ಕಾಮನ್ವೆಲ್ತ್ ಗೇಮ್ಸ್ಗೆ ವೈಭವದ ತೆರೆ: ಸಮಾರೋಪ ಸಮಾರಂಭದಲ್ಲಿ ಭಾರತೀಯ ಕಲಾವಿದರಿಂದ ಅತ್ಯಾಕರ್ಷಕ ನೃತ್ಯ, ಸಂಗೀತ‘ವಸುಧೈವ ಕುಟುಂಬಕಂ’ ಸಂದೇಶ ರವಾನಿಸಿದ ಭಾರತ । ಮಾನುಷಿ ಚಿಲ್ಲರ್, ಗಾಯಕ ಶಂಕರ್ ಮಹದೇವನ್ ಸೇರಿ ಪ್ರಮುಖರು ಭಾಗಿ
ಗ್ಲಾಸ್ಗೋ: ವೈಭವದ ಸಮಾರೋಪ ಸಮಾರಂಭದ ಮೂಲಕ 2026ರ ಕಾಮನ್ವೆಲ್ತ್ ಗೇಮ್ಸ್ಗೆ ಅಧಿಕೃತವಾಗಿ ತೆರೆ ಬಿದ್ದಿದೆ. ಭಾನುವಾರ ರಾತ್ರಿ ಸ್ಕಾಟ್ಲೆಂಡ್ನ ಪ್ರಮುಖ ನಗರ ಗ್ಲಾಸ್ಗೋದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಿತು. 2030ರ ಗೇಮ್ಸ್ಗೆ ಆತಿಥ್ಯ ಹಕ್ಕು ಭಾರತ ಪಡೆದಿರುವುದರಿಂದಾಗಿ, ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಬಿಂಬಿಸುವ ನೃತ್ಯ, ಸಂಗೀತ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರಾಶಸ್ತ್ರ ನೀಡಲಾಗಿತ್ತು. ಇದು ಎಲ್ಲರ ಗಮನಸೆಳೆಯಿತು.
3ನೇ ಕಿಂಗ್ ಚಾರ್ಲ್ಸ್ ಪ್ರತಿನಿಧಿಯಾಗಿ ಎಡಿನ್ಬರ್ಗ್ ರಾಜಮನೆತನದ ಪ್ರಿನ್ಸ್ ಎಡ್ವರ್ಡ್ ಅವರು ಅಧಿಕೃತವಾಗಿ ಕ್ರೀಡಾಕೂಟ ಮುಕ್ತಾಯಗೊಂಡಿದ್ದಾಗಿ ಘೋಷಿಸಿದರು. ‘ನೀವು ಮತ್ತೊಮ್ಮೆ ಕಾಮನ್ವೆಲ್ತ್ ಗೇಮ್ಸ್ನ ಮೌಲ್ಯ, ಉತ್ಸಾಹವನ್ನು ಎತ್ತಿ ಹಿಡಿದಿದ್ದೀರಿ. ಗ್ಲಾಸ್ಗೋಗೆ ಧನ್ಯವಾದಗಳು. ಎಲ್ಲಾ ದೇಶಗಳ ಕ್ರೀಡಾಪಟುಗಳಿಗೆ ಭಾರತದ ಅಹಮದಾಬಾದ್ಗೆ ಸ್ವಾಗತ’ ಎಂದು ಹೇಳಿದರು. ಪಥಸಂಚಲನದಲ್ಲಿ ಬಾಕ್ಸರ್ ಜಾಸ್ಮೀನ್ ಲಂಬೋರಿಯಾ ಅವರು ಭಾರತದ ಧ್ವಜ ಹಿಡಿದು ಸಾಗಿದರು.
‘ವಸುದೈವ ಕುಟುಂಬಕಂ’ ಸಂದೇಶ:
ಸಮಾರಂಭದಲ್ಲಿ ಭಾರತವು ‘ವಸುಧೈವ ಕುಟುಂಬಕಂ’(ವಿಶ್ವವೇ ಒಂದು ಕುಟಂಬ) ಎಂಬ ಸಂದೇಶವನ್ನು ರವಾನಿಸಿತು. 150ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ವಂದೇ ಮಾತರಂ ಗೀತೆಗೂ ವಿಶೇಷ ಗೌರವ ಸಲ್ಲಿಸಲಾಯಿತು. ನಟಿ ಮಾನುಷಿ ಚಿಲ್ಲರ್ ಅವರು ಈ ವೇಳೆ ನೃತ್ಯ ಪ್ರದರ್ಶಿಸಿದರು.
ನೂರಕ್ಕೂ ಹೆಚ್ಚು ಕಲಾವಿದರು ನೃತ್ಯ ಪ್ರದರ್ಶನ
ಖ್ಯಾತ ಗಾಯಕ ಶಂಕರ್ ಮಹದೇವನ್, ಅವರ ಪುತ್ರರಾದ ಸಿದ್ಧಾರ್ಥ್, ಶಿವಮ್ ಮಹದೇವನ್ರ ಸಂಗೀತದ ವೇಳೆ, ಭಾರತದ ವಿವಿಧತೆಯಲ್ಲಿ ಏಕತೆ, ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿ ನೂರಕ್ಕೂ ಹೆಚ್ಚು ಕಲಾವಿದರು ನೃತ್ಯ ಪ್ರದರ್ಶನ ನೀಡಿದರು. ಭಾರತದ ಸಿತಾರ್ ವಾದಕ ರಿಷಭ್ ಶರ್ಮಾ ಅವರು ಸ್ಕಾಟ್ಲೆಂಡ್ನ ಗಾಯಕ ರೋಸ್ ಐನ್ಸ್ಲಿ ಜೊತೆಗೂಡಿ ‘ಸಾಂಸ್ಕೃತಿಕ ಜುಗಲ್ಬಂದಿ’ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ಗುಜರಾತ್ನ ಹಿನ್ನೆಲೆ ಗಾಯಕಿ ಭೂಮಿ ತ್ರಿವೇದಿ ಅವರು ಗುಜರಾತ್ನ ಕಲೆ, ಸಂಸ್ಕೃತಿ ಬಿಂಬಿಸುವ ಪ್ರದರ್ಶನ ನೀಡಿದರು.

