ದೇವಾಲಯಗಳ ಹಣ ದುರ್ಬಳಕೆಗೆ ಖಂಡನೆ

| Published : Mar 05 2025, 12:33 AM IST

ಸಾರಾಂಶ

ಶಿಕಾರಿಪುರ: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲ ಅಧಿಕಾರಿಗಳು ದೇವಸ್ಥಾನಗಳಿಗೆ ಸಂಬಂಧಿಸಿದ ಕೋಟ್ಯಂತರ ಹಣವನ್ನು ಭ್ರಷ್ಟಾಚಾರ ಮಾಡಿರುವುದನ್ನು ಖಂಡಿಸಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ಮಂದಿರ ಮಹಾಸಂಘ, ವಿವಿಧ ಹಿಂದೂ ಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಧಾರ್ಮಿಕ ದತ್ತಿ ಇಲಾಖೆಯ ಸಚಿವರಿಗೆ ಇಲ್ಲಿನ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.

ಶಿಕಾರಿಪುರ: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಕೆಲ ಅಧಿಕಾರಿಗಳು ದೇವಸ್ಥಾನಗಳಿಗೆ ಸಂಬಂಧಿಸಿದ ಕೋಟ್ಯಂತರ ಹಣವನ್ನು ಭ್ರಷ್ಟಾಚಾರ ಮಾಡಿರುವುದನ್ನು ಖಂಡಿಸಿ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ಮಂದಿರ ಮಹಾಸಂಘ, ವಿವಿಧ ಹಿಂದೂ ಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಧಾರ್ಮಿಕ ದತ್ತಿ ಇಲಾಖೆಯ ಸಚಿವರಿಗೆ ಇಲ್ಲಿನ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು.

ಈ ವೇಳೆ ಅಲ್ಲಮಪ್ರಭು ಹಿರಿಯ ನಾಗರಿಕ ಸಂಘದ ಅಧ್ಯಕ್ಷ ಹಾಗೂ ಹಿಂದೂ ಪರ ಸಂಘಟನೆ ಮುಖಂಡ ಬಿ.ವಿ.ಮಂಜುನಾಥ್ ಬೇಗೂರು ಮಾತನಾಡಿ, 2023ರಿಂದ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರೆವಿನ್ಯೂ ಇನ್ಸ್‌ಪೆಕ್ಟರ್ ಹೇಮಂತ್ ಕುಮಾರ್ ಇಬ್ಬರು ತಹಸೀಲ್ದಾರರು ಮತ್ತು ಓರ್ವ ಕೇಸ್ ವರ್ಕರ್ ಸಹಿ ಮತ್ತು ಮುದ್ರೆ ನಕಲು ಮಾಡಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ 60 ಲಕ್ಷ ರು. ಹಣವನ್ನು ಹೆಂಡತಿ ಮತ್ತು ಸಂಬಂಧಿಕರ ಖಾತೆಗೆ ವರ್ಗಾವಣೆ ಮಾಡಿ ಹಣ ಲೂಟಿ ಮಾಡಿದ್ದಾನೆ. ಲಿಂಗಸುಗೂರಿನ ತಹಸೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಯಲ್ಲಪ್ಪ ತನ್ನ ಹೆಂಡತಿ ಹಾಗೂ ಮಕ್ಕಳ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿನ ದೇವಸ್ಥಾನಗಳ ಅರ್ಚಕರಿಗೆ ಮೀಸಲಿಟ್ಟ 1,87,86,561 ರುಪಾಯಿಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ಕೋಟ್ಯಂತರ ಹಣವನ್ನು ಲೂಟಿ ಮಾಡಿದ್ದಾನೆ ಎಂದು ಆರೋಪಿಸಿದರು.

ಈ ಪ್ರಕರಣವು ಅತ್ಯಂತ ಗಂಭೀರವಾಗಿದ್ದು, ಪ್ರಕರಣದ ತನಿಖೆ ಮಾಡಲು ವಿಶೇಷ ತನಿಖಾ ದಳವನ್ನು ನೇಮಿಸಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾದ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಅಮಾನತುಗೊಳಿಸಿ, ಬಂಧಿಸುವ ಮೂಲಕ ಶಿಕ್ಷೆಯಾಗುವಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯದ ಇತರ ಜಿಲ್ಲೆಗಳಲ್ಲೂ ಈ ರೀತಿಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಅಧಿಕಾರಿಗಳಿಂದ ಇಂತಹ ಭ್ರಷ್ಟಾಚಾರಗಳು ನಡೆಯುತ್ತಿವೆಯೇ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಧಿಯ ದುರ್ಬಳಕೆ ತಡೆಯಲು ಕಠಿಣ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಬೇಕು. ದೇವಾಲಯಗಳ ನಿಧಿಗಳು ಸರಿಯಾದ ರೀತಿ ನಿರ್ವಹಣೆ ಮಾಡಲು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಹಣ ಕೇವಲ ದೇವಸ್ಥಾನಗಳ ಅಭಿವೃದ್ಧಿ, ಧರ್ಮಪ್ರಸಾರ, ದೇವಸ್ಥಾನಗಳ ಮೂಲಭೂತ ಸೌಕರ್ಯಗಳಿಗಾಗಿ ವಿನಿಯೋಗವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮಂದಿರ ಮಹಾಸಂಘದ ಸದಸ್ಯ ವಿ.ರಾಮಣ್ಣ, ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಎಸ್.ವೆಂಕಟೇಶ್, ಶ್ರೀ ತುಳಜಾಭವಾನಿ ದೇವಸ್ಥಾನದ ಅಧ್ಯಕ್ಷ ಅರ್ಜುನ್ ರಾವ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಿ.ಪಿ.ನಾರಾಯಣ್ ರಾವ್, ಸವಿತ ಯುವಕ ಸಂಘದ ಅಧ್ಯಕ್ಷ ಎಸ್.ಮಧುಕುಮಾರ್, ಹಿಂದೂ ಜನ ಜಾಗೃತಿ ಸಮಿತಿಯ ಪರಶುರಾಮ, ಈರೇಶ್, ವಿ.ರಘು, ಎಂ.ಎನ್.ಶ್ರೀನಿವಾಸ್, ಎಂ.ವಿಜಯ ಭಾಸ್ಕರ್, ಆರ್.ಬಾಲರಾಜ್, ಭಾಸ್ಕರ್, ಅಜಿತ್ ಮತ್ತಿತರರು ಹಾಜರಿದ್ದರು.