ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಕ್ರೈಸ್ತ ಅಭಿವೃದ್ಧಿ ನಿಗಮವು ಕೇವಲ ಕಟ್ಟಡಗಳಿಗೆ ಅನುದಾನ ನೀಡುವುದಕ್ಕಿಂತ ಸಮುದಾಯವನ್ನು ಕಟ್ಟುವ ಕೆಲಸಕ್ಕೆ ಸೂಕ್ತ ಯೋಜನೆ ಹಾಕಿಕೊಂಡು ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದೆ. ಅದಕ್ಕಾಗಿ ರಾಜ್ಯಾದ್ಯಂತ ಸಮುದಾಯದ ಸಮಾಲೋಚನೆ ನಡೆಸುವುದು ಉತ್ತಮ ಬೆಳವಣಿಗೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.ಅವರು ಉಡುಪಿ ಶೋಕಮಾತಾ ದೇವಾಲಯದ ಆವೆ ಮರಿಯಾ ಸಭಾಂಗಣದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮದ ವತಿಯಿಂದ ಸಮುದಾಯದ ವಿವಿಧ ಸಭೆಗಳ ನಾಯಕರನ್ನು ಒಳಗೊಂಡ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಈ ಬಾರಿ ಅಭಿವೃದ್ಧಿ ನಿಗಮಕ್ಕೆ ಮುಖ್ಯಮಂತ್ರಿಗಳು ಈಗಾಗಲೇ ಮೊದಲ ಹಂತದಲ್ಲಿ 80 ಕೋಟಿ ರು. ಅನುದಾನ ಮಂಜೂರು ಮಾಡಿದ್ದು, ಇದು ಸಮುದಾಯದ ಜನರ ಯೋಜನೆಗಳಿಗೆ ನೇರವಾಗಿ ತಲುಪುವುದರೊಂದಿಗೆ ಬಡವರಿಗೆ ಇದರಿಂದ ಪ್ರಯೋಜನವಾಗಬೇಕು. ಇದು ನಿಗಮದ ಜವಾಬ್ದಾರಿಯಾಗಿದೆ ಎಂದರು.ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಮಾತನಾಡಿ, ಸಿದ್ದರಾಮಯ್ಯ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿದ್ದಾರೆ. ನನಗೆ 12 ಜಿಲ್ಲೆಗಳ ಜವಾಬ್ದಾರಿ ನೀಡಿದ್ದು, ಅಲ್ಲಿಗೆ ಪ್ರವಾಸ ಮಾಡಿ ಸಮುದಾಯದ ಸಲಹೆಗಳನ್ನು ಪಡೆದು, ಜುಲೈ 3ರಂದು ಬೆಂಗಳೂರಿನಲ್ಲಿ ನಿಗಮದ ಸಭೆಯಲ್ಲಿ ಈ ಸಲಹೆಗಳನ್ನು ಪ್ರಸ್ತುತಪಡಿಸುವುದಾಗಿ ತಿಳಿಸಿದರು.ಜಿಲ್ಲಾ ಅಲ್ಪಸಂಖ್ಯಾತ ನಿಗಮದ ಅಧಿಕಾರಿ ಪೂರ್ಣಿಮಾ ಚೂರಿ ಸಮುದಾಯಕ್ಕೆ ಲಭ್ಯವಿರುವ ಯೋಜನೆಗಳ ಮಾಹಿತಿ ನೀಡಿದರು. ವಿವಿಧ ಕ್ರೈಸ್ತ ಸಭೆಗಳ ಪ್ರತಿನಿಧಿಗಳು ಸಲಹೆಗಳನ್ನು ನೀಡಿದರು.ಸಭೆಯಲ್ಲಿ ಸಿಎಸ್ಐ ಐವನ್ ಸೋನ್ಸ್, ಯುಬಿಎಂಸಿ ಸಭೆಯ ಸಂತೋಷ್, ಸೀರಿಯನ್ ಓರ್ಥೊಡೊಕ್ಸ್ ಸಭೆಯ ನೊಯೆಲ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ರೊನಾಲ್ಡ್ ಡಿಆಲ್ಮೇಡಾ, ಸುಗಮ್ಯ ಮಹಿಳಾ ಒಕ್ಕೂಟ ಅಧ್ಯಕ್ಷರಾದ ಸಿಲ್ವೀಯಾ ಸುವಾರಿಸ್ ಉಪಸ್ಥಿತರಿದ್ದರು.ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಸ್ವಾಗತಿಸಿದರು. ಉಡುಪಿ ಶೋಕಮಾತಾ ಚರ್ಚಿನ ಸಹಾಯಕ ಧರ್ಮಗುರು ಲಿಯೋ ಪ್ರವೀಣ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.