ಸಾರಾಂಶ
- ಡಿಸಿ ಕಚೇರಿ ಸಭಾಂಗಣದಲ್ಲಿ ಮಹಿಳೆಯರ ಸಬಲೀಕರಣ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಾ.ನಾಗಲಕ್ಷ್ಮೀ ಚೌಧರಿ ಸೂಚನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮಹಿಳೆಯರು ಹಾಗೂ ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಕಡಿವಾಣ ಹಾಕಲು ಶಾಲಾ ಕಾಲೇಜುಗಳಲ್ಲಿ ಆತ್ಮರಕ್ಷಣಾ ಕಲೆ, ಕೌಶಲ್ಯತೆ ಮತ್ತು ತುರ್ತು ಸಹಾಯವಾಣಿಗಳ ಬಗ್ಗೆ ವ್ಯಾಪಕ ಅರಿವು ಮೂಡಿಸುವ ಅಗತ್ಯವಿದೆ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳೆಯರ ಸಬಲೀಕರಣದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಇಲಾಖೆಯಿಂದ ಸರ್ಕಾರಿ ಶಾಲಾ, ಕಾಲೇಜು, ಹಾಸ್ಟೆಲ್ಗಳಲ್ಲಿನ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಬಗ್ಗೆ ಅರಿವು ಮೂಡಿಸಲಾಗಿದೆ. ಇದೇ ರೀತಿ ಖಾಸಗಿ ಸಂಸ್ಥೆಗಳ ಎಲ್ಲ ಶಾಲಾ, ಕಾಲೇಜು ಮತ್ತು ಹಾಸ್ಟೆಲ್ಗಳಲ್ಲಿಯೂ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ರಕ್ಷಣೆ, ದೌರ್ಜನ್ಯ ತಡೆ ಕುರಿತು ವ್ಯಾಪಕ ಅರಿವು ಮೂಡಿಸಬೇಕು. ಇದರಿಂದ ಪೋಕ್ಸೋ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಲಿವೆ ಎಂದರು.
ಕೆಲವು ಶಾಲಾ, ಕಾಲೇಜುಗಳಲ್ಲಿ ಶಿಕ್ಷಕರಿಂದಲೇ ಲೈಂಗಿಕ ಕಿರುಕುಳ ಪ್ರಕರಣಗಳನ್ನು ನೋಡಲಾಗಿದೆ. ಆದ್ದರಿಂದ ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ಒಳಗಾದಾಗ ಧೈರ್ಯವಾಗಿ ದೂರುಗಳನ್ನು ನೀಡುವ ನಿಟ್ಟಿನಲ್ಲಿ ಆತ್ಮಸ್ಥೈರ್ಯ ಮೂಡಿಸುವ ಕೆಲಸ ವ್ಯಾಪಕವಾಗಿ ಮಾಡಬೇಕಾಗಿದೆ ಎಂದರು.ಸಿಸಿಟಿವಿ ಹೆಚ್ಚಳಕ್ಕೆ ಸೂಚನೆ:
ನಗರ ಹಾಗೂ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಹೆಚ್ಚಿಸಬೇಕು. ಮೊನ್ನೆ ಹುಬ್ಬಳ್ಳಿ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಾವಳಿಯಿಂದಾಗಿ ತುರ್ತಾಗಿ ಅಪರಾಧಿಯನ್ನು ಪತ್ತೆ ಮಾಡಲು ಸಾಧ್ಯವಾಯಿತು. ಎಲ್ಲ ಶಾಲಾ, ಕಾಲೇಜುಗಳಲ್ಲಿ ಸಂಪೂರ್ಣ ನಿಗಾ ವಹಿಸಬೇಕು ಎಂದರು.ಮುನ್ನೆಚ್ಚರಿಕೆ ವಹಿಸಿ:
ವಿವಿಧ ಕಾರಣಗಳಿಗೆ ಮಹಿಳೆಯರ ಕೊಲೆ ಪ್ರಕರಣಗಳು ನಡೆದಿರುವುದು ವರದಿಯಾಗಿವೆ. 2023 ರಿಂದ 2025ರ ವರೆಗೆ 19 ಮಹಿಳಾ ಕೊಲೆ ಪ್ರಕರಣ, 15 ವರದಕ್ಷಿಣೆ ಕಿರುಕುಳದ ಸಾವು, ಅನೈತಿಕ ಸಾಗಣೆ ತಡೆ ಐಟಿಪಿ ಕಾಯಿದೆಯಡಿ 14 ಪ್ರಕರಣ, ಕಿರುಕುಳ ಪ್ರಕರಣದಡಿ 152, ಡಿಪಿ ಕಾಯಿದೆಯಡಿ 183, ಮಹಿಳಾ ಕಿರುಕುಳದಡಿ 475 ಪ್ರಕರಣಗಳು ದಾಖಲಾಗಿವೆ. ಮಹಿಳೆ ಕಾಣೆ ಪ್ರಕರಣಗಳಡಿ 1370 ಮಹಿಳೆಯರು ಹಾಗೂ 170 ಹುಡುಗಿಯರು ನಾಪತ್ತೆ ಪ್ರಕರಣ ದಾಖಲಾಗಿದ್ದು, ಇವುಗಳಲ್ಲಿ ಹಲವು ಪ್ರಕರಣಗಳಲ್ಲಿ ಪತ್ತೆಹಚ್ಚಲಾಗಿದೆ, ಕೆಲವು ಪ್ರಕರಣಗಳು ತನಿಖೆ ಹಂತದಲ್ಲಿವೆ. ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.ಮಹಿಳಾ ಕೌನ್ಸಿಲಿಂಗ್ ಕೇಂದ್ರ ಶೀಘ್ರ ಆರಂಭ:
ಮಹಿಳಾ ದೌರ್ಜನ್ಯ ಸೇರಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಲು ಮಹಿಳಾ ಕೌನ್ಸಿಲಿಂಗ್ ಕೇಂದ್ರ ಆರಂಭಿಸಲು ರಾಷ್ಟ್ರೀಯ ಮಹಿಳಾ ಆಯೋಗ ನಿರ್ಧರಿಸಿದೆ. ರಾಜ್ಯದಲ್ಲಿಯೂ ಈ ಕೇಂದ್ರವನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಕಡಿಮೆ ಮಾಡಲು ದಾವಣಗೆರೆಯಲ್ಲಿ ಹೊಸದಾಗಿ ಮಹಿಳೆಯರ ಕೌನ್ಸಿಲಿಂಗ್ ಕೇಂದ್ರವನ್ನು ಆದಷ್ಟು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದರು.ಸಭೆಯಲ್ಲಿ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಎಸ್ಪಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
- - -(ಬಾಕ್ಸ್) * ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ ಅನೇಕ ಹಳ್ಳಿಗಳಲ್ಲಿ ಅಕ್ರಮವಾಗಿ ಅಂಗಡಿ, ಮನೆಗಳಲ್ಲಿ ಮದ್ಯ ಮಾರಾಟ ಮಾಡುವುದರಿಂದ ಕುಟುಂಬಗಳು ಹಾಳಾಗಿವೆ ಎಂಬುದು ಮಹಿಳೆಯರ ದೂರುಗಳಾಗಿವೆ. ಯಾವುದೇ ಕಾರಣಕ್ಕೂ ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ಬೇಡ. ಪಂಚಾಯಿತಿಗಳಿಂದ ಗ್ರಾಮಗಳಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡಬೇಕಾಗಿದೆ. ಜಗಳೂರು ತಾಲೂಕಿನ ಹನುಮಂತಪುರ ಗೊಲ್ಲರಹಟ್ಟಿಯಲ್ಲಿ ಕನಿಷ್ಠ ಮೂಲಸೌಕರ್ಯ ಕೊರತೆ ಇದೆ. ಇಲ್ಲಿ ಸರಿಯಾದ ರಸ್ತೆ, ಬಸ್ ಸೌಕರ್ಯಗಳಿಲ್ಲ. ತುರ್ತಾಗಿ ಕೆಎಸ್ಆರ್ಟಿಸಿ ಬಸ್ ಕಲ್ಪಿಸಬೇಕು. ವಿದ್ಯುತ್ ಪರಿವರ್ತಕ ಅಳವಡಿಸಿ ನಿರಂತರ ವಿದ್ಯುತ್ ಪೂರೈಸಬೇಕು ಎಂದ ಅವರು, ಗ್ರಾ.ಪಂ.ಗಳಲ್ಲಿ ನಿಯಮಿತವಾಗಿ ಗ್ರಾಮಸಭೆಗಳು ನಡೆಸಬೇಕು. ಆಸ್ಪತ್ರೆಗಳಲ್ಲಿ ಸ್ವಚ್ಚತೆ, ಔಷಧಗಳ ದಾಸ್ತಾನು, ಹೊರಗುತ್ತಿಗೆಯಡಿ ಕಾರ್ಮಿಕರಿಗೆ ಆಗುತ್ತಿರುವ ಶೋಷಣೆ ತಪ್ಪಿಸಲು ಆದಷ್ಟು ಬೇಗ ಜಿಲ್ಲಾ ಕಾರ್ಮಿಕರ ಸೊಸೈಟಿ ಆರಂಭಿಸಲು ತಿಳಿಸಿದರು.
- - --16ಕೆಡಿವಿಜಿ38: ದಾವಣಗೆರೆ ಡಿಸಿ ಕಚೇರಿ ಸಭಾಂಗಣದಲ್ಲಿ ಮಹಿಳೆಯರ ಸಬಲೀಕರಣ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಹಿಳಾ ಆಯೋಗ ರಾಜ್ಯಾಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿದರು.