ಸಾರಾಂಶ
ಸಂಡೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ೧೬ ತಿಂಗಳು ಕಳೆದಿದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಬರೀ ಹಗರಣಗಳಿಂದಲೇ ಮುಳುಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೦೫೦ ಸೈಟ್ಗಳನ್ನು ಸಿದ್ದರಾಮಯ್ಯ ನುಂಗಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹೧೮೭ ಕೋಟಿ ಹಗರಣವಾಗಿದೆ. ಕ್ಷೇತ್ರದಲ್ಲಿ ವಾಲ್ಮೀಕಿ ಜನಾಂಗ ಜಾಸ್ತಿ ಇದೆ. ಅವರಿಗೆ ಮೋಸ ಮಾಡಿ ಮತ್ತೆ ಅದ್ಹೇಗೆ ಚುನಾವಣೆ ಪ್ರಚಾರಕ್ಕೆ ಬರುತ್ತಾರೋ ಗೊತ್ತಿಲ್ಲ. ವಾಲ್ಮೀಕಿ ಮಠದ ಸ್ವಾಮೀಜಿ ಕೂಡ ₹೧೮೭ ಕೋಟಿ ವಾಪಸ್ ಹಾಕಿ ಎಂದರೂ ಅದು ಇಂದಿಗೂ ಈಡೇರಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾವಿನ ಭಾಗ್ಯ ನೀಡಿದ್ದಾರೆ. ರಾಯಚೂರಿನಲ್ಲಿ ಪಿಎಸ್ಐ, ವಾಲ್ಮೀಕಿ ಅಭಿವೃದ್ಧಿ ನಿಮಗದ ಅಧಿಕಾರಿ ಆತ್ಮಹತ್ಯೆ, ಅಬಕಾರಿ ಮಂತ್ರಿ ವಾರದಲ್ಲಿ ₹೧೮ ಕೋಟಿ ಕಲೆಕ್ಟ್ ಮಾಡಿದ್ದಾರೆ. ವಾಲ್ಮೀಕಿ ಹಗರಣದ ಬಗ್ಗೆ ಮೊದಲು ಒಪ್ಪಿಕೊಳ್ಳಲಿಲ್ಲ. ಆನಂತರ ಒಪ್ಪಿಕೊಂಡ್ರು. ಈ ಪ್ರಕರಣಗಳನ್ನು ಸಿಬಿಐಗೆ ವಹಿಸಿದರೆ ಮಾತ್ರ ನ್ಯಾಯಯುತ ತನಿಖೆಯಾಗಿ ಸತ್ಯ ಹೊರ ಬರಲಿದೆ. ರಾಜ್ಯದಲ್ಲಿ ಶಾಲೆ, ರೈತರ ಜಮೀನು, ದೇವಸ್ಥಾನಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸುತ್ತಿದ್ದಾರೆ ಎಂದು ಆರೋಪಿಸಿದರು.ಈ ಸರ್ಕಾರಕ್ಕೆ ಮಾನ ಮಾರ್ಯಾದೆ ಇಲ್ಲ. ಸ್ವತಃ ಸಿಎಂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಿಎಂ ತಮ್ಮದು ತೆರೆದ ಪುಸ್ತಕ ಎನ್ನುತ್ತಾರೆ. ಆದರೆ, ಅವರ ಪುಸ್ತಕ ತೆರೆದರೆ, ಬರೀ ಕಪ್ಪು ಕಾಣಿಸುತ್ತಿದೆ. ಸರ್ಕಾರಿ ಅಧಿಕಾರಿಗಳು ಯಾವುದೇ ಪಕ್ಷದ ಪರ ನಿಲ್ಲಬಾರದು. ಆದರೆ ರಘುನಾಥ್ ಎಂಬ ಪೊಲೀಸ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೀಯಾಳಿಸಿ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಕೆಲವು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಕಾಂಗ್ರೆಸ್ ಪರ ಪ್ರಚಾರ ಮಾಡ್ತಾರೆ. ಸಿಪಿಐ ಮಹೇಶ್ ಗೌಡ ಎಂಬುವವರು ಸುಮಾರು ೧೨ ವರ್ಷಗಳಿಂದ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ. ತಾವು ಸರ್ಕಾರದ ಸರ್ಕಾರದ ಸರ್ವೆಂಟ್ ಎಂಬುದನ್ನು ಮರೆತಿದ್ದಾರೆ. ಅವರು ಕಾಂಗ್ರೆಸ್ ಏಜೆಂಟ್ ತರ ವರ್ತಿಸುತ್ತಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಸೋಲಿನ ಭೀತಿ ಕಾಡುತ್ತಿದೆ. ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಬೆಂಬಲಿಸಿ, ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಶಾಸಕರಾದ ಜನಾರ್ದನ ರೆಡ್ಡಿ, ನೇಮರಾಜ ನಾಯ್ಕ, ಅಭ್ಯರ್ಥಿ ಬಂಗಾರು ಹನುಮಂತು, ಪಕ್ಷದ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ ಮತ್ತಿತರರು ಉಪಸ್ಥಿತರಿದ್ದರು.
ವಿಪಕ್ಷ ನಾಯಕ ಆರ್.ಅಶೋಕ್ ಸಂಡೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದರು.