ಡಿ.ಕೆ.ಶಿವಕುಮಾರ್‌ ವಿರುದ್ಧ ಎಸ್‌ಐಟಿಗೆ ದೂರು ಕೊಡಲಿ: ದೇವರಾಜೇಗೌಡ

| Published : May 03 2024, 01:00 AM IST

ಡಿ.ಕೆ.ಶಿವಕುಮಾರ್‌ ವಿರುದ್ಧ ಎಸ್‌ಐಟಿಗೆ ದೂರು ಕೊಡಲಿ: ದೇವರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಆಧಾರ ರಹಿತವಾಗಿ ಡಿ.ಕೆ.ಶಿವಕುಮಾರ್ ಮೇಲೆ ಸುಳ್ಳು ಆರೋಪ ಮಾಡುವ ಬದಲು ನೇರವಾಗಿ ಎಸ್‌ಐಟಿಗೆ ದೂರು ಕೊಡಲಿ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಸವಾಲು ಹಾಕಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಡಿಕೆಶಿ ವಿರುದ್ಧ ಆರೋಪ ಮಾಡಿದ್ದ ಮಾಜಿ ಶಾಸಕ ಲಿಂಗೇಶ್‌ಗೆ ಸವಾಲು

ಕನ್ನಡಪ್ರಭ ವಾರ್ತೆ ಹಾಸನ

ಆಧಾರ ರಹಿತವಾಗಿ ಡಿ.ಕೆ.ಶಿವಕುಮಾರ್ ಮೇಲೆ ಸುಳ್ಳು ಆರೋಪ ಮಾಡುವ ಬದಲು ನೇರವಾಗಿ ಎಸ್‌ಐಟಿಗೆ ದೂರು ಕೊಡಲಿ ಎಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಸವಾಲು ಹಾಕಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಕಳೆದ ಒಂದು ವಾರದಿಂದ ಪೆನ್‌ಡ್ರೈವ್ ವಿಚಾರವಾಗಿ ಪ್ರಚಲಿತದಲ್ಲಿರುವ ಎಲ್ಲಾ ವಿದ್ಯಮಾನಗಳನ್ನು ರಾಜ್ಯದ ಜನತೆ ನೋಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಡುಗಡೆಯಾದ ಪೆನ್‌ಡ್ರೈವ್ ಜೆಡಿಎಸ್ ಪಕ್ಷದ ಮುಖಂಡರಿಗೆ ಸೇರಿದೆ ಎಂದು ಮಾಧ್ಯಮದಲ್ಲಿ ಬಿತ್ತರವಾಗಿದೆ. ಈ ಬಗ್ಗೆ ಹಲವಾರು ರಾಜಕೀಯ ಮುಖಂಡರು ಚರ್ಚೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಮತ್ತು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಪೆನ್‌ಡ್ರೈವ್ ವಿಚಾರವಾಗಿ ಮಾತನಾಡಿದ್ದು, ಪೆನ್‌ಡ್ರೈವ್ ಬಿಡುಗಡೆ ಮಾಡಿರುವುದು ಡಿ.ಕೆ.ಶಿವಕುಮಾರ್ ಅವರು ಎನುವ ವಿಚಾರ ಸೇರಿದಂತೆ ಇನ್ನು ಹಲವಾರು ಆರೋಪ ಮಾಡಲಾಗಿದೆ’ ಎಂದು ಹೇಳಿದರು.

‘ನೀವು ಕೇವಲ ಶಾಸಕರಲ್ಲ. ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದು, ನಿಮ್ಮ ಮೇಲೆ ಅಪಾರ ಗೌರವವಿದೆ. ಆಧಾರ ರಹಿತ ಹೇಳಿಕೆ ಕೊಡುವುದು ನಿಮಗೆಷ್ಟು ಸರಿ? ಪ್ರಕರಣದಲ್ಲಿ ಎಸ್‌ಐಟಿ ರಚನೆ ಆಗಿದ್ದು, ಸಂತ್ರಸ್ತರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುತ್ತಿದೆ. ನೇರವಾಗಿ ಎಸ್‌ಐಟಿಗೆ ಬರವಣಿಗೆ ಮೂಲಕ ದೂರು ಕೊಡಲು ಸಾಧ್ಯವಿಲ್ಲ. ಇದು ಸುಳ್ಳು ಆರೋಪ ಮಾಡಿದ್ದು, ಇದು ನಿಮಗೆ ಶೋಭೆ ತರುವುದಿಲ್ಲ. ಸತ್ಯಾಂಶವನ್ನು ತಿಳಿದು ಮಾತನಾಡಿ’ ಎಂದು ತಿರುಗೇಟು ನೀಡಿದರು.

‘ಈಗಾಗಲೇ ಪೆನ್‌ಡ್ರೈವ್ ಹಂಚಿಕೆ ಮಾಡಿದ ಡ್ರೈವರ್ ಕಾರ್ತಿಕ್ ತಾನು ಬಿಜೆಪಿ ಮುಖಂಡ ಡೆವರಾಜೇಗೌಡ ಅವರಿಗೆ ಪೆನ್‌ಡ್ರೈವ್ ಕೊಟ್ಟಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದರೂ ಕಾಂಗ್ರೆಸ್ ಮೇಲೆ ಲಿಂಗೇಶ್ ಅವರು ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಜವಾಬ್ದಾರಿಯುತ ವ್ಯಕ್ತಿಯಾಗಿ ಈ ರೀತಿಯ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿರುವ ಲಿಂಗೇಶ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಕೈವಾಡ ಇದೆ ಎಂದರೆ ಆ ಬಗ್ಗೆ ದಾಖಲೆಗಳಿದ್ದರೆ ಈಗಾಗಲೇ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಂದೆ ಹಾಜರುಪಡಿಸಲಿ’ ಎಂದರು.

ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಮಲ್ಲಿಗೇವಾಳು ದೇವಪ್ಪ, ಕಾಂಗ್ರೆಸ್ ಮುಖಂಡರಾದ ನಾಯಕರ ಹಳ್ಳಿ ಅಶೋಕ್, ಹೊಂಬಳೇಶ್ ಇತರರು ಇದ್ದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ.