ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಜಿಲ್ಲಾ ಅಲೆಮಾರಿ ಹಿತರಕ್ಷಣಾ ಸಮಿತಿ ವತಿಯಿಂದ ಕಳೆದ 60 ವರ್ಷಗಳಿಗೂ ಮೇಲ್ಪಟ್ಟು ಜಿಲ್ಲೆಯಲ್ಲಿ ಬದುಕು ಕಟ್ಟಿಕೊಂಡಿರುವ ಹಂದಿಜೋಗಿ ಮತ್ತು ಅಲೆಮಾರಿ ಸಮುದಾಯಗಳ ಕುಂದುಕೊರತೆ ಸಭೆ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿದ ಕೊಳಗೇರಿ ಸಮಿತಿ ಅರುಣ್ ಜಿಲ್ಲಾಧಿಕಾರಿಗಳ ಗಮನ ಸೆಳೆದು ಜಿಲ್ಲೆಯಲ್ಲಿ ಕಳೆದ 60 ವರ್ಷಗಳಿಗೂ ಮೇಲ್ಪಟ್ಟು ವಿವಿಧ ತಾಲೂಕುಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಹಂದಿಜೋಗಿ ಸಮುದಾಯದ ಕೂಗು ಕೇಳೊರಿಲ್ಲದಂತಾಗಿದೆ, ನಗರದಲ್ಲಿ ಬದುಕು ಕಟ್ಟಿಕೊಂಡಿದ್ದವರನ್ನು ಜನವಾಸಕ್ಕೆಯೋಗ್ಯವಲ್ಲದ ಸ್ಥಳಗಳಿಗೆ ಈಗಾಗಲೇ ಪುನರ್ ವಸತಿಗೊಳಿಸುವ ನೆಪದಲ್ಲಿ ಸ್ಥಳಾಂತರಿಸಿರುವುದು ಸರಿಯಷ್ಟೇ , ಆದರೆ ಮನುಷ್ಯ ಬದುಕುವುದಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸದೇ ನಿರ್ಲಕ್ಷಿಸಲಾಗುತ್ತಿದೆ. ಜಿಲ್ಲೆಯಲ್ಲಿ ಅಲೆಮಾರಿಗಳಿಗೆ ಸಾಂವಿಧಾನಿಕ ಹಕ್ಕು ಕಸಿಯಲಾಗಿದೆ. ಅಲೆಮಾರಿ ಸಮುದಾಯಗಳ ಸಮಸ್ಯೆಗಳ ಕುರಿತು ಪ್ರತಿ ೩ ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಕರೆಯಬೇಕೆಂದು ಒತ್ತಾಯಿಸಿದರು.
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಲೆಮಾರಿಗಳ ಕುಂದುಕೊರತೆ ಸಂಬಂಧ ತರ್ತು ಸಭೆ ಕರೆಯಲಾಗುವುದು ಜಿಲ್ಲೆಯಲ್ಲಿ ಈಗಾಗಲೇ ಪುನರ್ ವಸತಿ ಸಂಬಂಧ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಫಾಲೋಪ್ ಮಾಡಲಾಗುತ್ತಿದೆ.ಸದ್ಯದಲ್ಲೇ ಸಭೆಕರೆಯಲಾಗುವುದು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಅಲೆಮಾರಿ ಹಿತರಕ್ಷಣಾ ಸಮಿತಿಯ ವೆಂಕಟೇಶ್, ಸಂತೋಷ್, ನಾಗರಾಜು, ಮಾರಯ್ಯ, ರಾಧ, ಪಾಪಕ್ಕ, ಗುಂಡಾ, ಸ್ಲಂ ಸಮಿತಿಯ ಪದಾಧಿಕಾರಿಗಳಾದ ಶಂಕ್ರಯ್ಯ, ತಿರುಮಲಯ್ಯ, ಕೃಷ್ಣಮೂರ್ತಿ ಮುಂತಾದವರು ಹಾಜರಿದ್ದರು.