ಸಾರಾಂಶ
ಬೆಂಗಳೂರು : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೊ.ರು.ಚನ್ನಬಸಪ್ಪ ಆಯ್ಕೆ ಅಪಸ್ವರವಿಲ್ಲದ ಆಯ್ಕೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಶುಕ್ರವಾರ ಕರ್ನಾಟಕ ನಾಟಕ ಅಕಾಡೆಮಿ ಆವರಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ಸಾಹಿತಿ, ಜನಪದ ತಜ್ಞ ಗೊ.ರು.ಚನ್ನಬಸಪ್ಪ(ಗೊರುಚ) ಅವರ ಆಯ್ಕೆ ಇಡೀ ರಾಜ್ಯದ ಜನತೆಗೆ ಸಂಭ್ರಮದ ವಿಚಾರ. ಇದಕ್ಕೆ ಮುಖ್ಯ ಕಾರಣ ಗೊರುಚ ಅವರ ವ್ಯಕ್ತಿತ್ವ ಮತ್ತು ಅವರು ಸಮಾಜಕ್ಕೆ ನೀಡಿರುವಂತಹ ಕೊಡುಗೆ. ಅವರ ವೃತ್ತಿಜೀವನ, ಸಮಾಜ ಸೇವೆಯ ಪಾರದರ್ಶಕತೆ, ಬದ್ಧತೆಯಿಂದ ಕೂಡಿರುವುದು ಗೊರುಚ ಗೆಲುವಿಗೆ ಸಾಕ್ಷಿಯಾಗಿದೆ. ಗೊರುಚ ಕೇವಲ ವ್ಯಕ್ತಿಯಲ್ಲ, ಸಾಂಸ್ಕೃತಿಕ ಮಹತ್ವದ ವ್ಯಕ್ತಿ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಮಾತನಾಡಿ, ತನಗೋಸ್ಕರ ಮಾತ್ರವಲ್ಲದೇ ಸಮಾಜದಲ್ಲಿನ ಇತರರಿಗೂ ಉಪಕಾರಿಯಾಗುವಂತೆ ಸಮಾಜಸೇವೆ ಮಾಡಿ ಬದುಕಿದವರು ಚನ್ನಬಸಪ್ಪ. ಅವರು ಅಧಿಕಾರವಧಿಯಲ್ಲಿ ಇರುವಾಗ ಮಾಡಿದಂತಹ ಕೆಲಸಗಳು ಜನಪರ, ಜೀವಪರ, ಕಲಾವಿದರ ಪರವಾಗಿತ್ತು ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುವುದು ಸುಲಭ, ಆದರೆ ಸಾಹಿತ್ಯ ಪರಿಷತ್ತಿನಲ್ಲಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಸಮ್ಮೇಳನಾಧ್ಯಕ್ಷರಾಗಿ ಗೊರುಚ ಅವರ ಗೆಲುವು ನಮಗೆಲ್ಲಾ ಬಹಳ ಖುಷಿ ತಂದಿದೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೂಕ್ತವಾದ ವ್ಯಕ್ತಿಯನ್ನೇ ಜೋಶಿ ಹಾಗೂ ಅವರ ತಂಡ ಆಯ್ಕೆ ಮಾಡಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ತಮ್ಮ ಅಭಿಪ್ರಾಯಪಟ್ಟರು.
ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ‘ಪ್ರತೀ ವರ್ಷ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿದಾಗ ಬಹಳಷ್ಟು ಚರ್ಚೆಗಳು, ವಿರೋಧಗಳು ಎದುರಾಗುತ್ತದೆ. ಆದರೆ ಮೊದಲ ಬಾರಿಗೆ ಗೊ.ರು. ಚನ್ನಬಸಪ್ಪ ಅವರ ವಿಷಯದಲ್ಲಿ ಇದು ಸುಳ್ಳಾಗಿದೆ. ಇದಕ್ಕೆ ಮುಖ್ಯ ಕಾರಣ ಅವರ ಸಾಹಿತ್ಯ, ಜನಪದ ಸಾಹಿತ್ಯ ಪ್ರಕಾರ, ವೃತ್ತಿ, ಸಮಾಜ ಸೇವೆ. ಇವೆಲ್ಲವೂ ಅವರ ಕೈ ಹಿಡಿದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ರಿಜಿಸ್ಟ್ರಾರ್ಗಳಾದ ನಿರ್ಮಲಾ ಮಠಪತಿ, ಕರಿಯಪ್ಪ ಇದ್ದರು.