ಸಾರಾಂಶ
ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭರಮಸಾಗರ ವ್ಯಾಪ್ತಿಯ ಶಾಲಾ ಕಾಲೇಜಿಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
೨೦೦೬ಕ್ಕಿಂದ ಮುಂಚಿತವಾಗಿ ಜಾರಿಯಲ್ಲಿದ್ದಂತೆ ಹಳೆಯ ನಿವೃತ್ತಿ ವೇತನ ಪದ್ಧತಿಯನ್ನು ಜಾರಿಗೆ ತರಲು ಕಾಂಗ್ರೆಸ್ ಪಕ್ಷ್ ಬದ್ಧವಾಗಿದೆ ಎಂದು ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.ಭರಮಸಾಗರ ಹೋಬಳಿ ವ್ಯಾಪ್ತಿಯ ಹಲವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ತಮ್ಮ ಪತಿ ಡಿ.ಟಿ.ಶ್ರೀನಿವಾಸ್ ಪರ ಪ್ರಚಾರ ಮಾಡಿದರು.
೨೦೦೬ ರ ಎಪ್ರಿಲ್ ತಿಂಗಳಿನಿಂದ ಹೊಸ ನಿವೃತ್ತಿ ವೇತನ ಕಾಯಿದೆ ಜಾರಿಗೆ ಬಂದಿದೆ. ಇದರ ಬಗ್ಗೆ ನೌಕರ ವಲಯದಲ್ಲಿ ಆಕ್ರೋಶವಿದೆ. ಇದನ್ನು ಅರಿತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದೆ ಇದ್ದಂತೆಯೇ ಹಳೆಯ ನಿವೃತ್ತಿ ವೇತನ ಪದ್ಧತಿ ಜಾರಿಗೊಳಿಸಲು ಬದ್ಧವಾಗಿದೆ ಎಂದರು.ಹಳೆಯ ಪದ್ಧತಿಯಲ್ಲಿ ನೌಕರರ ನಿವೃತ್ತಿ ವೇತನ ಪಾವತಿಗೆ ಬೇಕಾಗುವ ಅನುದಾನ, ಯೋಜನೆಯನ್ನು ಜಾರಿಗೆ ತರುವ ವಿಧಿವಿಧಾನಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಈಗಾಗಲೇ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.
ಬಿಜೆಪಿ ಸರ್ಕಾರವು ತನ್ನ ಆಡಳಿತ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಾಯಕರು ಕೂಡ ಶಿಕ್ಷಕರ ಪರವಾದ ಹೋರಾಟಗಳಲ್ಲಿ ಭಾಗಿಯಾಗದೆ ಉಳಿದರು ಎಂದು ಆಪಾದಿಸಿದರು.ಈ ಸಂದರ್ಭದಲ್ಲಿ ಎಮ್ಮೆಹಟ್ಟಿ ಕೃಷ್ಣಮೂರ್ತಿ, ಕಾಂಗ್ರೆಸ್ಡ ಯುವ ಮುಖಂಡರಾದ ಎಸ್ಎಂಎಲ್ ಪ್ರವೀಣ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಬಿಟಿ ನಿರಂಜನ್ ಮೂರ್ತಿ, ಎನ್.ಕೆ ಸಂತೋಷ್ ಪ್ರಕಾಶ್, ಲಿಂಗರಾಜ್ ನಿಸರ್ಗ ಸಂತೋಷ್ ರಶೀದ್ ವೀರಭದ್ರಪ್ಪ ಹರೀಶ್ ನಾಯಕ್ ವೀರಭದ್ರಪ್ಪ ಚುನಾವಣಾ ಪ್ರಚಾರದಲ್ಲಿ ಭಾಗವಹಿದ್ದರು.