ಸಾರಾಂಶ
ಚಳ್ಳಕೆರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅತಿಹೆಚ್ಚು ಮತಗಳಿಂದ ಜಯಶೀಲರಾಗುವರು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಬಹಿರಂಗ ಕಡೆದಿನವಾದ ಬುಧವಾರ ನಗರದ ೧೬,೧೭,೧೮ ಮತ್ತು ೧೯ನೇ ವಾರ್ಡ್ಗಳಲ್ಲಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಪ್ರಚಾರ ನಡೆಸಿ ಮಾತನಾಡಿದರು.ಜನರ ಆಯ್ಕೆ ಕಾಂಗ್ರೆಸಾಗಿದ್ದು, ಮತ್ತೊಮ್ಮೆ ಈ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿಜಯದತ್ತ ಹೆಜ್ಜೆ ಇಟ್ಟಿದೆ. ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಬಿಜೆಪಿಗೆ ಜನರೇ ಬುದ್ಧಿ ಕಲಿಸುವರು. ವಿಶೇಷವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಪರವಾಗಿ ಪ್ರತಿನಿತ್ಯ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಸ್ವಯಂ ಪ್ರೇರಣೆಯಿಂದ ಪ್ರಚಾರದಲ್ಲಿ ಭಾಗವಹಿಸಿ ಚಂದ್ರಪ್ಪ ಗೆಲುವಿಗೆ ಪರೋಕ್ಷವಾಗಿ ಸಹಕಾರ ನೀಡಿದ್ದಾರೆ ಎಂದರು.
ಈ ಬಾರಿಯ ಚುನಾವಣೆಯಲ್ಲಿ ಮಹಿಳೆ ಮತ್ತು ಯುವ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾವಣೆ ಮಾಡಲಿದ್ದಾರೆ. ಸರ್ಕಾರ 5 ಗ್ಯಾರಂಟಿಗಳು ಜನಮನ ಗೆದ್ದಿವೆ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಗೆಲುವು ಸಾಧಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂದು ಸಾಬೀತು ಪಡಿಸಲು ಮುಂದಾಗಿದೆ ಎಂದರು.ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡರಾದ ಟಿ.ಪ್ರಭುದೇವ್, ಎಚ್.ಎಸ್.ಸೈಯದ್, ಟಿ.ಗಿರಿಯಪ್ಪ, ಟಿ.ಮಾರಣ್ಣ, ನೇತಾಜಿ ಪ್ರಸನ್ನ, ಅನ್ವರ್ಮಾಸ್ಟರ್, ಅತಿಕೂರ್ ರೆಹಮಾನ್, ಪ್ರಕಾಶ್ಮೂರ್ತಿ, ಎಂ.ಜೆ.ರಾಘವೇಂದ್ರ, ಎಚ್.ಪ್ರಶಾಂತ್ ಕುಮಾರ್, ಕೆ.ವೀರಭದ್ರಪ್ಪ, ರಮೇಶ್ಗೌಡ, ಸುಮಕ್ಕ, ಮಲ್ಲಿಕಾರ್ಜುನ್, ಜಮರ್ ವುನ್ನೀಸ, ಉಷಾ, ಬಿ.ಎಂ.ಭಾಗ್ಯಮ್ಮ, ಲಕ್ಷ್ಮಿದೇವಿ, ಹುಲಿಕುಂಟೆ ತಿಪ್ಪಕ್ಕ, ಸೌಭಾಗ್ಯಮ್ಮ ತಿಪ್ಪೇಸ್ವಾಮಿ, ಆರ್.ಪ್ರಸನ್ನ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.