ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ರಚನೆ ಆಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಕಾಂಗ್ರೆಸ್ ಎಂದರೆ ಮೌಲ್ಯ ಮತ್ತು ಸಿದ್ಧಾಂತಗಳ ಕಣಜ. ಇದರಲ್ಲಿ ಎಲ್ಲವೂ ಒಳಗೊಂಡಿದೆ. ಹೀಗಾಗಿ, ಕಾಂಗ್ರೆಸ್ ಇದ್ದರೆ ಮಾತ್ರ ನಾವು, ನಮ್ಮಿಂದ ಕಾಂಗ್ರೆಸ್ ಅಲ್ಲ ಎಂದರು.
ಎಲ್ಲಾ ಜಾತಿಯವರು, ಭಾಷೆಯವರು ಇರುವ ಪಕ್ಷ ಕಾಂಗ್ರೆಸ್. ಹೀಗಾಗಿ, ನಮ್ಮ ಜಾತಿ ಕಾಂಗ್ರೆಸ್, ನಮ್ಮ ಭಾಷೆ ಕಾಂಗ್ರೆಸ್. ಜನಪರವಾಗಿ ಕೆಲಸ ಮಾಡುವ ಕಾಂಗ್ರೆಸ್ ಪಕ್ಷವೂ ಎಂದಿಗೂ ಯಾವ ವಿಚಾರದಲ್ಲೂ ಹಿಂದೆ ಬಿದ್ದಿಲ್ಲ ಎಂದರು.ಮುಖ್ಯಮಂತ್ರಿಗಳು ಒಳ್ಳೆ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ತಾವು ಮಲಗುವುದಿಲ್ಲ ಕಾರ್ಯಕರ್ತರನ್ನು ಮಲಗಲು ಬಿಡುವುದಿಲ್ಲ ಎಂದು ಹೇಳಿ, ನಮ್ಮ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಪಾದಯಾತ್ರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಯಶಸ್ವಿಯಾಗಿ ಜನಸ್ತೋಮದ ನಡುವೆ ಜನಮಾನಸದಲ್ಲಿ ಬೆರೆತಿರುವಂತ ಐತಿಹಾಸಿಕ ಘಟನೆ ಎಂದರು.
ಮಲ್ಲಿಕಾರ್ಜುನ ಖರ್ಗೆ ನಮ್ಮ ರಾಜ್ಯದವರೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ ಇದು ನಮಗೆ ಹೆಮ್ಮೆ ತರುವ ವಿಚಾರ. ಪಂಚ ಗ್ಯಾರಂಟಿ ನಮ್ಮ ಯೋಜನೆ. ಇದರಲ್ಲಿ ನಮ್ಮ ಇಲಾಖೆ ವತಿಯಿಂದ ಸುಮಾರು 1.62 ಕೋಟಿ ಜನಕ್ಕೆ ಶೂನ್ಯ ಬಿಲ್ ಬರುತ್ತಿದೆ. ಇದು ನಮ್ಮ ಸರ್ಕಾರದ ಸಾಧನೆಗಳಿಗೆ ಹಿಡಿದ ಕೈಗನ್ನಡಿಯಂತಿದೆ ಎಂದರು.ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಜಾರ್ಜ್ ಅವರು ಇಂಧನ ಸಚಿವರಾದ ಮೇಲೆ ಇಲಾಖೆಗೆ ಹೊಸ ರೂಪವನ್ನು ಕೊಟ್ಟು, ಇಲಾಖೆಯಲ್ಲಿ ಇದ್ದಂತಹ ಗೊಂದಲಗಳನ್ನು ನಿವಾರಣೆ ಮಾಡಲು ಪ್ರಮುಖವಾದ ನಿರ್ಣಯಗಳನ್ನು ಕೈಗೊಂಡಿದ್ದಾರೆ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಗಟ್ಟಿ ನಿಲುವು ಮತ್ತು ಮೌಲ್ಯಗಳ ಜೊತೆಯಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಜಾರ್ಜ್ ಅವರು ಮುಂದಿನ ತಲೆಮಾರಿನ ಯುವ ರಾಜಕಾರಣಿಗಳಿಗೆ ಆದರ್ಶವಾಗಿ ನಿಲ್ಲುತ್ತಾರೆ. ಪಕ್ಷದ ಕೆಲಸಗಳನ್ನು ಮಾಡುತ್ತಾ ಸರದಿ ಸಾಲಿನಲ್ಲಿ ಬಂದು ಅಧಿಕಾರವನ್ನು ಪಡೆದುಕೊಂಡಂತಹ ಅವರಿಗೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ ಎಂದರು.ಇದೇ ವೇಳೆ ಆರ್ ಸಿಬಿ ತಂಡವು 18 ವರ್ಷದ ಬಳಿಕ ಐಪಿಎಲ್ ಚಾಂಪಿಯನ್ ಆದ ಹಿನ್ನೆಲೆಯಲ್ಲಿ ಹೋಳಿಗೆ ಹಂಚಿ ಸಂಭ್ರಮಿಸಲಾಯಿತು. ನಂತರ ಕಾರ್ಯಕರ್ತರ ಅಹವಾಲುಗಳನ್ನು ಸಚಿವರು ಸ್ವೀಕರಿಸಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಶಾಸಕರಾದ ಕೆ. ಹರೀಶ್ ಗೌಡ, ಡಿ. ರವಿಶಂಕರ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಎಐಸಿಸಿ ಸದಸ್ಯ ಪ್ರೇಮ್ ಕುಮಾರ್, ಮಾಜಿ ಮೇಯರ್ ಗಳಾದ ಮೋದಾಮಣಿ, ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಎಂ. ಶಿವಣ್ಣ, ಪ್ರದೀಪ್ ಕುಮಾರ್, ಸುನಂದಕುಮಾರ್, ತಿವಾರಿ, ಈಶ್ವರ್ ಚಕ್ಕಡಿ, ಪುಷ್ಪವಲ್ಲಿ ಮೊದಲಾದವರು ಇದ್ದರು.