ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರ ಬರೀ ಹಗರಣಗಳಲ್ಲೇ ಮುಳುಗಿದ್ದು, ಸರ್ಕಾರದ ಅವೈಜ್ಞಾನಿಕ ಆಡಳಿತದಿಂದ ಜನ ಕಂಗಾಲಾಗಿದ್ದಾರೆ. ಇದನ್ನು ಅರಿತು ಪದವೀಧರರು ಈ ಬಾರಿಯ ಬೆಂಗಳೂರು ಪದವೀಧರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಅ.ದೇವೇಗೌಡರನ್ನು ಬೆಂಬಲಿಸಬೇಕು ಎಂದು ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.
ಚನ್ನಪಟ್ಟಣ: ರಾಜ್ಯ ಕಾಂಗ್ರೆಸ್ ಸರ್ಕಾರ ಬರೀ ಹಗರಣಗಳಲ್ಲೇ ಮುಳುಗಿದ್ದು, ಸರ್ಕಾರದ ಅವೈಜ್ಞಾನಿಕ ಆಡಳಿತದಿಂದ ಜನ ಕಂಗಾಲಾಗಿದ್ದಾರೆ. ಇದನ್ನು ಅರಿತು ಪದವೀಧರರು ಈ ಬಾರಿಯ ಬೆಂಗಳೂರು ಪದವೀಧರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಅ.ದೇವೇಗೌಡರನ್ನು ಬೆಂಬಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮನವಿ ಮಾಡಿದರು.
ಬೆಂಗಳೂರು ಪದವೀಧರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಅ.ದೇವೇಗೌಡರ ಪರ ಹಮ್ಮಿಕೊಂಡಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಹಾಗೂ ಪದವೀಧರ ಮತದಾರ ಸಭೆಯಲ್ಲಿ ಅವರು ಮಾತನಾಡಿದರು.
ಬೆಂಗಳೂರು ಪದವಿಧರ ಕ್ಷೇತ್ರದ ಚುನಾವಣೆ ನಮ್ಮ ಎರಡು ಪಕ್ಷಗಳ ಪಾಲಿನ ಗೌರವದ ವಿಚಾರವಾಗಿದ್ದು, ವಿರೋಧ ಪಕ್ಷದ ಆಸೆ ಆಮಿಷಗಳಿಗೆ ಬಲಿಯಾಗದೆ ಮೈತ್ರಿ ಪಕ್ಷದ ಅಭ್ಯರ್ಥಿ ಅ.ದೇವೇಗೌಡರ ಪರ ಮತ ಚಲಾಯಿಸುವಂತೆ ಮನವಿ ಮಾಡಿದ ಅವರು, ನಿಮ್ಮ ನಿಮ್ಮಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಅದನ್ನು ಮರೆತು ತಾವುಗಳೆಲ್ಲಾ ಅ.ದೇವೇಗೌಡರ ಪರ ನಿಮ್ಮ ಮನೆಯ ನಿಮ್ಮ ಊರಿನ ಪದವೀಧರ ಮತದಾರರ ಬಳಿ ಹೋಗಿ ಮತ ಹಾಕಿಸಬೇಕು ಎಂದರು. ತೆಲಂಗಾಣ ಚುನಾವಣೆಗೆ ಹಣ: ಕಾಂಗ್ರೆಸ್ ಸರ್ಕಾರ ಎಸ್ಟಿ ನಿಗಮದ ಹಣವನ್ನು ತೆಲಂಗಾಣದ ಚುನಾವಣೆಗೆ ಬಳಸಿಕೊಂಡಿದೆ. ಸರ್ಕಾರದ ಆಡಳಿತ ವೈಖರಿಯಿಂದ ಜನ ಬೇಸತ್ತಿದ್ದಾರೆ. ಇವರ ಆಡಳಿತಕ್ಕೆ ಬಂದ ಮೇಲೆ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಗರಣಗಳಿಂದ ಬೇರೆ ಕಡೆ ದಿಕ್ಕು ತಪ್ಪಿಸಲು ಡಿ.ಕೆ.ಶಿವಕುಮಾರ್ ಕೇರಳದಲ್ಲಿ ಮಾಟ ನಡೆಸಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದು, ಇದನ್ನು ಕೇರಳ ಸರ್ಕಾರದ ಸಚಿವರೆ ನಿರಾಕರಿಸಿದ್ದಾರೆ. ಜನರ ದಿಕ್ಕು ತಪ್ಪಿಸಲು ಸಿದ್ದರಾಮಯಯ್ಯ, ಶಿವಕುಮಾರ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಂದು ವರ್ಷದಿಂದ ಈಚೆಗೆ ಯಾವುದೇ ಕೆಲಸವಾಗಿಲ್ಲ. ಚುನಾವಣೆ ದೃಷ್ಟಿಯಿಂದ ಈ ಸರ್ಕಾರ ಲೂಟಿ ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ನಮ್ಮ ಪರ ಫಲಿತಾಂಶ ಬರಲಿದ್ದು, ಮಂಜುನಾಥ್ ಗೆಲ್ಲಲಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಸಹ ನಮ್ಮ ಅಭ್ಯರ್ಥಿ ಗೆಲ್ಲಬೇಕು. ಆ ನಿಟ್ಟಿನಲ್ಲಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಎನ್ಡಿಎ ಅಭ್ಯರ್ಥಿ ಅ.ದೇವೇಗೌಡ ಮಾತನಾಡಿ, ಮೈತ್ರಿ ಪಕ್ಷದ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕೆಂದು ವಿರೋಧಿಗಳು ಇನ್ನಿಲ್ಲದ ತಂತ್ರಗಳನ್ನು ಹಣೆಯುತ್ತಾ, ಜನರಿಗೆ ಆಸೆ ಆಮಿಷಗಳನ್ನು ತೋರುತ್ತಿದ್ದಾರೆ. ಇದಕ್ಕೆಲ್ಲ ಮತದಾರರು ಮರುಳಾಗಬಾರದು. ಈ ಜಿಲ್ಲೆಯ ಮಗನಾದ ನಾನು ಕಳೆದ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಇನ್ನೊಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಾ. ಮಂಜುನಾಥ್, ಬಿಜೆಪಿ ಜಿಲ್ಲಾಧಕ್ಷ ಆನಂದಸ್ವಾಮಿ, ತಾಲೂಕು ಅಧ್ಯಕ್ಷ ತೂಬಿನಕೆರೆ ರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ, ನಗರಾಧ್ಯಕ್ಷ ಶಿವಕುಮಾರ್, ಎಚ್.ಸಿ.ಜಯಮುತ್ತು, ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಹುಲುವಾಡಿ ದೇವರಾಜು, ಜಿಪಂ ಮಾಜಿ ಅಧ್ಯಕ್ಷ ಸಿ.ಪಿ.ರಾಜೇಶ್, ಹಾಪ್ಕಾಮ್ಸ್ ದೇವರಾಜು, ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕಕ್ಕೂರುದೊಡ್ಡಿ ಜಯರಾಂ ಇತರರಿದ್ದರು. ಪೊಟೋ೧ಸಿಪಿಟಿ೨:
ಚನ್ನಪಟ್ಟಣದಲ್ಲಿ ಬೆಂಗಳೂರು ಪದವೀಧರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಅ.ದೇವೇಗೌಡ ಪರ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್, ಡಾ.ಮಂಜನಾಥ್ ಇತರರು ಭಾಗವಹಿಸಿದ್ದರು.