ಸಾರಾಂಶ
ನಾಡಪ್ರಭು ಕೆಂಪೇಗೌಡರ ದೂರದೃಷ್ಟಿವುಳ್ಳ ವಿಚಾರ-ಯೋಜನೆಗಳು ನಾಡಿನ ಸರ್ವೋತ್ತಮ ಬೆಳವಣಿಗೆಗೆ ಸಹಕಾರಿಯಾಗಿದ್ದು, ಅವರು ಓರ್ವ ಉತ್ತಮ ಆಡಳಿತಗಾರರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಾಡಪ್ರಭು ಕೆಂಪೇಗೌಡರ ದೂರದೃಷ್ಟಿವುಳ್ಳ ವಿಚಾರ-ಯೋಜನೆಗಳು ನಾಡಿನ ಸರ್ವೋತ್ತಮ ಬೆಳವಣಿಗೆಗೆ ಸಹಕಾರಿಯಾಗಿದ್ದು, ಅವರು ಓರ್ವ ಉತ್ತಮ ಆಡಳಿತಗಾರರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಡಿಗಾಗಿ ತಮ್ಮದೇ ಆದ ವಿಶಿಷ್ಟ ಸೇವೆ ಸಲ್ಲಿಸಿದ ವ್ಯಕ್ತಿಗಳ ನೆನಪಿಡುವ ದೃಷ್ಟಿಯಲ್ಲಿ ಅಂತಹ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿವೆ. ಮಹಾನ್ ವ್ಯಕ್ತಿಗಳು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ಕೆಂಪೇಗೌಡರು ಎಲ್ಲ ವರ್ಗದ ಹಿತವನ್ನು ಬಯಸುವಂತವರಾಗಿದ್ದರು. ಹಿಂದೆ ಹಲವಾರು ರಾಜರ ಸಂಸ್ಥಾನಗಳು ಆಳ್ವಿಕೆ ಮಾಡಿವೆ ಅದರಲ್ಲಿ ಆಡಳಿತ ಒಂದು ಭಾಗವಾಗಿತ್ತು. ಆಡಳಿತದ ಮೇಲೆಯೇ ರಾಜ್ಯಭಾರ ಮಾಡುತ್ತಿದ್ದರು ನಾಡಪ್ರಭು ಕೆಂಪೇಗೌಡರು ನಗರಗಳನ್ನು ನಿರ್ಮಾಣ ಮಾಡುವುದರಲ್ಲಿ ಹಾಗೂ ನಗರಗಳು ಸರ್ವೋತ್ತಮುಖ ಬೆಳೆವಣಿಗೆಗಾಗಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.ಒಂದು ನಗರವನ್ನು ನಿರ್ಮಿಸಲು ಮುಂದಿನ ನೂರಾರು ವರ್ಷಗಳ ಕಾಲ ಬಾಳುವ ಹಾಗೆ ಯೋಜನೆಗಳನ್ನು ರೂಪಿಸುತ್ತಿದ್ದರು. ಬೆಂಗಳೂರಿನ ಸುತ್ತ ಮುತ್ತಲಿನ ಅನುಕೂಲಕರವಾಗಿರುವ ವಾತಾವರಣವನ್ನು ಗಮನಿಸಿ ಬೆಂಗಳೂರು ನಗರವನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿರುವುದಕ್ಕೆ ಅವರನ್ನು ನಾಡಪ್ರಭು ಕೆಂಪೇಗೌಡರು ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ಉಪನ್ಯಾಸ ನೀಡಿ, ನಾಡಿಗಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡಿ ಕರ್ತವ್ಯ ನಿಷ್ಠೆ ಮೆರೆದು ತ್ಯಾಗ, ಬಲಿದಾನ ಮಾಡಿದ ಕೆಂಪೇಗೌಡರ ಬದುಕು ನಮಗೆಲ್ಲ ಮಾದರಿಯಾಗಿದೆ. ಅವರ ಆಡಳಿತದಲ್ಲಿ ದೂರದೃಷ್ಟಿ ಯೋಜನಾ ಬದ್ಧವಾಗಿ ಕಾರ್ಯಗಳನ್ನು ನಿರ್ವಹಿಸುವ ರೀತಿ ನಿಸ್ವಾರ್ಥ ಸೇವೆ ನಮಗೆಲ್ಲ ಪ್ರೇರಣೆಯಾಗಿದೆ. ಬೆಂಗಳೂರು ನಗರ ಜಗತ್ತಿನಾದ್ಯಂತ ಪ್ರಚಲಿತವಾಗಲು ಕೆಂಪೇಗೌಡರ ಯೋಜನಾಬದ್ಧ ಕಾರ್ಯವೇ ಕಾರಣವಾಗಿದೆ ಎಂದು ಹೇಳಿದರು.ನಾಡ ಪ್ರಭು ಕೆಂಪೇಗೌಡರ ಕುರಿತು ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಅಬ್ದುಲ್ ಹಮೀದ ಮುಶ್ರೀಪ್, ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಕವಿತಾ, ಜಿಪಂ ಅಧಿಕಾರಿ ಅನುಸೂಯಾ ಚಲವಾದಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ ಸೌದಾಗರ, ರವಿಕಾಂತ ಬಿರಾದಾರ, ಸಂಕೇತಗೌಡ ಬ್ಯಾಕೋಡ, ಸಿದ್ದು ಹೊಸಮನಿ, ವಸಂತ ಹಂಡಿ, ಕೃಷ್ಣ ಚವ್ಹಾಣ, ಸಿದ್ದು ಆಚೆಗಾವ್, ಭೀಮರಾಯ ಜಿಗಜಿಣಗಿ, ಜಿಲ್ಲಾದಿಕಾರಿಗಳ ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೊಷ ಬೋವಿ ಸ್ವಾಗತಿಸಿ, ವಂದಿಸಿದರು.