ಡಿ.ಕೆ. ಶಿವಕುಮಾರ ಮತ್ತು ಸಿಎಂ ಸಿದ್ದರಾಮಯ್ಯ ಬಗ್ಗೆ ಕಾಂಗ್ರೆಸ್‌ ಶಾಸಕರೇ ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ

ಗಂಗಾವತಿ: ಡಿ.ಕೆ. ಶಿವಕುಮಾರಗೆ ಮುಖ್ಯಮಂತ್ರಿ ಸ್ಥಾನ ಸಿಗುವ ವರೆಗೆ ಕಾಂಗ್ರೆಸ್‌ ಪಕ್ಷ ಗೊಂದಲದ ಗೂಡಾಗಲಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಮತ್ತು ಸಿಎಂ ಸಿದ್ದರಾಮಯ್ಯ ಬಗ್ಗೆ ಕಾಂಗ್ರೆಸ್‌ ಶಾಸಕರೇ ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುವರೆಗೆ ಗೊಂದಲ ಹಾಗೇ ಮುಂದುವರೆಯುತ್ತದೆ ಎಂದರು.

ಶಾಸಕರನ್ನು ವಿದೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಳುಹಿಸಿಕೊಟ್ಟಿದ್ದಾರೆ. ಬಲವಂತವಾಗಿ ಸಿಎಂ ಸ್ಥಾನ ಕಿತ್ತುಕೊಳ್ಳಲು ಡಿ.ಕೆ.ಶಿವಕುಮಾರ ಸಿದ್ಧತೆ ಮಾಡುತ್ತಿದ್ದಾರೆ ಎಂದು ಭವಿಷ್ಯ ನುಡಿದರು.

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆನೆಗೊಂದಿ ಉತ್ಸವ ಆಚರಣೆ ಈ ಭಾಗದ ಬಹು ಜನರ ಬೇಡಿಕೆಯಾಗಿದೆ. ಉತ್ಸವ ಆಚರಣೆಗೆ ಶೀಘ್ರವೇ ದಿನಾಂಕ ನಿಗದಿ ಮಾಡಲಾಗುವುದು. ಹಿಂದಿನ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಾಕಿ ಮೂರು ಕೋಟಿ ಮೊತ್ತದ ಅನುದಾನ ಬಿಡುಗಡೆಯಾಗಬೇಕಿತ್ತು. ಇದೀಗ ಅನುದಾನ ಸಿದ್ಧವಾಗಿದ್ದು, ಶೀಘ್ರ ಬಿಡುಗಡೆಯಾಗಲಿದೆ. ಅಲ್ಲದೇ ಈ ಬಾರಿಯ ಆನೆಗೊಂದಿ ಉತ್ಸವಕ್ಕೆ ಎಂಟು ಕೋಟಿ ಅನುದಾನ ನಿಗದಿಯಾಗಿದೆ. ಶೀಘ್ರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಆನೆಗೊಂದಿ ಉತ್ಸವದ ಆಯೋಜಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು. ಇನ್ನು 15 ದಿನದೊಳಗಾಗಿ ಗಂಗಾವತಿ ನಗರ ಸೇರಿದಂತೆ ಗಂಗಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದರು.