ಸಾರಾಂಶ
ಶಹಾಪುರ ನಗರಸಭೆ ಸ್ವೀಪ್ ಸಮಿತಿ ವತಿಯಿಂದ ನಗರದ ಪ್ರಮುಖ ಬೀದಿಗಳ ಮೂಲಕ ಮತದಾನ ಜಾಗೃತಿ ಜಾಥಾ ನಡೆಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾಗರಿಕರು ಸದೃಢ ಸಮಾಜ ನಿರ್ಮಾಣಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಸಂದೇಶದೊಂದಿಗೆ ನಗರಸಭೆ ಸ್ವೀಪ್ ಸಮಿತಿ ವತಿಯಿಂದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.ಈ ವೇಳೆ ಮಾತನಾಡಿದ ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ, ದೇಶದ ಭದ್ರತೆ, ಉತ್ತಮ ಸಮಾಜದ ನಿರ್ಮಾಣಕ್ಕೆ ಮತದಾನ ಅಗತ್ಯವಿದೆ. ಹೀಗಾಗಿ ಪ್ರತಿಯೊಬ್ಬರು ಮತದಾನ ಮಾಡಲೇಬೇಕು ಎಂದರು. ಮತದಾನ ಶ್ರೇಷ್ಠವಾಗಿದ್ದು, ನಿಷ್ಕಾಳಜಿ ವಹಿಸದೆ ಮತದಾನ ಮಾಡಬೇಕು. ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಶೇಕಡಾವಾರು ಮತದಾನ ಮಾಡುವ ಮೂಲಕ ದೇಶಕ್ಕೆ ಮಾದರಿ ಕ್ಷೇತ್ರವಾಗಿಸೋಣ ಎಂದರು.
ಮತದಾನ ಪ್ರಕ್ರಿಯೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಚುನಾವಣೆಯಲ್ಲಿ ಭಾಗವಹಿಸಲು ಜನರನ್ನು ಉತ್ತೇಜಿಸಲು ಮತದಾನ ಪ್ರಚಾರಗಳು ಮುಖ್ಯವಾಗಿದೆ. ಮತದಾನದ ಅಭಿಯಾನ ನಡೆಸುವ ಮೂಲಕ ಹೆಚ್ಚಿನ ರೀತಿಯಲ್ಲಿ ಮತದಾನವಾಗುವಂತೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನೀವು ಮತ ಚಲಾಯಿಸಿ ನಿಮ್ಮವರನ್ನು ಮತ ಚಲಾಯಿಸಲು ಉತ್ತೇಜಿಸಬೇಕೆಂದು ಹೇಳಿದರು.ನಗರಸಭೆಯಿಂದ ಹೊರಟ ಜಾಥಾ ಬಸವೇಶ್ವರ ವೃತ್ತದಿಂದ ಹೊಸ ಬಸ್ ನಿಲ್ದಾಣ, ಗಂಗಾ ನಗರ, ಮೋಚಿ ಗಡ್ಡಾ ಮೂಲಕ ಪುನಃ ಬಸವೇಶ್ವರ ವೃತ್ತ ನಗರಸಭೆ ಬಂದು ತಲುಪಿತು. ವ್ಯವಸ್ಥಾಪಕ ಜಿ.ಜಿ. ತಳವಾರ, ಕಂದಾಯ ಅಧಿಕಾರಿ ಶರಣಬಸವ, ಆರೋಗ್ಯ ನಿರೀಕ್ಷಕ ಆಕಾಶ ಪಾಟೀಲ್, ಮಹಿಬೂಬಿ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.