ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ ಧೈರ್ಯ ತುಂಬುವುದರ ಜತೆಗೆ ಪ್ರತಿಭೆ ಗುರುತಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ತಿಳಿಸಿದರು.
ನಗರದ ಗೆದ್ದಲಹಳ್ಳಿ ರಸ್ತೆಯಲ್ಲಿರುವ ಶೇಷಾದ್ರಿಪುರಂ ಶಾಲೆಯಲ್ಲಿ ‘ಪ್ರಭಾಂಜನಂ’ ಎಂಬ ಹೆಸರಿನಡಿ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದಿನ ಕಲಿಕೆಗೂ ಮತ್ತು ಇಂದಿನ ಕಲಿಕೆಗೂ ಇರುವ ವ್ಯತ್ಯಾಸದ ಬಗ್ಗೆ ಮಕ್ಕಳಿಗೆ ತಿಳಿಸುವ ಅಗತ್ಯವಿದೆ. ವಿದ್ಯಾರ್ಥಿಗಳ ಸಾಮಾಜಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಶೇಷಾದ್ರಿಪುರಂ ಶಾಲೆ ಮುಂಚೂಣಿಯಲ್ಲಿದೆ ಎಂದರು.
ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸಿ ಸುಸಂಸ್ಕೃತರನ್ನಾಗಿ ರೂಪಿಸಬೇಕು. ಇದಕ್ಕೆ ಪೂರಕವಾಗಿ ಶೇಷಾದ್ರಿಪುರಂ ಶಾಲೆ ವಸ್ತುಪ್ರದರ್ಶನವನ್ನು ಏರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರಹೊಮ್ಮಿಸುವ ಜವಾಬ್ದಾರಿಯುತ ಕೆಲಸವನ್ನು ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವುದು ಶಿಕ್ಷಕರ ಆದ್ಯ ಕರ್ತವ್ಯ. ವೃತ್ತಿಪರ ತರಬೇತಿಗಳಾಗಿರಬಹುದು ಅಥವಾ ಸರ್ಕಾರಿ ಉದ್ಯೋಗದ ಪರೀಕ್ಷೆಗಳಾಗಿರಬಹುದು, ಎಲ್ಲಾ ಪರೀಕ್ಷೆಗಳಿಗೂ ಕೂಡ ವಿದ್ಯಾರ್ಥಿಗಳನ್ನು ಬಾಲ್ಯದಿಂದಲೇ ಸಜ್ಜುಗೊಳಿಸಬೇಕು ಎಂದು ಸಲಹೆ ಮಾಡಿದರು.
ಶಾಲೆಗಳಲ್ಲಿ ಮಹನೀಯರ ಸಾಧನೆಯ ಅಂಶಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಸ್ಪೂರ್ತಿ ತುಂಬುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಸಹಾಯಕ ಕಾರ್ಯದರ್ಶಿ ಎಂ.ಎಸ್. ನಟರಾಜ್ ಮಾತನಾಡಿ, ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರ ಹೊಮ್ಮಿಸಲು ಇಂತಹ ವಸ್ತುಪ್ರದರ್ಶನಗಳು ಸಹಕಾರಿಯಾಗುತ್ತವೆ. ಪರಿಸರದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ಪರಿಸರ ಸಂರಕ್ಷಣೆ ನಮೆಲ್ಲರ ಹೊಣೆ ಎಂದು ಅವರು ಹೇಳಿದರು.
ಶಾಲೆಯ ಪ್ರಾಂಶುಪಾಲರು ಎಚ್.ಎನ್. ನಂದರಾಜು ಮಾತನಾಡಿ, ಶಾಲೆಯಲ್ಲಿ ‘ಪ್ರಭಂಜನಂ’ ಹೆಸರಿನಲ್ಲಿ ಏರ್ಪಡಿಸಿರುವ ಎಕ್ಸ್ಪೋ ಒಂದು ಅಪರೂಪದ ಕಾರ್ಯಕ್ರಮ. ಮಕ್ಕಳ ಪ್ರತಿಭೆ ಅನಾವರಣಕ್ಕೆ ವಸ್ತುಪ್ರದರ್ಶನಗಳು ಉತ್ತಮ ವೇದಿಕೆಗಳಾಗಿವೆ. ಇಂತಹ ವೇದಿಕೆಯನ್ನು ಕಲ್ಪಿಸುವಲ್ಲಿ ನಮ್ಮ ಶಾಲೆ ಸದಾ ಮುಂಚೂಣಿಯಲ್ಲಿದೆ ಎಂದರು.
ಮಕ್ಕಳು ಈ ವಸ್ತುಪ್ರದರ್ಶನದಲ್ಲಿ ವಿಜ್ಞಾನ, ಗಣಿತ ಸೇರಿದಂತೆ ಹಳ್ಳಿ ಸೊಗಡನ್ನು ಸಹ ಪ್ರದರ್ಶಸಿದ್ದಾರೆ. ಮ್ಯೂಸಿಕ್, ಡ್ಯಾನ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಕಂಪ್ಯೂಟರ್ಸ್, ಕನ್ನಡ, ಇಂಗ್ಲೀಷ್, ಸಮಾಜ ವಿಜ್ಞಾನ ಸೇರಿದಂತೆ ಶಾಲೆಯಲ್ಲಿ ಕಲಿಯುವ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಪ್ರದರ್ಶನಗಳು ಈ ಎಕ್ಸ್ಪೋದಲ್ಲಿ ಅನಾವರಣಗೊಂಡಿವೆ ಎಂದು ಅವರು ಹೇಳಿದರು.
ಈ ವಸ್ತು ಪ್ರದರ್ಶನದಲ್ಲಿ ಮಕ್ಕಳು ಸಿದ್ದಪಡಿಸಿದ್ದ ವಿಜ್ಞಾನ, ಕೃಷಿ ಸೇರಿದಂತೆ ಇನ್ನಿತರೆ ಪ್ರದರ್ಶನಗಳು ನೋಡುಗರ ಗಮನ ಸೆಳೆದವು. ವಿವಿಧ ಮಾದರಿಗಳನ್ನು ಪೋಷಕರು, ಶಿಕ್ಷಕರು, ಅತಿಥಿಗಳು ಹಾಗೂ ಸಾರ್ವಜನಿಕರು ವೀಕ್ಷಿಸಿ ಖುಷಿಪಟ್ಟರು. 2022-23ನೇ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸದಸ್ಯ ಎಂ.ಪಿ. ಕಾರ್ತಿಕ್, ಗುರುರಾಜ್ ಕರ್ಜಗಿ ತಂಡದ ಕ್ರಿಯಾತ್ಮಕ ತರಬೇತಿದಾರ ಲೋಲಾ ಶಿವಶಂಕರ್, ಶಾಲೆಯ ಬೋಧಕ ಮತ್ತು ಭೋದಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.