Commission's non-cooperation in vote theft case investigation: Allegation

-2023ರ ಇಲೆಕ್ಷನ್‌ನಲ್ಲಿ ನಕಲಿ ಫಾರ್ಮ್‌ 7ಸಲ್ಲಿಸಿ ಮತದಾರರ ಹೆಸರು ಅಳಿಸುವ ಸಂಚು । ಆನ್‌ಲೈನ್‌ ಸಲ್ಲಿಕೆಯಾದ ಫಾರ್ಮ್‌ 7ರ 6, 018 ಅರ್ಜಿಗಳಲ್ಲಿ 5, 994 ನಕಲಿ

-------

ಕನ್ನಡಪ್ರಭ ವಾರ್ತೆ ಕಲಬುರಗಿ

ಆನ್‌ಲೈನ್‌ ಮೂಲಕ ಫಾರ್ಮ ನಂಬರ್‌ 7ರಲ್ಲಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಿಂದ ಸಾವಿರಾರು ಜನರ ಹೆಸರು ತೆಗೆದು ಹಾಕಿರುವ ಆಳಂದ ಅಸೆಂಬ್ಲಿ ಕಣದ 2023ರ ಚುನಾವಣೆಯಲ್ಲಿ ನಡೆದಿದೆ ಎನ್ನಲಾಗಿರುವ ಮತ ಚೋರಿ ಕೇಸ್‌ನ ತನಿಖೆಗೆ ಮುಂದಾಗಿರುವ ಪೊಲೀಸ್‌ ಸಿಐಡಿ, ಸೈಬರ್‌ ಕ್ರೈಂ ನವರಿಗೆ ಅಗತ್ಯ ದಾಖಲೆ ಕೊಡದೆ ಚುನಾವಣಾ ಆಯೋಗ ತನಿಖೆಗೆ ಅಸಹಕಾರ ತೋರುತ್ತಿದೆ ಎಂದು ಶಾಸಕ ಬಿಆರ್‌ ಪಾಟೀಲ್‌ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲರು, ಫಾರ್ಮ್‌ 7ರಲ್ಲಿ ಹೆಸರು ಕೈಬಿಡುವಂತೆ ಸಾಮೂಹಿಕವಾಗಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗಿದ್ದ 6, 018 ಅರ್ಜಿಗಳಲ್ಲಿ 5, 994 ಅರ್ಜಿಗಳು ನಕಲಿ ಎಂದು ಸಾಬೀತಾಗಿದೆ. ಆಗಿನ ಆಳಂದ ಕ್ಷೇತ್ರದ ಚುನಾವಣಾಧಿಕಾರಿ ಸ್ಥಳೀಯ ಪೊಲೀಸರಿಗೆ ದೂರು ಸಲ್ಲಿಸಿದಾಗ ಎಫ್‌ಐಆರ್‌ ದಾಖಲಾಗಿ ತನಿಖೆ ಸಾಗಿತ್ತು.

ಆದರೆ, ಪೊಲೀಸರು ಕೇಳಿದ ದಾಖಲೆ ಚುನಾವಣೆ ಆಯೋಗ ಒದಗಿಸಲಿಲ್ಲ, ನಂತರ ಈ ಕೇಸ್‌ ಸಿಒಡಿಗೆ ಹಸ್ತಾಂತರ ಆದಾಗಲೂ ಆಯೋಗದ ಅಸಹಕಾರ ಮುಂದುವರಿದಿತ್ತು. ಇದೀಗ ಸೈಬರ್‌ ಕ್ರೈಂಗೆ ಪ್ರಕರಣ ಹಸ್ತಾತಂರಗೊಂಡಿದ್ದು ಈಗಲೂ ಚುನಾವಣಾ ಆಯೋಗದಿಂದ ತನಿಖೆಗೆ ದಾಖಲೆ ದೊರಕುತ್ತಿಲ್ಲ. ಹೀಗಾಗಿ ಮತ ಚೋರಿಯ ಗುಮಾನಿಯ ಈ ಪ್ರಕರಣದ ತನಿಖೆಗೆ ಅಡಚಣೆಯಾಗಿದೆ ಎಂದು ದೂರಿದರು.

ರಾಹುಲ್‌ ಗಾಂಧಿ ಆರಂಭಿಸಿರುವ ಮತ ಚೋರಿ ಅಭಿಯಾನಕ್ಕೆ ಆಳಂದದ ಪ್ರಕರಣ ಪುಷ್ಟಿ ನೀಡಿದೆ. ಕಾಂಗ್ರೆಸ್ ಪಕ್ಷದ ಡೇಟಾ ವಿಶ್ಲೇಷಕರಿಂದ ಬುಲಾವ್‌ ಬಂದಿದ್ದು ಎಲ್ಲಾ ದಾಖಲೆ ಜೊತೆಗೇ ತಾವು ದೆಹಲಿಗೆ ಹೋಗುತ್ತಿರುವುದಾಗಿ ಪಾಟೀಲ್‌ ಹೇಳಿದ್ದಾರೆ.

ಒಬ್ಬನಿಂದಲೇ 40 ಫಾರ್ಮ್‌: ಆನ್‌ಲೈನ್‌ನಲ್ಲಿ ಸಾಮೂಹಿಕವಾಗಿ ಬೇರೆ ಬೇರೆ ಮೊಬೈಲ್‌ ಬಳಸಿ ಅರ್ಜಿ ಸಲ್ಲಿಸಲಾಗಿದೆ. ಒಬ್ಬನೇ ವ್ಯಕ್ತಿ ಸಲ್ಲಿಸಿರುವ 40 ಅರ್ಜಿಗಳು ಪತ್ತೆಯಾಗಿದ್ದವು. 40 ಕೇಸ್‌ಗಳಲ್ಲಿ ವಿವಿಧ ಗ್ರಾಮಗಳ ಮತದಾರ ಪಟ್ಟಿಯಲ್ಲಿರುವ ಮೊದಲ ಹೆಸರನ್ನೇ ಅಳಿಸಲು ಕೋರಿಕೆ ಇತ್ತು.

ಇದೆಲ್ಲವೂ ಸಾಮೂಹಿಕ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಂಚಿನ ಭಾಗ. ಈ ಬಗ್ಗೆ ಕೇಸ್‌ ದಾಖಲಾದರೂ ಆಯೋಗದವರು ತನಿಖೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಆಯೋಗದ ಈ ಧೋರಣೆಯನ್ನೇ ಗುಮಾನಿಯಿಂದ ನೋಡುವಂತಾಗಿದೆ. ಆಯೋಗದವರ ಈ ವರ್ತನೆ ಮತ ಚೋರಿಯನ್ನು ಪುಷ್ಟೀಕರಿಸುವಂತಿದೆ. ಬಿಜೆಪಿಗೆ ನೆರವು ನೀಡುವ ಉದ್ದೇಶದಿಂದ ಜಿದ್ದಾಜಿದ್ದಿ ಕಣಗಳನ್ನು ಆಯ್ಕೆ ಮಾಡಿ ಈ ರೀತಿ ಸಾಮೂಹಿಕ ಮತಗಳನ್ನೇ ತೆಗೆದು ಹಾಕುವ ಸಂಚು ರೂಪಿಸಲಾಗುತ್ತಿದೆ, ಅದರಲ್ಲಿ ಆಳಂದ ಕೂಡಾ ಸೇರಿದೆ ಎಂದು ಪಾಟೀಲ್‌ ದೂರಿದ್ದಾರೆ.

ತನಿಖೆಗೆ ಅಸಹಕಾರ: 2023ರ ಈ ಕೇಸ್‌ನ ತನಿಖೆಯ ಆರಂಭದಲ್ಲಿ ಆಯೋಗ ಮೂಲ ಐಪಿ ಲಾಗ್‌, ಸಂಬಂಧಿತ ಮೆಟಾ ಡೇಟಾ ಒದಗಿಸಿತ್ತು. ಆದರೆ, ಡೆಸ್ನಿನೇಶನ್‌ ಐಪಿಗಳು, ಪೋರ್ಟ್‌ ಅರ್ಜಿಗಳು, ನಕಲಿ ಅರ್ಜಿ ಸಲ್ಲಿಕೆಗೆ ಬಳಕೆಯಾದ ಸಾಧನ ಗುರುತಿಸಲು ಅಗತ್ಯವಿರೋ ಮಾಹಿತಿಯನ್ನು ಪೊಲೀಸ್‌, ಸಿಐಡಿ ಕೇಳಿದರೂ ಚುನಾವಣಾ ಆಯೋಗ ಸ್ಪಂದಿಸಿಲ್ಲ. ಮೇಲಿನ ತಾಂತ್ರಿಕ ಮಾಹಿತಿ ಇಲ್ಲದೆಯೇ ವಂಚನೆ ಜಾಲ ಪತ್ತೆ ಅಸಾಧ್ಯವೆಂದು ತನಿಖೆಯೇ ನಿಂತು ಬಿಟ್ಟಿದೆ ಎಂದು ಬಿಆರ್‌ ಪಾಟೀಲ್‌ ಕೇಸ್‌ನಲ್ಲಿ ತನಿಖೆಗೆ ಆಯೋಗದ ಅಸಹಕಾರ ವಿವರಿಸಿದರು.

ಸಂಚು ರೂಪಿಸಿದವರನ್ನು ಪತ್ತೆ ಹಚ್ಚೋದೆ ತನಿಖೆಯ ಉದ್ದೇಶ. ತಮ್ಮ ಎದುರಾಳಿ ಬಿಜೆಪಿ ಅಭ್ಯರ್ಥಿಗೆ ನೆರವು ನೀಡಲೆಂದೇ ಚುನಾವಣಾ ಆಯೋಗ ಕೇಳಿದ ತಾಂತ್ರಿಕ ಮಾಹಿತಿ ನೀಡದೆ ಅಸಹಕಾರ ತೋರುತ್ತಿದೆ ಎಂದು ಪಾಟೀಲರು ದೂರಿದರು.

ಕೋರ್ಟ್‌ ಮೆಟ್ಟಿಲೇರುವ ಇಂಗಿತ: ಈ ಸಂಚಿನ ಹಿಂದೆ ಯಾರಿದ್ದಾರೆ? ಹೇಗೆಲ್ಲಾ ಸಂಚು ರೂಪಿತವಾಗಿತ್ತು ಎಂಬುದು ಹೊರಬರಬೇಕು, ಅಗತ್ಯ ಕಂಡಲ್ಲಿ ಕೋರ್ಟ್‌ ಮೆಟ್ಟಿಲೇರುವುದಾಗಿ ಪಾಟೀಲ್‌ ಹೇಳಿದ್ದಾರೆ.

ಚುನಾವಣಾ ಆಯೋಗ ತನಿಖೆಗೆ ಅಸಹಕಾರ ನೋಡಿದರೆ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಹಾಗೂ ಚುನಾವಣಾ ಆಯೋಗ ಸೇರಿಕೊಂಡು ಸಂಚು ರೂಪಿಸಿದೆ ಎಂಬ ಅನುಮಾನ ಕಾಡುತ್ತಿದೆ. ನ್ಯಾಯಸಮ್ಮತ ಚುನಾವಣೆಗಳೇ ನಡೆಯದೆ ಹೋದಲ್ಲಿ ಇಂತಹ ಸಂಚು ರೂಪಿಸುವವರಿದ್ದರೆ ಮುಂದೆ ಏನು ಗತಿ? ಎಂದು ಬಿಆರ್‌ ಪಾಟೀಲ್‌ ಆತಂಕ ಹೊರಹಾಕಿದರು.

-ಬುಲೆಟ್‌ ಪಾಯಿಂಟ್ಸ್‌

- ಒಬ್ಬನಿಂದಲೇ 40 ಫಾರ್ಮ್‌- 7ಅರ್ಜಿ, ಹಸ್ತಾಕ್ಷರ, ಬೆರಳಚ್ಚು ಯಾವುದೂ ಇಲ್ಲದ ಅರ್ಜಿಗಳು

- 2023ರ ಫೆ. 21 ಚುನಾವಣಾಧಿಕಾರಿ ದೂರು ಆಧರಿಸಿ ಆಳಂದ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌

- 40 ಕೇಸ್‌ನಲ್ಲಿ ವೋಟರ್‌ ಲಿಸ್ಟ್‌ ಮೊದಲ ಹೆಸರೇ ಮಾಯ, ತನಿಖೆಗೆ ಚುನಾವಣೆ ಆಯೋಗ ಅಸಹಕಾರ

-ಮೂಲ ಐಪಿ ಲಾಗ್‌ ಒದಗಿಸಿದ್ದ ಆಯೋಗದಿಂದ ಡೆಸ್ಟಿನೇಷನ್‌ ಐಪಿ, ಪೋರ್ಟ್‌ ನೀಡಲು ನಿರಾಕರಣೆ

-ಆಯೋಗದ ಅಸಹಕಾರ, ತನಿಖೆ ವಿಳಂಬ, ಮತ ಚೋರಿ ಕೇಸ್‌ ಈಗ ಸೈಬರ್‌ ಕ್ರೈಂಗೆ ಹಸ್ತಾಂತರ

--------

ಫೋಟೋ- ಪಾಟೀಲ್‌ ಆಳಂದ 1 ಮತ್ತು 2