ಹುಬ್ಬಳ್ಳಿ:

ನಾರಿಶಕ್ತಿ ವಂದನಾ ಕಾಯ್ದೆಗೆ ಅಡ್ಡಿಯುಂಟು ಮಾಡುವ ಮೂಲಕ ಕಾಂಗ್ರೆಸ್ ನೇತೃತ್ವದ ''''ಇಂಡಿ'''' ಮೈತ್ರಿಕೂಟ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ಒಂದು ಕರಾಳ ದಿನ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷದ ಈ ದಮನಕಾರಿ ನಡೆಯು ಕೇವಲ ಭಾರತೀಯ ನಾರಿಯರಿಗಷ್ಟೇ ಅಲ್ಲ, ಇಡೀ ವಿಶ್ವದ ಮಹಿಳಾ ಸಮುದಾಯಕ್ಕೆ ಮಾಡಿದ ಅಕ್ಷಮ್ಯ ಅಪಮಾನವಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಹಿಳೆಯರಿಗೆ ಶೇ. 33 ಮೀಸಲಾತಿ ಬಿಲ್‌ ಸೋಲುವ ಹಾಗೆ ಮಾಡಿದೆ ಕಾಂಗ್ರೆಸ್ ಹಾಗೂ ಮೈತ್ರಿಕೂಟ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ವಿಚಾರ ಬಂದಾಗಲೆಲ್ಲ ತನ್ನ ಇಬ್ಬಗೆಯ ನೀತಿ ಪ್ರದರ್ಶಿಸುತ್ತಲೇ ಬಂದಿದೆ ಎಂದು ಕಿಡಿಕಾರಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಆಶಯ ಮತ್ತು ವಿಶ್ವಗುರು ಬಸವಣ್ಣನವರು ಅಂದೇ ಪ್ರತಿಪಾದಿಸಿದ ಲಿಂಗ ಸಮಾನತೆಯ ಉದಾತ್ತ ತತ್ವಗಳನ್ನು ಈ ಪಕ್ಷಗಳು ಹತ್ತಿಕ್ಕುವ ಹೀನಾಯ ಕೆಲಸ ಮಾಡಿವೆ. ಕಾಂಗ್ರೆಸ್ ಮತ್ತು ಅದರ ಮೈತ್ರಿಕೂಟಕ್ಕೆ ಮುಂಬರುವ ದಿನಗಳಲ್ಲಿ ದೇಶದ ಪ್ರಜ್ಞಾವಂತ ಮಹಿಳಾ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದಿದ್ದಾರೆ.

ಮಹಿಳೆಯರಿಗೆ ಅವಮಾನ ಮಾಡಿದ ಕಾಂಗ್ರೆಸ್: ಟೆಂಗಿನಕಾಯಿಮಹಿಳಾ ಮೀಸಲಾತಿ ಮಸೂದೆ ವಿರೋಧಿಸುವ ಮೂಲಕ ಮಹಿಳೆಯರ ಕುರಿತ ಕಾಂಗ್ರೆಸ್‌ನವರ ಕರಾಳ ಮುಖ ಮತ್ತೆ ಬಯಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಕಿಡಿಕಾರಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶವು ಐತಿಹಾಸಿಕ ಮಸೂದೆ ಕಳೆದುಕೊಂಡಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಪ್ರತಿಯೊಂದು ವಿಷಯವನ್ನು ವಿರೋಧಿಸುತ್ತಲೇ ಬಂದಿರುವುದು ದುರ್ದೈವದ ಸಂಗತಿ. ಮಹಿಳಾ ಮೀಸಲಾತಿ ಮಸೂದೆ ವಿರೋಧಿಸಿ ಕಾಂಗ್ರೆಸ್ ಆತ್ಮ ವಂಚನೆ ಮಾಡಿಕೊಂಡಿದೆ. 50 ವರ್ಷ ದೇಶವಾಳಿದರು ಇಂತಹ ಮಹತ್ವದ ಮಸೂದೆ ಜಾರಿಗೆ ತರಲು ಸಾಧ್ಯವಾಗಲಿಲ್ಲ. ಕನಿಷ್ಠ ಪಕ್ಷ ಮಹಿಳೆಯರ ಹಿತದೃಷ್ಟಿಯಿಂದಾದರೂ ಮಸೂದೆ ಬೆಂಬಲಿಸಿದರೆ ಸಾಕಾಗಿತ್ತು ಎಂದರು.