ಸಂಘದ ಷೇರುದಾರರು, ರೈತರ ಪ್ರತಿಭಟನೆಕನ್ನಡಪ್ರಭ ವಾರ್ತೆ ಹಳಿಯಾಳ

ತಾಲೂಕಿನ ಬೆಳವಟಗಿ ಗ್ರಾಮದ ಶ್ರೀ ಬಸವೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ನಡೆದಿರುವ ಕೊಟ್ಯಾಂತರ ರೂಪಾಯಿಗಳ ಅವ್ಯವಹಾರ, ಅಧಿಕಾರಗಳ ದುರ್ಬಳಕೆಯ ಸಮಗ್ರ ತನಿಕೆಯಾಗಬೇಕು ಹಾಗೂ ಕೃಷಿ ಹಂಗಾಮಿಗಾಗಿ ರೈತರಿಗೆ ಅವಶ್ಯಕವಾಗಿರುವ ಬೆಳೆಸಾಲವನ್ನು ನೀಡಬೇಕೆಂದು ಆಗ್ರಹಿಸಿ ಸಂಘದ ವ್ಯಾಪ್ತಿಗೊಳಪಡುವ ಷೇರುದಾರರು, ರೈತರು ಹಾಗೂ ಸಂಘದ ನಿರ್ದೇಶಕ ಮಂಡಳಿಯ ಸದಸ್ಯರು ಮಂಗಳವಾರ ಸಂಘದ ಕಚೇರಿಯೆದುರು ಪ್ರತಿಭಟನೆ ನಡೆಸಿದರು.

ಕೃಷಿ ಹಂಗಾಮನ್ನು ನಡೆಸಲು ರೈತರಿಗೆ ಸೂಕ್ತ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.

ಸಂಘದ ನಿರ್ದೇಶಕ ಮಂಡಳಿಯ ಸದಸ್ಯ ಸಂಜು ಮಿಶಾಳೆಯವರು ಮಾತನಾಡಿ, ಸಂಘದಲ್ಲಿ ನಡೆದಿರುವ ಅಧಿಕಾರ ದುರ್ಬಳಕೆ, ಕೊಟ್ಯಾಂತರ ರೂಪಾಯಿಗಳ ಅವ್ಯವಹಾರಗಳ ಕುರಿತು ಅಂಕಿಅಂಶಗಳೊಂದಿಗೆ ವಿವರಿಸಿದರು.

ಕೃಷಿ ಹಂಗಾಮು ಆರಂಭವಾಗಿದ್ದು, ರೈತರಿಗೆ ಕೃಷಿ ಕೆಲಸವನ್ನು ಸುಗಮವಾಗಿ ನಡೆಸಲು ಬೇಕಾಗಿರುವ ಬೆಳೆಸಾಲವನ್ನು ಸಹ ಈ ಸಹಕಾರಿ ಸಂಘವು ಅವಕಾಶ ನೀಡದೇ ಇಂದು ಬಾ, ನಾಳೆ ಬಾ ಎಂದು ಕಾಡಿಸುತ್ತಿದೆ. ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸೇರಿಕೊಂಡು ತಮಗೆ ಬೇಕಾದವರಿಗೆ ಮಾತ್ರ ಸಾಲ ಸೌಲಭ್ಯ ನೀಡುತ್ತಿದ್ದಾರೆ ಎಂದು ಆರೋಪಿಸಿದರು.


ಗ್ರಾಮೀಣ ಭಾಗದ ರೈತರಿಗೆ ಜೀವನಾಡಿ ಆಗಬೇಕಾಗಿದ್ದ ಸಹಕಾರಿ ಸಂಘವು ಆಡಳಿತ ಮಂಡಳಿ ಮತ್ತು ಕಾರ್ಯದರ್ಶಿಗಳ ದುರಾಚಾರದಿಂದಾಗಿ ರೈತರಿಗೆ ಆಸರೆ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನಾಕಾರರ ಆರೋಪಗಳಿಗೆ ಉತ್ತರಿಸಿದ ಸಂಘದ ಕಾರ್ಯದರ್ಶಿ ಎಸ್.ಆರ್. ಮಂಗನಗೌಡ್ರ ಸಂಘದಿಂದ ₹7ಕೋಟಿ ಕಟ್ಟಬಾಕಿಯಿದ್ದು, ಈಗಾಗಲೇ ಅದರಲ್ಲಿ ₹3.5ಕೋಟಿ ಸಾಲ ತುಂಬಲಾಗಿದೆ, ಸಾಲವನ್ನು ಮರುಪಾವತಿಸಿದ ಷೇರುದಾರರಿಗೆ ಬೆಳೆಸಾಲವನ್ನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸಹಕಾರಿ ಸಂಘದ ಅಧ್ಯಕ್ಷ ಬಾಬು ಪಾಗೋಜಿ ಪ್ರತಿಕ್ರಿಯಿಸಿ, ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿರುವುದಿಲ್ಲ, ನಡೆದಿದ್ದರೇ ಅದಕ್ಕೆ ಚರ್ಚಿಸಲು ಸೂಕ್ತ ವೇದಿಕೆ ಇವೆ. ಸಂಘದ ಮಾಸಿಕ ಸಭೆಯಲ್ಲೂ ಚರ್ಚಿಸಬಹುದು ಎಂದರು.

ಪ್ರಭಾರೆ ಸಹಕಾರಿ ಅಭಿವೃದ್ಧಿ ಅಧಿಕಾರಿ ಎಸ್.ಬಿ. ಪೂಜಾರ ಹಾಗೂ ಕೆಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಆದಂಸಾಬ ನಾಯಕ ಮಾತನಾಡಿ, ಬೆಳೆಸಾಲ ತುಂಬಿದ ಷೇರುದಾರರಿಗೆ ಜೂನ್ ಮೊದಲ ವಾರದಲ್ಲಿಯೇ ಮರುಸಾಲ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಂಘದಲ್ಲಿ ನಡೆದಿದೆ ಎಂದು ಕೇಳಿ ಬರುವ ಅಪಾದನೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸಹದೇವ ಮಾಳ್ವಿ, ಅಪ್ಪಾರಾವ್ ಕೊಳದಾರ, ಇಬ್ರಾಹಿಂ ಮುಲ್ಲಾ, ಗಣಪತಿ ಮಾಳ್ವಿ, ಮಾವಳು ಮಂಗನಗೌಡ್ರ ಹಾಗೂ ಇತರರಿದ್ದರು.