ಕನ್ನಡಪ್ರಭ ವಾರ್ತೆ ಹಾಸನ
ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿಯಲ್ಲಿರುವ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದಲ್ಲಿ ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳವರ ೪೫ನೇ ಹಾಗೂ ಕಿರಿಯ ಶ್ರೀಗಳಾದ ಶ್ರೀ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮಿಗಳವರ ಪ್ರಥಮ ಚಾತುರ್ಮಾಸ್ಯ ವ್ರತಾನುಷ್ಠಾನ ಭಕ್ತಿಭಾವದಿಂದ ಆರಂಭವಾಯಿತು.ಚಾತುರ್ಮಾಸ್ಯ ವ್ರತದ ಅಂಗವಾಗಿ ಧ್ವಜಾರೋಹಣ, ಕೃಷ್ಣ ಪಂಚಕ, ವ್ಯಾಸ ಪಂಚಕ, ಶಂಕರ ಪಂಚಕ ಹಾಗೂ ಗುರುಪರಂಪರೆಯ ಆರಾಧನಾ ಪೂಜಾ ವಿಧಿವಿಧಾನಗಳು ವೈದಿಕ ಸಂಪ್ರದಾಯದಂತೆ ನೆರವೇರಿದವು. ನೂರಾರು ಭಕ್ತರು ಹಾಗೂ ಸಮಾಜದ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳು, ಮಾನವ ಜೀವನವು ಸನ್ಮಾರ್ಗದಲ್ಲಿ ಸಾಗಿದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ ಎಂದು ತಿಳಿಸಿದರು. ಇಹಲೋಕದಲ್ಲಿ ಧರ್ಮನಿಷ್ಠ ಜೀವನ ನಡೆಸಿ ಪರಮಾತ್ಮನ ಸಾಕ್ಷಾತ್ಕಾರ ಹೊಂದುವುದೇ ಮನುಷ್ಯ ಜನ್ಮದ ಪರಮ ಗುರಿಯಾಗಿದೆ ಎಂದು ಹೇಳಿದರು. ವಿಶ್ವಕರ್ಮನು ಸೃಷ್ಟಿ, ಸ್ಥಿತಿ ಮತ್ತು ಲಯದ ತತ್ವಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ವೇದಗಳು ವಿಶ್ವಕರ್ಮನನ್ನು ವಿಷ್ಣುವಿನ ಅಂಶವೆಂದು ವರ್ಣಿಸಿವೆ ಎಂದು ಉಲ್ಲೇಖಿಸಿದರು. ಸಮಾಜದ ಬಂಧುಗಳು ಸನಾತನ ಧರ್ಮದ ಮೌಲ್ಯಗಳು, ಗುರುಪರಂಪರೆ ಹಾಗೂ ಧಾರ್ಮಿಕ ಆಚರಣೆಗಳನ್ನು ತಮ್ಮ ಕರ್ತವ್ಯವೆಂದು ಭಾವಿಸಿ ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಕರೆ ನೀಡಿದರು.
ಕಿರಿಯ ಶ್ರೀಗಳಾದ ಜ್ಞಾನಘನ ವಿದ್ಯಾತೀರ್ಥ ಮಹಾಸ್ವಾಮಿಗಳು ಮಾತನಾಡಿ, ಸದ್ಗುರುವಿನ ಕೃಪೆಯೇ ಜೀವನದ ದಾರಿದೀಪವಾಗಿದ್ದು, ಆಧ್ಯಾತ್ಮಿಕ ಪ್ರಗತಿಗೆ ಗುರುಭಕ್ತಿ ಅನಿವಾರ್ಯ ಎಂದು ಹೇಳಿದರು. ಚಾತುರ್ಮಾಸ್ಯದ ಅವಧಿಯಲ್ಲಿ ಗುರುಪರಂಪರೆಯ ಆರಾಧನೆ, ಧಾರ್ಮಿಕ ಚಿಂತನೆ ಹಾಗೂ ಸತ್ಸಂಗಗಳಿಗೆ ಹೆಚ್ಚಿನ ಮಹತ್ವವಿದ್ದು, ಈ ಅವಧಿಯ ಆಚರಣೆಗಳು ಆತ್ಮೋನ್ನತಿಗೆ ದಾರಿಯಾಗುತ್ತವೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಮಂಡಲದ ಅಧ್ಯಕ್ಷ ಎಲ್. ನಾಗರಾಜಾಚಾರ್, ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್. ವಿ. ಹರೀಶ್, ಮಲೆಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಆಲನಹಳ್ಳಿ ರಘು, ಶ್ರೀಮಠದ ಪಾರುಪತ್ತೆಗಾರ ಎ.ಆರ್. ಶೇಷಕುಮಾರ್, ರಾಜೇಶ್ ಮಠದಬೆಟ್ಟು, ಸುಧಾಕರಾಚಾರ್ಯ, ಎಚ್. ಬಿ. ಕೃಷ್ಣ, ಎಚ್. ಶ್ರೀನಿವಾಸ್, ಬಿ. ಲೋಕೇಶ್, ಅರಕಲಗೂಡು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಂತೋಷ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.ಕಾರ್ಯಕ್ರಮದ ಆರಂಭದಲ್ಲಿ ಎ. ಆರ್. ದಿವಾಕರಸ್ವಾಮಿ ಸ್ವಾಗತಿಸಿ, ಕಾರ್ಯದರ್ಶಿ ಸಿ. ಸುಬ್ರಹ್ಮಣ್ಯಾಚಾರ್ ವಂದಿಸಿದರು.