ಸಮುದಾಯ ಭವನದಿಂದ ಬಡವರು, ಸಾಮಾನ್ಯರಿಗೆ ಅನುಕೂಲ: ಗಣೇಶ್‌ ಹೆಗಡೆ

| Published : May 14 2024, 01:03 AM IST

ಸಮುದಾಯ ಭವನದಿಂದ ಬಡವರು, ಸಾಮಾನ್ಯರಿಗೆ ಅನುಕೂಲ: ಗಣೇಶ್‌ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಡಣಾಯಕನಕೆರೆ ಗ್ರಾಮದಲ್ಲಿ ಬಿಎಂಎಂ ಇಸ್ಪಾತ್‌ ಲಿ. ಮತ್ತು ಜೆಎಸ್‌ಡಬ್ಲೂ ಫೌಂಡೇಶನ್‌ನಿಂದ ಸಮುದಾಯ ಭವನ ನಿರ್ಮಿಸಲಾಗುತ್ತಿದೆ.

ಮರಿಯಮ್ಮನಹಳ್ಳಿ: ಊರಲ್ಲಿ ಒಂದು ಸುಸಜ್ಜಿತ ಸಮುದಾಯ ಭವನ ಇದ್ದರೆ, ಅಲ್ಲಿಯ ಬಡವರು, ಸಾಮಾನ್ಯರು ತಮ್ಮ ಕುಟುಂಬಸ್ಥರ ಮದುವೆ ಕಾರ್ಯಕ್ರಮ ಸೇರಿದಂತೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸಿಕೊಳ್ಳಲು ಅನುಕೂಲವಾಗಲಿದೆ ಎಂದು ಬಿಎಂಎಂ ಇಸ್ಪಾತ್‌ ಲಿಮಿಟೆಡ್‌ ನ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್‌ ಹೆಗಡೆ ಹೇಳಿದರು.

ಇಲ್ಲಿಗೆ ಸಮೀಪದ ಡಣಾಯಕನಕೆರೆ ಗ್ರಾಮದಲ್ಲಿ ಸೋಮವಾರ ಬಿಎಂಎಂ ಇಸ್ಪಾತ್‌ ಲಿ. ಮತ್ತು ಜೆಎಸ್‌ಡಬ್ಲೂ ಫೌಂಡೇಶನ್‌ ಸಹಯೋಗದಲ್ಲಿ ಸುಮಾರು ₹65-70 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಡಣಾಯಕನಕೆರೆ ಗ್ರಾಮದಲ್ಲಿ ಬಿಎಂಎಂ ಇಸ್ಪಾತ್‌ ಲಿ. ಮತ್ತು ಜೆಎಸ್‌ಡಬ್ಲೂ ಫೌಂಡೇಶನ್‌ನಿಂದ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಸುಸಜ್ಜಿತ ಸಮುದಾಯ ಭವನ ನಿರ್ಮಿಸಿಕೊಡಿ ಎಂದು ಕಳೆದ 2-3 ವರ್ಷಗಳಿಂದ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು. ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕಾರ್ಖಾನೆಯ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಸಮುದಾಯ ಭವನಗಳನ್ನು ಕಟ್ಟಿಕೊಡಲಾಗಿದೆ. ಡಣಾಯಕನಕೆರೆ ಗ್ರಾಪಂ ವ್ಯಾಪ್ತಿಯ ಮರಿಯಮ್ಮನಹಳ್ಳಿ ಸಮೀಪದ ಇಂದಿರಾನಗರ, ಡಣಾಪುರ, ಹನುಮನಹಳ್ಳಿ, ಜಿ.ನಾಗಲಾಪುರ, ಗರಗ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದರು.

ಅನೇಕ ಗ್ರಾಮಗಲ್ಲಿ ಸಮುದಾಯ ಭ‍ವನ ಜತೆಗೆ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಶಾಲಾ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶದಿಂದ ಮರಿಯಮ್ಮನಹಳ್ಳಿಗೆ ಶಾಲಾ-ಕಾಲೇಜಿಗೆ ಹೋಗಿ ಬರಲು ಅನುಕೂಲವಾಗಲೆಂದು ಕಂಪನಿಯಿಂದ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ವಿತರಿಸಲಾಗುತ್ತಿದೆ ಎಂದರು.

ಕಂಪನಿಯಿಂದ ಮರಿಯಮ್ಮನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪಕ್ಕೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ. ಕಟ್ಟಡ ನಿರ್ಮಾಣದ ಕಾಮಗಾರಿಯನ್ನು ಆಗಷ್ಟ್‌ ಅಥವಾ ಸೆಪ್ಟೆಂಬರ್‌ ತಿಂಗಳಲ್ಲಿ ಚಾಲನೆ ನೀಡಲಾಗುತ್ತಿದೆ. ಕಲ್ಯಾಣ ಮಂಟಪಕ್ಕೆ ಮೊದಲು ₹2 ರಿಂದ ₹3 ಕೋಟಿ ವೆಚ್ಚವಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಈಗ ಅದು ₹5-6 ಕೋಟಿ ವೆಚ್ಚವಾಗುವ ಸಾಧ್ಯತೆ ಇದೆ ಎಂದರು.

ಗ್ರಾಪಂ ಅಧ್ಯಕ್ಷ ಕೆ.ಚಿನ್ನಾಪುರಿ, ಉಪಾಧ್ಯಕ್ಷ ಎಲ್‌.ನೇತ್ರಾ ಸೂರ್ಯಪ್ರಕಾಶ್‌, ಸದಸ್ಯರಾದ ಎಚ್‌.ನಾಗಪ್ಪ, ಗುಂಡಾಸ್ವಾಮಿ, ಮುಖಂಡರಾದ ಎಸ್‌.ಕೃಷ್ಣನಾಯ್ಕ, ಗರಗ ಪ್ರಕಾಶ್‌ ಪೂಜಾರ್‌, ಅಂಬಳಿ ಚನ್ನಬಸಪ್ಪ, ಟಿ.ಬಸವರಾಜ, ಎ. ಮಂಜುನಾಥ, ಕುಮಾರೆಪ್ಪ, ಡಿ.ಚಿನ್ನಾಪುರಪ್ಪ, ನಾಗರಾಜ, ದ್ಯಾಮಪ್ಪ, ಎಲ್‌.ಸೂರ್ಯಪ್ರಕಾಶ್‌, ಎಲ್‌.ಮಂಜುನಾಥ, ಬ್ಯಾಲಕುಂದಿ ಶ್ರೀನಿವಾಸ, ಈ.ಅಂಬ್ರೇಶ್‌, ಬಿಎಂಎಂ ಇಸ್ಪಾತ್‌ ಯುಟಿಲಿಟಿ ವಿಭಾಗದ ಸಹಾಯಕ ವ್ಯವಸ್ಥಾಪಕ ಮಹೇಶ್‌, ಸಿಬ್ಬಂದಿ ಗಿರೀಶ್‌ ಕಾಕನೂರು, ಅರುಣಕುಮಾರ್‌, ಚಂದ್ರಶೇಖರ್‌, ಮಲ್ಲಿಕಾರ್ಜುನ, ಡಿ.ಬಿ. ನಾಯ್ಕ್‌, ಪಿಡಿಒ ಜಿಲಾನಸಾಹೇಹ್‌ ಉಪಸ್ಥಿತರಿದ್ದರು.