ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರಐತಿಹಾಸಿಕ ಶ್ರೀ ಬಂಡಿಮಹಾಕಾಳಿ ಹಾಗೂ ಶ್ರೀ ಚಾಮುಂಡೇಶ್ವರಿ ಕರಗ ಸಾಗುವ ಮಾರ್ಗದ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸುವ ಜೊತೆಗೆ ಸ್ವಚ್ಛತೆ ಕಾರ್ಯ ಕೈಗೊಳ್ಳುವಂತೆ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವ ಸಂಬಂಧ ನಗರದಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿ ಕುರಿತು ಸದಸ್ಯರೊಂದಿಗೆ ಚರ್ಚೆ ನಡೆಸಿದ ಅವರು, ಕರಗ ಮಹೋತ್ಸವದ ವೇಳೆಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಸ್ವಚ್ಛತೆ ಕಾಪಾಡಬೇಕು. ಕುಡಿಯುವ ನೀರಿಗೆ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ತಾಕೀತು ಮಾಡಿದರು.ಆಷಾಢ ಮಾಸದಲ್ಲಿ ಬಂಡಿಮಹಾಕಾಳಿ ಅಮ್ಮನವರ ಕರಗ ಮತ್ತು ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಸಂಭ್ರಮ ಸಡಗರದಿಂದ ನಗರದ ಜನರು ಆಚರಣೆ ಮಾಡುತ್ತಾರೆ. ಈ ವೇಳೆ ಕರಗಗಳು ದೇವಾಲಯ ಮತ್ತು ಮನೆಗಳಲ್ಲಿ ಪೂಜೆ ಸ್ವೀಕರಿಸುವ ಸಂಪ್ರದಾಯವಿದೆ. ಹಾಗಾಗಿ ಯಾವುದೇ ತೊಂದರೆ ಆಗದಂತೆ ಎಂಜಿನಿಯರ್ ಗಳು ದೇವಾಲಯದ ಇಕ್ಕೆಲಗಳು, ರಸ್ತೆಗಳ ಸ್ವಚ್ಛತೆ ಬಗ್ಗೆ ಮುಂಜಾಗೃತಾ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.ಈ ಮಹೋತ್ಸವದಲ್ಲಿ ನೆರೆಯ ಜಿಲ್ಲೆಗಳಿಂದಲೂ ಲಕ್ಷಾಂತರ ಜನರು ಆಗಮಿಸುತ್ತಾರೆ. ಇದು ನಗರಸಭೆಯ ಗೌರವದ ಪ್ರಶ್ನೆ. ನಗರದ ಹಲವೆಡೆ ರಸ್ತೆ ಹಾಗೂ ಕುಡಿಯುವ ನೀರಿನ ಕಾಮಗಾರಿಗಳ ಪ್ರಗತಿಯಲ್ಲಿವೆ. ಅದನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಜನರ ಓಡಾಡಕ್ಕೂ ತೊಂದರೆಯಾಗುತ್ತದೆ. ಎಲ್ಲ ಮುಂಜಾಗೃತೆಗಳನ್ನು ವಹಿಸುವುದು ನಮ್ಮ ನಗರಸಭೆಯ ಆದ್ಯ ಕರ್ತವ್ಯವಾಗಿದೆ ಎಂದು ಶೇಷಾದ್ರಿ ಹೇಳಿದರು.ಸದಸ್ಯ ಮಂಜುನಾಥ್ ಮಾತನಾಡಿ, ಐಜೂರು ಭಾಗದಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಎಲ್ಲ ರಸ್ತೆಗಳು ಗುಂಡಿ ಬಿದ್ದಿವೆ. ಮಳೆ ಬಿದ್ದರೆ ಕೆಸರು, ಮಳೆ ಇಲ್ಲದಿದ್ದರೆ ಧೂಳಿನಿಂದ ಜನರು ರೋಸಿ ಹೋಗಿದ್ದಾರೆ. ಅಲ್ಲಿಯೂ ಸಹ ಕರಗಗಳು ಸಂಚಾರಿಸುತ್ತವೆ. ಹಾಗಾಗಿ ಆ ಭಾಗದಲ್ಲಿ ಗುಂಡಿಗಳನ್ನು ಮುಚ್ಚಿ ರಸ್ತೆ ಸರಿಪಡಿಸುವ ಕೆಲಸ ಮಾಡುವಂತೆ ತಿಳಿಸಿದರು.ಇದಕ್ಕೆ ಧ್ವನಿಗೂಡಿಸಿದ ಸದಸ್ಯರಾದ ನಿಜಾಮುದ್ದೀನ್ ಷರೀಷ್, ಗ್ಯಾಬ್ರಿಯಲ್, ಬಿ.ಸಿ.ಪಾರ್ವತಮ್ಮ, ಮಂಜುಳಾ, ಜಯಲಕ್ಷ್ಮಮ್ಮ, ಸೋಮಶೇಖರ್, ಬೈರೇಗೌಡರವರು ನಗರದಲ್ಲಿ ನಡೆಯುತ್ತಿರುವ ರಸ್ತೆ ಮತ್ತು ನೀರಿನ ಸಂಪರ್ಕ ಕಾಮಗಾರಿಗಳು ಪೂರ್ಣವಾಗಿಲ್ಲ. ಚಾಮುಂಡೇಶ್ವರಿ ಕರಗ ಸಾಗುವ ಬಹುತೇಖ ವಾರ್ಡ್ ಗಳಲ್ಲಿ ಗುತ್ತಿಗೆದಾರರು ವೆಟ್ ಮಿಕ್ಸ್ ಸುರಿದಿದ್ದಾರೆ. ಮಳೆ ಬಂದರೆ ಕರಗ ಹೊರಲು ತೊಂದರೆಯಾಗುತ್ತದೆ. ತುರ್ತಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಭೆಯ ಗಮನ ಸೆಳೆದರು.ಕೈ - ದಳ ಸದಸ್ಯರ ವಾಗ್ವಾದ :ನಗರದ ಈದ್ಗಾ ಮೈದಾನದ ಕಾಂಪೌಂಡ್ ನ ಎತ್ತರವನ್ನು ಹೆಚ್ಚಿಸುವ ಕಾಮಗಾರಿ ನಡೆಯುತ್ತಿದ್ದು, ಇದು ಗುಣಮಟ್ಟದಿಂದ ಕೂಡಿಲ್ಲ. ಎಂಜಿನಿಯರ್ ಗಳು ಸ್ಥಳಕ್ಕೆ ಏಕೆ ಭೇಟಿ ನೀಡಿಲ್ಲ ಎಂದು ಸದಸ್ಯ ಮಂಜುನಾಥ್ ಪ್ರಶ್ನೆ ಮಾಡಿದರು. ಇದಕ್ಕೆ ಹಾರಿಕೆ ಉತ್ತರ ನೀಡಿದ ಎಂಜಿನಿಯರ್ ಅವರನ್ನು ಅಧ್ಯಕ್ಷರು ತರಾಟೆ ತೆಗೆದುಕೊಂಡರು.ನಗರಸಭೆ ವ್ಯಾಪ್ತಿಯಲ್ಲಿ ಯಾವುದೇ ಕೆಲಸಗಳನ್ನು ಮಾಡಬೇಕಾದರು ಅಧ್ಯಕ್ಷರು ಮತ್ತು ಸ್ಥಳೀಯ ಸದಸ್ಯರ ಗಮನಕ್ಕೆ ತರಬೇಕು. ಯಾರೇ ಹೇಳಿದರು ನಮ್ಮ ಗಮನಕ್ಕೆ ತರದೆ ಕೆಲಸ ಮಾಡಬಾರದು ಎಂದು ಶೇಷಾದ್ರಿ ಹೇಳಿದರು. ಆಗ ಮಂಜುನಾಥ್ , ಗುಣಮಟ್ಟದ ಕೆಲಸ ಮಾಡಲಿ, ಇಲ್ಲದಿದ್ದರೆ ನಿಲ್ಲಿಸಲಿ ಎಂದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಅಧ್ಯಕ್ಷರು ಎಲ್ಲರು ಸಮಾಧಾನ ಪಡಿಸಿದರು. ಆಯುಕ್ತ ಡಾ.ಜಯಣ್ಣ ಮಾತನಾಡಿ ನಗರದಲ್ಲಿ ರಾತ್ರಿ ನಿರಾಶ್ರಿತರ ಕೇಂದ್ರ ನಡೆಯುತ್ತಿತ್ತು. ಈಗ ಅದನ್ನು ಮುಂದುವರೆಸಲು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅಲರ್ಟ್ ಫೌಂಡೇಷನ್ ಎಂಬ ಸಂಸ್ಥೆ ನಿರ್ವಹಣೆ ಮಾಡಲು ಮುಂದೆ ಬಂದಿದೆ. ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡಿದರು. ಆಗ ಅಧ್ಯಕ್ಷ ಶೇಷಾದ್ರಿರವರು ನಿರಾಶ್ರಿತರ ಕೇಂದ್ರ ತೆರೆಯುವ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳೋಣ ಎಂದು ಹೇಳಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಆಯಿಷಾಬಾನು ಉಪಸ್ಥಿತರಿದ್ದರು.19ಕೆಆರ್ ಎಂಎನ್ 1.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು.-------------------------------