ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ತಂದು ಜನತೆಗೆ ಪೇಚಾಡುವಂತಾಗಿದೆ

| Published : Nov 30 2024, 12:47 AM IST

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ತಂದು ಜನತೆಗೆ ಪೇಚಾಡುವಂತಾಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ವಸತಿ ಸಚಿವ ಜಮೀರ ಅಹ್ಮದ ಅವರನ್ನು ಈ ಕುರಿತು ಕೇಳಿದರೆ 2025ಕ್ಕೆ ಕೊಡುತ್ತೇನೆ ಎಂದು ಹೇಳುವದನ್ನು ನೋಡಿದರೆ ಸರ್ಕಾರ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅರ್ಥೈಯಿಸಿಕೊಳ್ಳಬೇಕು.

ರೋಣ: ಗ್ಯಾರಂಟಿ ಯೋಜನೆಗಾಗಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದಿರುವ ರಾಜ್ಯದ ಜನತೆಯ ಪರಿಸ್ಥಿತಿ ಒಳ್ಳಾಗ ತಲೆ ಇಟ್ಟಾಗ ಒನಿಕೆ ಪೆಟ್ಟು ತಿನ್ನಲೆಬೇಕು ಎನ್ನುವಂತಾಗಿದೆ. ಯಾಕಾದರೂ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದಿದ್ದೇವೆ ಎಂದು ರಾಜ್ಯದ ಜನತೆ ಪೇಚಾಡುತ್ತಿದ್ದಾರೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಲೇವಡಿ ಮಾಡಿದರು.

ಅವರು ಶುಕ್ರವಾರ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2024-25 ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಬೀಡಿ-ಬೆಳವಣಕಿ ರಾಜ್ಯಹೆದ್ದಾರಿ 56 ರಲ್ಲಿ ₹10 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯದ 224 ಕ್ಷೇತ್ರದಲ್ಲಿ ಈ ವರೆಗೆ ಒಂದು ಮನೆ ಕೊಟ್ಟಿಲ್ಲ. ವಸತಿ ಸಚಿವ ಜಮೀರ ಅಹ್ಮದ ಅವರನ್ನು ಈ ಕುರಿತು ಕೇಳಿದರೆ 2025ಕ್ಕೆ ಕೊಡುತ್ತೇನೆ ಎಂದು ಹೇಳುವದನ್ನು ನೋಡಿದರೆ ಸರ್ಕಾರ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅರ್ಥೈಯಿಸಿಕೊಳ್ಳಬೇಕು.

ರಾಜ್ಯದಲ್ಲಿ ಕೇವಲ ಅಧಿಕಾರಿಗಳ ವರ್ಗಾವಣೆಗೆ ಹಣದ ದಂಧೆ ನಡೆದಿದೆ. ವಿಧಾನ ಸಭೆಯಲ್ಲಿ ಯಾವ ಸಚಿವರು ಸಿಗುವದಿಲ್ಲ. ಸಿಎಂ ಗಾದಿಗೇರಲು ಕಾಂಗ್ರೆಸ್‌ನಲ್ಲಿ ಒಳ ಕಿತ್ತಾಟ ನಡೆದಿದೆ. ಅಭಿವೃದ್ಧಿ ಬಗ್ಗೆ ಕೇಳಿದರೆ ಎಸ್‌ಐಟಿ ಕೇಸ್‌ ಕೋರ್ಟ್‌ ಕಚೇರಿಗೆ ಎಳೆಯುತ್ತಾರೆ. 22 ವರ್ಷದ ನನ್ನ ರಾಜಕಾರಣದಲ್ಲಿ ಇತಂಹ ದುರಾಡಳಿತ ನೋಡಿಲ್ಲ, ಕಾಂಗ್ರೆಸ್‌ ಸರ್ಕಾರ ಕೇವಲ ಒಂದು ವರ್ಗಕ್ಕೆ ತುಷ್ಟಿಕರಣ ಮಾಡುತ್ತಿದೆ. ರಾಜ್ಯದ ಜನತೆ ಗುಡಿ, ಗುಂಡಾರಗಳ ಆಸ್ತಿ ಉತಾರಗಳನ್ನು ಪದೇ ಪದೇ ಚೆಕ್‌ ಮಾಡಿಕೊಳ್ಳುವ ಪರಿಸ್ಥಿತಿ ಕಾಂಗ್ರೆಸ್‌ ತಂದೊಡ್ಡಿದೆ ಎಂದರು.ಕಳೆದ ಅವಧಿಯಲ್ಲಿ ₹1850 ಕೋಟಿ ಅನುದಾನ ತಂದು ನರಗುಂದ ಮತಕ್ಷೇತ್ರದ ಅಭಿವೃದ್ಧಿ ಮಾಡಿದ್ದೆ, ಆದರೆ ಕಳೆದ 2 ವರ್ಷಗಳಿಂದ ನಿರೀಕ್ಷಿತ ಅನುದಾನ ಸಿಕ್ಕಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ನೀವು ಮಾಡುತ್ತಿರುವ ಕೆಲಸ ನಿಮಗೆ ತೃಪ್ತಿ ತಂದಿದೆಯೇ ? ರಾಜಕೀಯದಲ್ಲಿ 49 ವರ್ಷಗಳ ಕಾಲ ಸುದೀರ್ಘ ಸೇವೆ ಮಾಡಿರುವ ನೀವು ಕಳೆದ 2 ವರ್ಷದ ಅವಧಿಯಲ್ಲಿ ನಿಮ್ಮ ಸಾಧನೆ ನಿಮಗೆ ಕಾಣುತ್ತಿದೆಯೇ? ಮುಂಬರುವ ವಿಧಾನ ಸಭೆ ಅಧಿವೇಶದಲ್ಲಿ ಇದೇ ಪ್ರಶ್ನೆ ಕೇಳುತ್ತೇನೆ ಆಗ ನೀವು ಉತ್ತರಿಸುವರಂತೆ ಎಂದರು.

ನನ್ನ ಕ್ಷೇತ್ರದಲ್ಲಿನ ಪಂಚಮಸಾಲಿ, ಎಸ್‌ಸಿ, ಎಸ್‌.ಟಿ ಸಮುದಾಯ ಭವನ ನಿರ್ಮಾಣಕ್ಕಾಗಿ ಅನುದಾನ ನೀಡುವಂತೆ ಕೇಳಿದ್ದೆ, ಅದನ್ನು ಸರ್ಕಾರ ವಾಪಸ್ ತೆಗೆದುಕೊಂಡಿದೆ. ನಾನು ಸಚಿವನಾಗಿದ್ದಾಗ ಬದಾಮಿ ಶಾಸಕರಾಗಿದ್ದ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆಗೆ ಕೊಟ್ಟ ಅನುದಾನ ನನ್ನ ಕ್ಷೇತ್ರಕ್ಕೆ ಕೊಟ್ಟರೇ ಸಾಕು, ಹದಗೆಟ್ಟಿರುವ ರಸ್ತೆ, ತೆಗ್ಗು ಗುಂಡಿ ಮುಚ್ಚಲು ಸರ್ಕಾರದಲ್ಲಿ ಹಣವಿಲ್ಲವೆಂದರೆ ಏನರ್ಥ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಶೋಕ ನವಲಗುಂದ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಗ್ರಾಪಂ ಅಧ್ಯಕ್ಷ ಪ್ರವೀಣ ಮಾಡಳ್ಳಿ, ಬಿಜೆಪಿ ಹೊಳೆಆಲೂರ ಮಂಡಳ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಶರಣಪ್ಪಗೌಡ ಹದ್ಲಿ, ಸುಭಾಸ ಹೊಸಂಗಡ್ಡಿ, ಹೇಮರಡ್ಡಿ ಹಳ್ಳಿಕೇರಿ, ಡಾ. ಬಿ.ಬಿ. ಕಡದಳ್ಳಿ, ಈರಪ್ಪ ತಾಳಿ, ಸೋಮು ಹುಡೇದಮನಿ, ಶೇಖಪ್ಪ‌ ಚಲವಾದಿ, ಅಶೋಕ ಹೆಬ್ಬಳ್ಳಿ, ಶರಣು ಚಲವಾದಿ, ಬಸವಂತಪ್ಪ‌ ತಳವಾರ, ಲೋಕೋಪಯೋಗಿ ಎಇಇ ಬಲವಂತ ನಾಯಕ ಮುಂತಾದವರು ಉಪಸ್ಥಿತರಿದ್ದರು. ಸೋಮು ಚರೇದ ನಿರೂಪಿಸಿ ವಂದಿಸಿದರು.