ಕನ್ನಡಪ್ರಭ ವಾರ್ತೆ ಬೇಲೂರುತಾಲೂಕು ಕಚೇರಿ ಆವರಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ತಾಲೂಕು ಕಾಫಿ ಬೆಳೆಗಾರರ ಸಂಘದ ವತಿಯಿಂದ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಮನವಿ ಸಲ್ಲಿಸಲಾಯಿತು.ಕಂದಾಯ ಸಚಿವರಿಗೆ ನೀಡಿದ ಮನವಿಯಲ್ಲಿ ಪ್ರಮುಖವಾಗಿ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿಯಿಂದ ಆಪಾರ ಪ್ರಮಾಣದಲ್ಲಿ ತೆಂಗು, ಅಡಿಕೆ, ಮೆಣಸು, ಬಾಳೆ, ಏಲಕ್ಕಿ, ಜೋಳ, ರಾಗಿ, ಭತ್ತ ಹಾಗೂ ಇತರ ಬೆಳೆಗಳ ನಷ್ಟ ಉಂಟಾಗುತ್ತಿದೆ. ಕಾಡಾನೆ ದಾಳಿಗಳಿಂದ ಉಂಟಾಗುತ್ತಿರುವ ಬೆಳೆ ನಷ್ಟಕ್ಕೆ ತಾವು ಇಲಾಖೆಯಿಂದ ಕೊಡುತ್ತಿರುವ ಸೂಕ್ತ ಪರಿಹಾರ ಲಭ್ಯವಾಗುತ್ತಿಲ್ಲ ಜೊತೆಗೆ ಕಾಡಾನೆಗಳು ಎಲ್ಲೆಲ್ಲಿ ಸಂಚರಿಸುತ್ತೇವೆಂದು ನಿಖರವಾದ ಮಾಹಿತಿ ತಿಳಿಯುತ್ತಿಲ್ಲ. ತಾಲೂಕಿನ ಹಲವು ಕಡೆಗಳಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕರು, ಜನ ಸಾಮಾನ್ಯರು, ರೈತರು ವಿಶೇಷವಾಗಿ ಮಹಿಳೆಯರು ಸಾವನ್ನಪ್ಪುತ್ತಿರುವುದು ಹಾಗೂ ಜೀವ ಭಯದಲ್ಲಿ ಬದುಕು ನಡೆಸುತ್ತಿರುವುದು ತೀರಾ ಸಾಮಾನ್ಯವಾಗಿದೆ.ಕಾಡಾನೆ ಸಮಸ್ಯೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಈ ಹಿಂದಿನಿಂದಲೂ ಸಾಕಷ್ಟು ಬಾರಿ ಮನವಿ ಸಲ್ಲಿಸಿ ಹೋರಾಟ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಅಲ್ಲದೆ ಸುಮಾರು 95 ಆನೆಗಳು ಗುಂ ಗುಂಪಾಗಿ ಜಗಬೋರನಹಳ್ಳಿ ಕಾಡಿನಿಂದ ಕಾನಹಳ್ಳಿ ಕಾಡಿನವರೆಗೂ ದಿನನಿತ್ಯ ಸಂಚರಿಸುತ್ತಿರುವುದು ಬೆಳೆಗಾರರಿಗೆ ಸಂಕಷ್ಟವಾಗಿದೆ. ಕಾಡಾನೆಗಳನ್ನು ಸಂಪೂರ್ಣವಾಗಿ ಹಿಡಿದು ಸ್ಥಳಾಂತರಿಸಿ ಕಾಡಾನೆ ಸಮಸ್ಯೆಗಳಿಗೆ ಶೀಘ್ರದಲ್ಲಿ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ತಿಳಿಸಿರುತ್ತಾರೆ. ಕಾಫಿ ಬೆಳೆಯನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸಿರುವುದಕ್ಕೆ ಬದಲಾಗಿ ಕೃಷಿ ಬೆಳೆಯೆಂದು ಪರಿಗಣಿಸಿ 10 ಎಚ್. ಪಿರವರೆಗೆ ಇತರೆ ಜಿಲ್ಲೆ ಹಾಗೂ ತಾಲೂಕುಗಳಿಗೆ ಜಾರಿ ಇರುವಂತೆ ಉಚಿತ ವಿದ್ಯುತ್ ಸರಬರಾಜಿಗೆ ನಮಗೂ ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿಸಿದ್ದಾರೆ. ಸುಮಾರು 5 ರಿಂದ 6 ಕೋಟಿ ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಬೆಳೆಗಾರರಿಗೆ ಬಡ್ಡಿ ಚಕ್ರಬಡ್ಡಿ ರಹಿತವಾಗಿ ಅಟೈಮ್ ಸೆಟ್ಟಲೈಂಟ್ ಮಾಡಿಕೊಳ್ಳಲು ಬೆಳೆಗಾರರಿಗೆ ಅವಕಾಶ ಮಾಡಿಕೊಟ್ಟರೆ ಡಿ.ಬಿ.ಟಿಗೆ ಹೆಚ್ಚು ಆಸಕ್ತಿ ವಹಿಸಬಹುದು. ಅರ್ಜಿ ನಮೂನೆ 53 ನಂತರ 57ರಲ್ಲಿ ಪಡೆದ ಅರ್ಜಿಗಳ ವಿಲೇವಾರಿಗೆ ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು. ಗನ್ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಬಹಳ ದಿನಗಳಾದರೂ ಅನುಮತಿ ಕೊಟ್ಟಿರುವುದಿಲ್ಲ, ಇದಕ್ಕೆ ಸೂಕ್ತ ಕಾರಣ ತಿಳಿದಿರುವುದಿಲ್ಲ. ಈ ಬಗ್ಗೆ ಕೂಡಲೇ ಆಸಕ್ತಿ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸಿದ್ದೇಗೌಡ, ಉಪಾಧ್ಯಕ್ಷ ಶಿವಾನಂದ್, ಪ್ರಧಾನ ಕಾರ್ಯದರ್ಶಿ ವೈ ಡಿ ಲೋಕೇಶ್, ಸಾಲವರ ಕಾಫಿ ತೋಟದ ಮಾಲಿಕ ವೈ ಎನ್ ಕೃಷ್ಣೇಗೌಡ, ಬೆನ್ನೂರು ರೇಣು ಕುಮಾರ್ ಇತರರು ಇದ್ದರು.