯುಜಿಇಟಿ ಹಾಗೂ ಯೂನಿಗೇಜ್ ಪರೀಕ್ಷೆ ಭಾನುವಾರ ಸುಸೂತ್ರವಾಗಿ ನಡೆದಿದೆ.
ಬೆಂಗಳೂರು: ‘ಆಪರೇಷನ್ ಸಿಂದೂರ’ ಹಿನ್ನೆಲೆಯಲ್ಲಿ ಗುಜರಾತ್ ಸೇರಿದಂತೆ ದೇಶದ ಏಳು ರಾಜ್ಯಗಳಲ್ಲಿ ಮುಂದೂಡಲ್ಪಟ್ಟಿದ್ದ ಕಾಮೆಡ್-ಕೆ ಯುಜಿಇಟಿ ಹಾಗೂ ಯೂನಿಗೇಜ್ ಪರೀಕ್ಷೆ ಭಾನುವಾರ ಸುಸೂತ್ರವಾಗಿ ನಡೆದಿದೆ.
ಮೇ 10 ಮತ್ತು 25 ಎರಡೂ ಹಂತದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶ ಹಾಗೂ ರ್ಯಾಂಕ್ ಪಟ್ಟಿಯನ್ನು ಜೂ.7ಕ್ಕೆ ಪ್ರಕಟಿಸಲಾಗುವುದು ಎಂದು ಕಾಮೆಡ್-ಕೆ ತಿಳಿಸಿದೆ.ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿನ ಸೀಟುಗಳ ಭರ್ತಿಗೆ ಕಳೆದ ಮೇ 10ರಂದು ದೇಶದ 18 ರಾಜ್ಯಗಳಲ್ಲಿ ಕಾಮೆಡ್-ಕೆ ಯುಜಿಸಿಇಟಿ ನಿಗದಿಪಡಿಸಿತ್ತು. ಆದರೆ, ಆಪರೇಷನ್ ಸಿಂದೂರ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಜಮ್ಮು-ಕಾಶ್ಮೀರ, ಉತ್ತರಾಖಂಡ, ನವದೆಹಲಿ, ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ ರಾಜ್ಯಗಳಲ್ಲಿ ಪರೀಕ್ಷೆ ಮುಂದೂಡಲಾಗಿತ್ತು.
ಕರ್ನಾಟಕ ಸೇರಿದಂತೆ ಉಳಿದ 11 ರಾಜ್ಯಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಮುಂದೂಡಿಕೆಯಾಗಿದ್ದ ರಾಜ್ಯಗಳ 22 ಕೇಂದ್ರಗಳಲ್ಲಿ ಭಾನುವಾರ ಪರೀಕ್ಷೆ ನಡೆಸಲಾಗಿದೆ. ನೋಂದಾಯಿಸಿದ್ದ 6639 ಮಂದಿಯಲ್ಲಿ 4335 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಹಂತದಲ್ಲಿ ನಡೆದ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಸರಿ ಉತ್ತರಗಳನ್ನು ಮೇ 28ರಂದು ಕಾಮೆಡ್-ಕೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ತಮ್ಮ ಲಾಗಿನ್ ಮೂಲಕ ವೀಕ್ಷಿಸಿ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು. ಬಳಿಕ ಜೂ.7ರಂದು ಅಂತಿಮ ಕೀ ಉತ್ತರ ಮತ್ತು ರ್ಯಾಂಕಿಂಗ್ ಪಟ್ಟಿಯೊಂದಿಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕಾಮೆಡ್-ಕೆ ಪ್ರಕಟಣೆಯಲ್ಲಿ ತಿಳಿಸಿದೆ.