ಡಂಬಳ: ಶೈಕ್ಷಣಿಕ ಧಾರ್ಮಿಕ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಿರೇವಡ್ಡಟ್ಟಿ ಗ್ರಾಮವನ್ನು ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಶಾಸಕ ಜಿ.ಎಸ್. ಪಾಟೀಲ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ರೋಣ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ ಜಿ. ಪಾಟೀಲ ತಿಳಿಸಿದರು.

ಸೋಮವಾರ ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಯುವಕ ಮಂಡಳ ಹಾಗೂ ಭಜನಾ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮುಂದಿನ ದಿನಗಳಲ್ಲಿ ಕುಡಿಯುವ ನೀರು, ರಸ್ತೆ ನಿರ್ಮಾಣ, ಆರೋಗ್ಯ ಕೃಷಿ, ಶಿಕ್ಷಣ ಸೇರಿದಂತೆ ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿಯನ್ನು ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿಸಲಾಗುವುದು ಎಂದರು.

ಸಮುದಾಯ ಭವನದ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಬೇಕು. ಪ್ರಸ್ತುತ ₹50 ಲಕ್ಷ ರೂ ಅನುದಾನ ನೀಡಲಾಗಿದೆ. ಗ್ರಾಮದ ಮಣಕವಾಡ ಮಠಕ್ಕೂ ಈಗಾಗಲೇ ₹20 ಲಕ್ಷ ಅನುದಾನ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನ ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಇಂತಹ ಧಾರ್ಮಿಕ ಕೇಂದ್ರಗಳಿಂದ ನಿರಂತವಾಗಿ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆ ಎಂದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ ಮಾತನಾಡಿ, ರೋಣ ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದರು.

ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಈ ಭಾಗದ ಗ್ರಾಮದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಿಗೆ ಆದ್ಯತೆ ನೀಡುತ್ತಿರುವುದು ಪ್ರಶಂಸನೀಯ ಎಂದರು.


ಮುಖಂಡರಾದ ಹನುಮರಡ್ಡಿ ಮೇಟಿ, ಲೋಕಪ್ಪ ನಂದಿಕೋಲ, ಶಿವಪ್ಪ ಅಂಕದ, ಸುರೇಶ ಕವಲೂರ, ಶರಣಪ್ಪ ನಂದಿಕೋಲ, ವೆಂಕಪ್ಪ ಬಳ್ಳಾರಿ, ಅಬ್ದಲುಸಾಬ್ ಕಲಕೇರಿ, ಗೂಳಪ್ಪ ಸಂಗನಾಳ, ಶರಣಪ್ಪ ಅಂಕದ, ವೀರಭದ್ರೇಶ್ವರ ದೇವಸ್ಥಾನದ ಯುವಕ ಮಂಡಳ ಹಾಗೂ ಭಜನಾ ಸಂಘದ ಸಮಿತಿ ಅಧ್ಯಕ್ಷ ಹಾಲೇಶ ಹಲಿಗಿಲಿವಾಡ, ಉಪಾಧ್ಯಕ್ಷ ಶ್ರಾವಣ ಶಿವಳ್ಳಿ, ಕಾರ್ಯದರ್ಶಿ ಮಲ್ಲಣ್ಣ ಅಂಕದ, ಖಜಾಂಚಿ ಪ್ರಶಾಂತ ಹಂಚಿನಾಳ, ಉಮೇಶ ಕಿರಿಕಿರಿ, ಶರಣಪ್ಪ ಕುಂದ್ರಹಳ್ಳಿ, ಮಂಜುನಾಥ ಮೇವುಂಡಿ, ಸುರೇಶ ಮುಪ್ಪಿನಎಣ್ಣಿ, ಈರಣ್ಣ ಕಾಮಣ್ಣವರ, ಸುರೇಶಪ್ಪ ಬಣವಿ, ಚನ್ನಪ್ಪ ಜುಂಜುರಿ ಗುತ್ತಿಗೆದಾರ ಫಕ್ಕಿರಸಾಬ್ ಕೊಪ್ಪಳ ಇತರರು ಇದ್ದರು.