ಸಾರಾಂಶ
ಬೆಳಗಾವಿಯ ಬಾಳೆಕುಂದ್ರೆಯಲ್ಲಿ ಕೆಎಸ್ ಆರ್ ಟಿಸಿ ನಿರ್ವಾಹಕನ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಹಾಗೂ ಸುಳ್ಳು ಫೋಕ್ಸೋ ಮೊಕದ್ದಮೆ ದಾಖಲಿಸಿರುವ ಪೊಲೀಸ್ ಅಧಿಕಾರಿಗಳ ನಡೆಗೆ ತೀವ್ರ ವಿರೋಧಿಸಿ, ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬೆಳಗಾವಿಯ ಬಾಳೆಕುಂದ್ರೆಯಲ್ಲಿ ಕೆಎಸ್ ಆರ್ ಟಿಸಿ ನಿರ್ವಾಹಕನ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಹಾಗೂ ಸುಳ್ಳು ಫೋಕ್ಸೋ ಮೊಕದ್ದಮೆ ದಾಖಲಿಸಿರುವ ಪೊಲೀಸ್ ಅಧಿಕಾರಿಗಳ ನಡೆಗೆ ತೀವ್ರ ವಿರೋಧಿಸಿ, ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದ ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿದರು.ಮರಾಠಿ ಪುಂಡರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಬಸ್ ನಿರ್ವಾಹಕನ ಮೇಲಿನ ಹಲ್ಲೆಕೋರರ ವಿರುದ್ದ ರೌಡಿ ಶೀಟ್ ತೆರೆದು ಅವರನ್ನು ಬೆಳಗಾವಿ ಜಿಲ್ಲೆಯಿಂದಲೇ ಗಡಿ ಪಾರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಕರವೇ ಪದವೀಧರ ಅಧ್ಯಕ್ಷ ಚಿಕ್ಕೋನಹಳ್ಳಿ ಚೇತನಕುಮಾರ್, ಸಾರಿಗೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿದ್ದರೂ ರಾಜ್ಯ ಸರ್ಕಾರ ಅವರ ರಕ್ಷಣೆಗೆ ನಿಂತಿರುವಂತಿದೆ. ಕಂಡಕ್ಟರ್ ವಿರುದ್ಧ ಪೊಲೀಸ್ ಅಧಿಕಾರಿಗಳು ಸುಳ್ಳು ಫೋಕ್ಸೋ ಮೊಕದ್ದಮೆ ಹೂಡಿರುವುದನ್ನು ಖಂಡಿಸಿದರು.ಇದು ನಾಗರಿಕರು ನಾಚಿಕೆ ಪಡುವ ವಿಚಾರವಾಗಿದೆ. ಕೂಡಲೇ ಸುಳ್ಳು ಮೊಕದ್ದಮೆ ಹೂಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಅಮಾನತು ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.
ಕನ್ನಡಿಗರಿಗೂ ತಾಳ್ಮೆ ಇದೆ. ಅದನ್ನು ಪರೀಕ್ಷೆ ಮಾಡಲು ಅಥವಾ ಕೆಣಕಲು ಹೋಗಬೇಡಿ. ಕನ್ನಡಿಗರ ಮೇಲೆ ದಬ್ಬಾಳಿಕೆಯಾಗುತ್ತಿದೆ. ಕನ್ನಡ ಭಾಷೆಗೆ ದೇಶದಲ್ಲಿ ವಿಶೇಷ ಸ್ಥಾನಮಾನವಿದ್ದು, ದೇಶದ ಪ್ರತಿಯೊಬ್ಬ ನಾಗರಿಕನೂ ಗೌರವ ಕೊಡುವ ಕೆಲಸವನ್ನು ಮಾಡಬೇಕು. ಇಲ್ಲದಿದ್ದರೆ ನಾವೇ ಗೌರವ ಕೊಡುವ ಹಾಗೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಉಪ ತಹಸೀಲ್ದಾರ್ ಲೋಕೇಶ್ ಅವರಿಗೆ ಮನವಿ ಪತ್ರ ಅರ್ಪಿಸಿದರು.ತಾಲೂಕು ಕರವೇ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಜಿಲ್ಲಾ ಉಪಾಧ್ಯಕ್ಷ ಶಿವಪ್ರಸಾದ್, ಗೌರವ ಸಲಹೆಗಾರರಾದ ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ, ಉಪಾಧ್ಯಕ್ಷ ಹೊಸಹೊಳಲು ಗೋಪಿ, ನಗರ ಘಟಕ ಅಧ್ಯಕ್ಷ ಮದನ್, ಯುವ ಘಟಕ ಅಧ್ಯಕ್ಷ ಸ್ವಾಮಿ, ಆನಂದ್, ಕಾರ್ಯದರ್ಶಿ ಮನು, ಮಾಧ್ಯಮ ಉಸ್ತುವಾರಿ ಚೇತನ, ಲೋಕೇಶ್, ಹರೀಶ್, ಅಜಯ್, ನಜೀರ್, ನಂಜುಂಡಸ್ವಾಮಿ, ಶ್ರೀನಿವಾಸ್ ಸೇರಿ ಇತರರು ಹಾಜರಿದ್ದರು.