ರವಿಕುಮಾರ್‌, ಛಲವಾದಿಯ ವಿರುದ್ಧ ಹೊರಟ್ಟಿಗೆ ಕಾಂಗ್ರೆಸ್‌ ದೂರು

| N/A | Published : Jun 03 2025, 01:16 AM IST / Updated: Jun 03 2025, 11:23 AM IST

ರವಿಕುಮಾರ್‌, ಛಲವಾದಿಯ ವಿರುದ್ಧ ಹೊರಟ್ಟಿಗೆ ಕಾಂಗ್ರೆಸ್‌ ದೂರು
Share this Article
  • FB
  • TW
  • Linkdin
  • Email

ಸಾರಾಂಶ

  ಎನ್‌.ರವಿಕುಮಾರ್‌ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಆಕ್ಷೇಪಾರ್ಹ ನೀಡಿರುವ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್‌ ನೇತೃತ್ವದ ನಿಯೋಗವು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ಸಲ್ಲಿಸಿದೆ.

 ಬೆಂಗಳೂರು : ಐಎಎಸ್‌ ಅಧಿಕಾರಿ ವಿರುದ್ಧ ಕೋಮು ಪ್ರಚೋದನೆಯ ಹೇಳಿಕೆ ನೀಡಿರುವ ಪರಿಷತ್‌ ವಿರೋಧಪಕ್ಷದ ಮುಖ್ಯಸಚೇತಕ ಎನ್‌.ರವಿಕುಮಾರ್‌ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಆಕ್ಷೇಪಾರ್ಹ ನೀಡಿರುವ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್‌ ನೇತೃತ್ವದ ನಿಯೋಗವು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ಸಲ್ಲಿಸಿದೆ.

ಸಲೀಂ ಅಹಮದ್‌ ನೇತೃತ್ವದಲ್ಲಿ ಕಾಂಗ್ರೆಸ್‌ನ ಪರಿಷತ್‌ ಸದಸ್ಯರಾದ ದಿನೇಶ್ ಗೂಳಿಗೌಡ, ಪುಟ್ಟಣ್ಣ, ಗೋವಿಂದರಾಜು ಸೇರಿದಂತೆ ಹಲವು ಸದಸ್ಯರ ನಿಯೋಗವು ಸೋಮವಾರ ಸಭಾಪತಿ ಅವರನ್ನು ಭೇಟಿ ಮಾಡಿದ್ದು, ‘ರವಿಕುಮಾರ್‌ ವಿರುದ್ಧ ಅಮಾನತು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದೆ.

ಛಲವಾದಿ ನಾರಾಯಣಸ್ವಾಮಿ ವಿರುದ್ಧ ದೂರು:

ಇದೇ ವೇಳೆ ಸಲ್ಲಿಸಿರುವ ಪ್ರತ್ಯೇಕ ದೂರಿನಲ್ಲಿ, ಛಲವಾದಿ ನಾರಾಯಣಸ್ವಾಮಿ ಅವರ ಸಂಪುಟ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರನ್ನು ನಾಯಿಗೆ ಹೋಲಿಸಿದ್ದಾರೆ.

ಇಂತಹ ಅಸಂಸದೀಯ ವರ್ತನೆಗೆ ಕ್ಷಮೆ ಯಾಚಿಸುವ ಬದಲು ತನ್ನ ಹೇಳಿಕೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ನಾರಾಯಣಸ್ವಾಮಿ ತಾನೇ ಬಲಿಪಶು ಅಥವಾ ಸಂತ್ರಸ್ತನ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ವಿರೋಧಪಕ್ಷದ ನಾಯಕರೂ ಆಗಿರುವ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಲ್ಲಿಸಿರುವ ದೂರಿನ ಪತ್ರದಲ್ಲಿ, ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನಮ್‌ ವಿರುದ್ಧ ರವಿಕುಮಾರ್‌ ಅವರು ಮಾನನಷ್ಟ, ಕೋಮು ಪ್ರಚೋದನಕಾರಿ ಹಾಗೂ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐಎಎಸ್‌ ಅಧಿಕಾರಿ ಆಗಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಇದ ಅವಮಾನ ಮಾತ್ರವಲ್ಲ ಕೋಮುವಾದಿ ಮತ್ತು ಮಾನಹಾನಿಕರ ದಾಳಿ. ಸಾಂವಿಧಾನಿಕ ತತ್ವಗಳ ಮೇಲಿನ ದಾಳಿಗೆ ಕ್ರಿಮಿನಲ್‌ ಕೇಸು ಮಾತ್ರ ಸಾಕಾಗುವುದಿಲ್ಲ. ರವಿಕುಮಾರ್‌ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕು. ಇಲ್ಲವೆ ಅಮಾನತು ಮಾಡಬೇಕು ಎಂದು ಕಾಂಗ್ರೆಸ್‌ ಸದಸ್ಯರು ಕೋರಿದ್ದಾರೆ.

Read more Articles on