ನೀರಾವರಿ ಯೋಜನೆ ಪ್ರತಿಭಟನಾಕಾರರೊಂದಿಗೆ ಮಾತುಕತೆ
ಅಧಿಕಾರಿಗಳಿಂದ ನೀರಾವರಿ ಯೋಜನೆ ಸಮಗ್ರ ಮಾಹಿತಿ ಒದಗಿಸುವ ಭರವಸಹೇಮಾವತಿ ಕಾಮಗಾರಿ ಮುಗಿವವರೆಗೆ ಹೋರಾಟ ಮುಂದುವರಿಸುವ ಪಟ್ಟು
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ತಾಲೂಕಿನ ಸಮಗ್ರ ನೀರಾವರಿ ಯೋಜನೆ ಹಾಗೂ ಅಭಿವೃದ್ಧಿಗೆ ಸದಾ ನಿಮ್ಮೊಂದಿಗಿರುತ್ತೇನೆ. ತಾಲೂಕಿನ ಮೂರು ನೀರಾವರಿ ಯೋಜನೆಗಳ ಸಮಗ್ರ ಮಾಹಿತಿಯನ್ನು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ನೇರವಾಗಿ ನೀಡಲಾಗುವುದು ಹಾಗೂ ಮುಂದಿನ ಮಂಗಳವಾರದೊಳಗೆ ಕಾಮಗಾರಿ ಒಂದು ಹಂತ ಸಂಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಅವರು ಪ್ರತಿಭಟನಾ ನಿರತರಿಗೆ ಭರವಸೆ ನೀಡಿದ್ದಾರೆ.ಪಟ್ಟಣದ ತಾಲೂಕು ಅಡಳಿತ ಸೌಧ ಮುಂಭಾಗ ೩ನೇ ದಿನಕ್ಕೆ ಕಾಲಿಟ್ಟಿರುವ ನೀರಾವರಿ ಯೋಜನೆ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಅವರು ಮುಖ್ಯ ಕೆನಾಲ್ನಿಂದ ದಬ್ಬೇಘಟ್ಟದವರೆಗೆ ಈಗಾಗಲೇ ಶೇಕಡ 90ರಷ್ಟು ಕಾಮಗಾರಿ ಸಂಪೂರ್ಣವಾಗಿದೆ. ಅದರಂತೆ ಹಿಂದಿನ ಶೆಟ್ಟಿಕೆರೆ ಭಾಗದ ಕೆನಾಲ್ನಲ್ಲಿರುವ ಸೇತುವೆಗಳ ಕೆಳಗಿರುವ ಹೂಳು ತೆಗೆಯಲಾಗಿದೆ. ಈ ಬಾರಿ ಗೊರೂರು ಡ್ಯಾಂ ನಿಂದ ಮುಖ್ಯ ನಾಲೆಯಲ್ಲಿ ಹೇಮಾವತಿ ಹರಿಯುವ ವೇಳೆಗೆ ದಬ್ಬೇಘಟ್ಟದ ಕೆರೆವರೆಗೆ ಹರಿಸಲಾಗುವುದು. ದಬ್ಬೇಘಟ್ಟದಿಂದ ಮುಂದೆ ನವಿಲೆಯವರೆಗೆ ಹರಿಯಲಿದೆ. ತಾಲೂಕಿಗೆ ಎತ್ತಿನ ಹೊಳೆಯ ಮೂಲಕ, ಭದ್ರಾ ಮೇಲ್ದಂಡೆ ಯೊಜನೆ ಮೂಲಕ ನಮ್ಮ ಕ್ಷೇತ್ರದ ಕೆರೆಗಳಿಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣ ಹಾಗೂ ಕಾಮಗಾರಿ ಸ್ಥಿತಿಗತಿ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನೇ ಸೋಮವಾರ ಈ ಸ್ಥಳಕ್ಕೆ ಕರೆಯಿಸಿ ಸಮಗ್ರ ಮಾಹಿತಿ ತಿಳಿಸಲಾಗುವುದು. ೨೦೧೧ರಲ್ಲಿ ಪ್ರಾರಂಭವಾದ ಹೇಮಾವತಿ ಕಾಮಗಾರಿ ಈಗ ಒಂದು ಹಂತಕ್ಕೆ ಬಂದಿದೆ. ನೀರು ಹರಿಸುವ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಚಿಕ್ಕನಾಯಕನಹಳ್ಳಿ ಮೂಲಕ ಕಂದಿಕೆರೆಯಿಂದ ಬೋರನಕಣಿವೆಗೆ ಹೋಗುವ ಹಾಗೂ ಕುಪ್ಪೂರುಕೆರೆ ಭಾಗಕ್ಕೆ ಹೋಗುವಂತಹ ಕಾಮಗಾರಿ ಬಗ್ಗೆಯೂ ಸೋಮವಾರ ಅಧಿಕಾರಿಗಳೊಂದಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಮಂಗಳವಾರ ಸಂಜೆ ವೇಳೆಗೆ ದಬ್ಬೇಘಟ್ಟದವರೆಗೆ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದ್ದು, ದಿನಾಂಕ ನಿಗದಿಪಡಿಸಿದರೆ ಒಂದು ದಿನ ನಮ್ಮ ಭಾಗದ ಕೆನಾಲ್ ಪ್ರಾರಂಭದಿಂದ ಇಲ್ಲಿಯವರೆಗೆ ಆಗಿರುವಂತಹ ಕಾಮಗಾರಿ ವೀಕ್ಷಣೆ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು. ಉಪವಿಭಾಗಾಧಿಕಾರಿ ಸಪ್ತಶ್ರೀ ರೈತರೊಂದಿಗೆ ಮಾತುಕತೆ ನಡೆಸಿ, ಸೋಮವಾರ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆಯನ್ನು ಶಾಸಕರ ಅದ್ಯಕ್ಷತೆಯಲ್ಲಿ ನಡೆಸಿ ಎಲ್ಲಾ ಮಾಹಿತಿ ತಿಳಿಸಲಾಗುವುದು. ಪ್ರತಿಭಟನೆಯಲ್ಲಿ ವೃದ್ದರು, ಮಹಿಳೆಯರು ಭಾಗವಹಿಸಿದ್ದೀರಿ. ನಿಮ್ಮ ಅರೋಗ್ಯವನ್ನು ನೋಡಿಕೊಳ್ಳಿ. ಇನ್ನು ಐದು ದಿನದಲ್ಲಿ ದಬ್ಬೇಘಟ್ಟದವರೆಗೆ ನವಿಲೇ ಭಾಗದ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಸಿ.ಬಸವರಾಜು, ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಶ್ಯಾವಿಗೆ ಹಳ್ಳಿ ಮಧು ಮಾತನಾಡಿ, ಹೇಮಾವತಿ ಕಾಮಗಾರಿ ಮುಗಿವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಮಮತಾ ಎಂ., ರೈತಸಂಘದ ಅಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ, ಮಾಜಿ ಪುರಸಭಾ ಸದಸ್ಯಕಾಜ ಸಿ.ಡಿ. ಸುರೇಶ್, ರವಿಚಂದ್ರ, ಸೇರಿ ಹೋರಟದಲ್ಲಿ ರೈತ ಮಹಿಳೆಯರಾದ ಶಾರದಮ್ಮ, ನಾಗವೇಣಿ, ಮಂಜುಳಾ, ಲಕ್ಷ್ಮಮ್ಮ, ಸೌಮ್ಯ, ಶಾಂತಮ್ಮ ಮತ್ತಿತರರು ಇದ್ದರು.