- ನ್ಯಾಮತಿಯಲ್ಲಿ ಅರ್ಬನ್‌ ಸೊಸೈಟಿ ರಜತ ಮಹೋತ್ಸವ ಭವನದ ಕಟ್ಟಡ ಉದ್ಘಾಟನೆ

- - -

- ಹೊನ್ನಾಳಿ ಅರ್ಬನ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ 25ನೇ ವರ್ಷದ ರಜತ ಮಹೋತ್ಸವ

- 1999ರಲ್ಲಿ ಲಿಂ. ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಂದ ಸ್ಥಾಪನೆಯಾಗಿದ್ದ ಸಂಸ್ಥೆ

- ಒಂದೂವರೆ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿ ಇಂದು ಲೋಕಾರ್ಪಣೆ


- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ವ್ಯಕ್ತಿಯಿಂದ ಸಮಾಜ ನಿರ್ಮಾಣ, ಸಮಾಜದಿಂದ ಸಂಘಟನೆ ಆಗಬೇಕು, ಸಂಘಟನೆಗಳು ಎಷ್ಟೇ ಆದರೂ ಸಂಘರ್ಷ ಇರಬಾರದು. ಆ ನಿಟ್ಟಿನಲ್ಲಿ ಹೊನ್ನಾಳಿ ಅರ್ಬನ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಆಡಳಿತ ಮಂಡಳಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದೆ. ಯಾವುದೇ ಸಂಘರ್ಷಕ್ಕೂ ಒಳಪಡದೇ ರಜತೋತ್ಸವದತ್ತ ದಾಪುಗಾಲು ಹಾಕುತ್ತಿರುವುದಕ್ಕೆ ಈ ಕಟ್ಟಡದ ಸಾಕ್ಷಿಯಾಗಿದೆ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಹೊನ್ನಾಳಿ ಅರ್ಬನ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ 25ನೇ ವರ್ಷದ ರಜತ ಮಹೋತ್ಸವ, ನ್ಯಾಮತಿ ಶಾಖೆಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 1999ನೇ ವರ್ಷದಲ್ಲಿ ಹೊನ್ನಾಳಿ ಹಿರೇಕಲ್ಮಠದ ಲಿಂ. ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿಯರ ಅಮೃತಹಸ್ತದಿಂದ ಈ ಸಂಸ್ಥೆಯು ಸ್ಥಾಪನೆಯಾಗಿತ್ತು ಎಂದರು.

ಅರ್ಬನ್‌ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಆಡಳಿತ ಮಂಡಳಿಯು ನಿರಂತರವಾಗಿ ಉತ್ತಮ ಸೆವೆ ಸಲ್ಲಿಸುತ್ತಿದೆ. ಇದರ ಫಲವಾಗಿ ಸೊಸೈಟಿ ಇಂದು ಪ್ರಗತಿ ಪಥದಲ್ಲಿದೆ. ಎಲ್ಲರ ಪರಿಶ್ರಮದಿಂದ ಈ ಸಂಸ್ಥೆ ಉನ್ನತಮಟ್ಟಕ್ಕೆ ಹೋಗಿ ಸರ್ವೋತ್ತಮವಾಗಿ ಅಭಿವೃದ್ಧಿ ಸಾಧಿಸಿ ಶ್ರೀ ಗುರು ಕೃಪೆಯಿಂದ ಮುಂದಿನ ವಿದ್ಯಮಾನಗಳಲ್ಲಿ ಸುವರ್ಣ ಮಹೋತ್ಸವ ಆಚರಿಸಲಿ ಎಂದು ಆಶೀರ್ವಚನ ನೀಡಿದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಕೆಲವು ದಿನ ಪತ್ರಿಕೆಗಳಲ್ಲಿ ಒಂದು ಪತ್ರಿಕೆ ಮಾತ್ರ ನೇರ ದಿಟ್ಟ ನಿರಂತರವಾಗಿ ನನಗೆ ಬೆಳಗ್ಗೆ 6 ಗಂಟೆಗೆ ನನ್ನ ಕೈ ಸೇರುತ್ತದೆ. ಇನ್ನು ಕೆಲವು ಪತ್ರಿಕೆಗಳು ಬೆಳಗ್ಗೆ 7 ಗಂಟೆಗೆ ಕೈ ಸೇರುತ್ತವೆ. ಅದೇ ರೀತಿ ನೇರ ದಿಟ್ಟ ನಿರಂತರವಾಗಿ ಎಲ್ಲರ ಸಹಕಾರದೊಂದಿಗೆ ಸಂಸ್ಥೆಯನ್ನು ಉಳಿಸಿ, ಬೆಳೆಸಿ ಅಭಿವೃದ್ಧಿಪಡಿಸಿ ಹೊನ್ನಾಳಿಯಲ್ಲಿ ಸ್ವಂತ ಕಟ್ಟಡ ಹೊಂದಿದೆ. ಈಗ ನ್ಯಾಮತಿಯಲ್ಲಿ ಭವ್ಯವಾದ ಸುಸಜ್ಜಿತ, ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿ ಇಂದು ಲೋಕಾರ್ಪಣೆ ಮಾಡಿದ್ದಾರೆ. ಗ್ರಾಹಕರು ವಿಜಯ ಮಲ್ಯರಂತೆ ಸಂಸ್ಥೆಗಳಿಂದ ಸಾಲ ಪಡೆದು ಮರುಪಾವತಿ ಮಾಡದೇ ಹೋದರೆ ಯಾವ ಬ್ಯಾಂಕ್‌, ಸೊಸೈಟಿಗಳು ಅಭಿವೃದ್ಧಿ ಹೊಂದುವುದಿಲ್ಲ ಎಂದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಈ ಸೊಸೈಟಿ ನಿರಂತರವಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಸಾಲ ಪಡೆದವರು ಸಾಲವನ್ನು ಮರುಪಾವತಿ ಮಾಡುವುದು ಅಷ್ಟೇ ಮುಖ್ಯವಾಗಿದೆ. ಎಲ್ಲರ ಸಹಕಾರದಿಂದ ಸೊಸೈಟಿ ಮುಂಚೂಣಿಯಲ್ಲಿ ಎಂದರು.

ಚಿತ್ರದುರ್ಗ ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಬಿ.ಮಂಜಪ್ಪ, ಡಾ.ರಾಜಾನಾಯ್ಕ, ಜಿ.ಆರ್‌.ಪ್ರಕಾಶ್‌, ಉಮಾಪತಿ, ನವೀನ್‌ಕುಮಾರ್‌, ಎ.ಆನಂದಕುಮಾರ್‌, ಎಚ್‌.ವಿರೇಶ್‌ ಮಾತನಾಡಿದರು. ಹೊ.ಅ.ಕ್ರೆ.ಕೋ.ಅ. ಸೊಸೈಟಿಯ ಅಧ್ಯಕ್ಷ ರಾಜಕುಮಾರ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎನ್‌.ಜಯರಾಮ್‌, ಎಚ್‌.ಎಂ. ಶಿವಮೂರ್ತಿ, ಡಾ.ರಾಜಾನಾಯ್ಕ, ಎಚ್‌.ಬಿ. ಮೋಹನ್‌, ಸಿ.ಕೆ. ರವಿಕುಮಾರ್‌, ಕೆ.ಆರ್‌. ನಾಗರಾಜ್‌, ಬಿ.ಎಚ್‌. ಉಮೇಶ್‌, ಎಚ್‌.ಎಂ. ಅರುಣಕುಮಾರ್‌, ಎನ್‌.ಪ್ರಸಾದ್‌, ಎನ್‌.ಎಸ್‌. ನಾಗರತ್ನ, ಡಿ.ಎನ್‌. ಶಾಂತಲಾ, ಎಚ್‌.ಕೆ. ರೂಪ, ಕುಮಾರ್‌, ಎಚ್‌.ಪಿ. ದಿನೇಶ್‌, ಆರ್‌.ಎಚ್‌. ರಂಗನಾಥ, ಎಚ್‌.ಚಂದ್ರಶೇಖರ್‌ ಮತ್ತಿತರರಿದ್ದರು.

ಕಾರ್ಯಕ್ರಮದಲ್ಲಿ ಅದ್ವಿಕಾವ್ಯ ಪ್ರಾರ್ಥಿಸಿ, ಹಲಗೇರಿ ವೀರೇಶ್‌ ಸ್ವಾಗತಿಸಿದರು. ಎಚ್‌.ಎಂ. ಅರುಣಕುಮಾರ್‌ ವಂದಿಸಿದರು.

- - -

-ಚಿತ್ರ:

ನ್ಯಾಮತಿಯಲ್ಲಿ ಅರ್ಬನ್‌ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿ ರಜತ ಮಹೋತ್ಸವ ಭವನದ ಕಟ್ಟಡದ ಉದ್ಘಾಟನೆಯನ್ನು ಹೊನ್ನಾಳಿ ಹಿರೇಕಲ್ಮಠ ಶ್ರೀಗಳು, ಗಣ್ಯರು ನೆರವೇರಿಸಿದರು.