ಸಾರಾಂಶ
-ಮೈಲನಹಳ್ಳಿ, ಬಾಣಾವಾಡಿ, ಪಾಲನಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆಕನ್ನಡಪ್ರಭ ವಾರ್ತೆ ದಾಬಸ್ಪೇಟೆ
ಎತ್ತಿನಹೊಳೆ ಯೋಜನೆಯಿಂದ ಬಯಲುಸೀಮೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿಗೆ ಅನುಕೂಲವಾಗಲಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಗೌರಿ ಹಬ್ಬದ ದಿನ ಲೋಕಾರ್ಪಣೆ ಮಾಡಿ ನುಡಿದಂತೆ ನಡೆದ ಸರ್ಕಾರವೆಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಲನಹಳ್ಳಿ, ಬಾಣಾವಾಡಿ, ಪಾಲನಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಎತ್ತಿನಹೊಳೆ ಯೋಜನೆ ಮೊದಲನೇ ಹಂತದಲ್ಲಿ ಯಶಸ್ವಿಯಾಗಿ ನೆರವೇರಿದ್ದು, ತಾಲೂಕಿನ ಜನತೆಯೂ ಅದರ ಫಲಾನುಭವಿಗಳು ಆಗಲಿದ್ದೇವೆ. ಎರಡನೇ ಹಂತದಲ್ಲಿ ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೀರು ಹರಿಯುವ ಭರವಸೆಯಿದೆ ಎಂದರು.
ಋಣ ತೀರಿಸುತ್ತೇನೆ: ಸೋಲೂರು ಹೋಬಳಿಯ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು 45 ಬೂತ್ನಲ್ಲಿ ಸುಮಾರು 8002 ಮತಗಳ ಮುನ್ನಡೆ ನೀಡಿ ಆಶೀರ್ವದಿಸಿದ್ದಾರೆ. ಅವರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.ಆಶ್ರಯ ಯೋಜನೆ, ಇಂದಿರಾ ಅವಾಸ್ ಯೋಜನೆ, ಬಸವ ವಸತಿ ಯೋಜನಯಡಿ ಕ್ಷೇತ್ರಕ್ಕೆ 2500 ವಿಶೇಷ ಮನೆಗಳನ್ನು ಬಿಡುಗಡೆ ಮಾಡಿಸಿದ್ದು, ಇದರಲ್ಲಿ ಸೋಲೂರು ಹೋಬಳಿಗೆ 600 ಮನೆ ಹಂಚಿದ್ದು, ಪ್ರತಿ ಗ್ರಾಪಂಗೆ 100 ಮನೆ ನೀಡಲಾಗಿದೆ. ಜಲಜೀವನ್ ಮಿಷನ್ ಯೋಜನೆಕಳಪೆ ಕಾಮಗಾರಿ ಬಗ್ಗೆ ಗಮನಕ್ಕೆ ಬಂದಿದ್ದು, ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ವಹಿಸುತ್ತೇನೆ ಎಂದರು.
ಸ್ತ್ರೀಶಕ್ತಿ ಭವನಕ್ಕೆ 10 ಲಕ್ಷ ರೂ : ಇದೇ ಸಂದರ್ಭದಲ್ಲಿ ಪಾಲನಹಳ್ಳಿ ಮಹಿಳೆಯರು ಗ್ರಾಮದಲ್ಲಿ ಸ್ತ್ರೀಶಕ್ತಿ ಭವನಕ್ಕೆ ನಿರ್ಮಾಣಕ್ಕೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾಗ 10 ಲಕ್ಷ ನೀಡುವುದಾಗಿ ಘೋಷಿಸಿದರು. ಮೈಲನಹಳ್ಳಿ ದೇವಾಲಯ ನಿರ್ಮಾಣಕ್ಕೆ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬಿಟ್ಟಸಂದ್ರ ಗ್ರಾಪಂ ಅಧ್ಯಕ್ಷ ಗಂಗರಂಗಯ್ಯ ಮುಖಂಡರಾದ ನಾಗರುದ್ರ ಶರ್ಮಾ, ಲಕ್ಷ್ಮಣ್, ಪ್ರಸಾದ್ ಇತರರಿದ್ದರು.