ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಉಪನ್ಯಾಸಕರು ಶ್ರದ್ದೆ, ಬದ್ಧತೆ ಹಾಗೂ ಪರಿಶ್ರಮದಿಂದ ಬೋಧನೆ ಮಾಡುವುದರ ಮೂಲಕ ಮುಂದಿನ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಹೆಚ್ಚಿಸಬೇಕೆಂದು ತುಮಕೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಕರೆ ನೀಡಿದರು.ನಗರದ ಕಲ್ಪತರು ಸಂಸ್ಥೆಯ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕ ಶೈಕ್ಷಣಿಕ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪನ್ಯಾಸಕರು ವಾರ್ಷಿಕ ಪಟ್ಟಿ ಯೋಜನೆಯಂತೆ ಪ್ರತಿದಿನ ಲಘು ಟಿಪ್ಪಣಿ ತಯಾರಿಕೆಯೊಂದಿಗೆ ಮಕ್ಕಳಿಗೆ ಮನಮುಟ್ಟುವಂತೆ ತರಗತಿಗಳನ್ನು ತೆಗೆದುಕೊಳ್ಳಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಪರಿಹಾರ ಬೋಧನಾ ಘಟಕ ಪರೀಕ್ಷೆಯನ್ನು ಮಾಡುವ ಮೂಲಕ ಉತ್ತಮ ಫಲಿತಾಂಶ ಬರಲು ಯತ್ನಿಸಬೇಕು. ಕಾಲೇಜುಗಳಲ್ಲಿ ಕನ್ನಡ ಕ್ಲಬ್, ಇತಿಹಾಸ, ವಿಜ್ಞಾನ ಕ್ಲಬ್ಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಬೇಕಲ್ಲದೆ, ಮಕ್ಕಳಿಗೆ ಪಾಠದ ಜೊತೆ ಕಲಿಕೆಯಲ್ಲಿ ಹೆಚ್ಚು ಸಹಕರಿಸಬೇಕು. ಅಂಬೇಡ್ಕರ್, ಗಾಂಧೀಜಿ, ಕುವೆಂಪು, ಅಬ್ರಾಹಂ ಲಿಂಕನ್ ಮೊದಲಾದವರ ಪ್ರಮುಖ ದಾರ್ಶನಿಕರ ವಿಚಾರಗಳನ್ನು ಮಾತನಾಡುವ ವಿಡಿಯೋಗಳನ್ನು ಮಕ್ಕಳಿಗೆ ಪರದೆ ಮೇಲೆ ತೋರಿಸುತ್ತಾ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸುವಂತೆ ನಿಗಾ ವಹಿಸಬೇಕೆಂದರು. ಪ್ರಾಂಶುಪಾಲ ಹಾಗೂ ನೋಡಲ್ ಅಧಿಕಾರಿ ಎಂ.ಡಿ. ಶಿವಕುಮಾರ್ ಮಾತನಾಡಿ, ತಿಪಟೂರು ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ, ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ಯಶಸ್ಸು ಕಂಡಿದ್ದೇವೆ. ಉಪನಿರ್ದೇಶಕರ ಆದೇಶದಂತೆ ಫಲಿತಾಂಶದಲ್ಲಿ ಕಳೆದ ಬಾರಿ ೨೪ನೇ ಸ್ಥಾನದಲ್ಲಿರುವ ಜಿಲ್ಲೆಯನ್ನು ಈ ಬಾರಿ ೧೦ರೊಳಗಡೆ ಬರುವಂತೆ ಉಪನ್ಯಾಸಕರು ಶ್ರಮವಹಿಸಬೇಕು. ಶೈಕ್ಷಣಿಕ ಕಾರ್ಯಾಗಾರದಿಂದ ನೆಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಚಾರ್ಯ ಸಂಘದ ಅಧ್ಯಕ್ಷ ಪ್ರಭಾಕರ್ರೆಡ್ಡಿ, ಪ್ರಾಚಾರ್ಯರುಗಳಾದ ಗುಂಡಪ್ಪ, ಪ್ರದೀಪ್, ನಾಗರಾಜು, ರಘು, ಮಹೇಶಯ್ಯ, ನಿವೃತ್ತ ಪ್ರಾಂಶುಪಾಲ ಬಿ. ನಾಗರಾಜು, ಉಪ ನಿದೇಶಕ ಕಚೇರಿಯ ರಾಜಣ್ಣ, ಉಪನ್ಯಾಸಕ ಷಡಕ್ಷರಪ್ಪ, ಪ್ರಾಂಶುಪಾಲ ರಘು ಸೇರಿದಂತೆ ತಾಲೂಕಿನ ೨೧ ಪಿಯು ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.