ಸಾರಾಂಶ
ಮಡಿಕೇರಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಚಾರ ಆರೋಪಗಳು ಸಾಭೀತಾಗುತ್ತಿರುವ ಹಿನ್ನೆಲೆ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ನೈತಿಕತೆ ಇದ್ದರೆ ರಾಜಿನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಕೊಡಗು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ , ಶಾಸಕ ಬಿ.ಆರ್.ಪಾಟೀಲ್ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಅವರಿಗೆ ದೂರವಾಣಿ ಕರೆ ಮಾಡಿ, ಹಣ ನೀಡಿದವರಿಗೆ ಮಾತ್ರ ವಸತಿ ನೀಡಲಾಗುತ್ತಿದೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಪ್ರದರ್ಶನವಾಗುತ್ತಿದೆ. ಇದೊಂದು ಬಂಡ ಸರ್ಕಾರವಾಗಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆ ಇದ್ದರೆ ರಾಜಿನಾಮೆ ನೀಡಿ ಚುನಾವಣೆ ಎದುರಿಸಲಿ ಎಂದು ಸವಾಲೆಸೆದ ರವಿ ಕಾಳಪ್ಪ ಚುನಾವಣೆ ನಡೆದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಮೂಡ ಹಗರಣ, ವಾಲ್ಮಿಕಿ ಹಗರಣ ಸೇರಿದಂತೆ ಇತರ ಆರೋಪಗಳು ಸಾಬೀತಾದರೂ ಕೂಡ ಸರ್ಕಾರ ಸಮರ್ಥನೆ ಮಾಡಿಕೊಳ್ಳುತ್ತಾ ಸಾಗುತ್ತಿದೆ. ಇದು ನಮ್ಮ ದುರಾದೃಷ್ಟಕರ ಎಂದ ಅವರು, ರಾಜ್ಯದಲ್ಲಿ ಕಮಿಷನ್ ಮಿತಿ ಮೀರಿದೆ. ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದಕ್ಕೆ ಶಾಸಕ ಬಿ.ಆರ್.ಪಾಟೀಲ್ ಅವರು ಹೇಳಿರುವ ಮಾತುಗಳೇ ಸಾಕ್ಷಿ ಎಂದರು.
ಕೇಂದ್ರ ಸರ್ಕಾರ ಎಲ್ಲರಿಗೂ ಸಮಾನವಾಗಿ ತಾರತಮ್ಯ ಮಾಡದೇ ಸಮಾನವಾಗಿ ಹಂಚುತ್ತದೆ. ಆದರೆ, ಕಾಂಗ್ರೆಸ್ ಸರ್ಕಾರ ಒಂದು ಧರ್ಮಕ್ಕಾಗಿ ಆದ್ಯತೆ ನೀಡುತ್ತಿದೆ. ಇತ್ತೀಚೆಗೆ ಗುತ್ತಿಗೆ ವಿಚಾರದಲ್ಲಿ ಹೆಚ್ಚಿನ ಆದ್ಯತೆ ಮುಸ್ಲಿಂ ಜನಾಂಗಕ್ಕೆ ನೀಡಿದೆ. ಮೀಸಲಾತಿ ಕೂಡ ಶೇ.10 ಇದ್ದದನ್ನು 15ರಷ್ಟು ಏರಿಸಿದ್ದಾರೆ. ಇದರಲ್ಲಿ ಅಲ್ಪಸಂಖ್ಯಾತರೇ ಹೆಚ್ಚಾಗಿದ್ದಾರೆ. ಹಿಂದೂಳಿದವರಿಗೆ ಯಾವುದೇ ಮೀಸಲಾತಿ ಸಿಗುತ್ತಿಲ್ಲ ಎಂದು ದೂರಿದರು.ಬೆಂಗಳೂರಿನ ಕೊಡವ ಸಮಾಜಕ್ಕೆ 7 ಎಕರೆ ಜಾಗ ನೀಡದ ಕುರಿತು ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ಜಾಗ ನಿರ್ಧಾರ ಮಾಡಿತ್ತು. ಇವರೆ ವಿರೋಧಿಸುತ್ತಿದ್ದರು. ಆದರೆ, ಇಂದು ಏಕಪಕ್ಷೀಯವಾಗಿ ತಾವೇ ಮಾಡಿದ್ದು ಎಂದು ಹೇಳಿಕೊಳ್ಳುತ್ತಿದೆ. ಜನರಿಗೆ ಸತ್ಯಾಂಶವನ್ನು ಹೇಳುವಂತಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲರೂ ಸಮಾನರು ಎಂದು ವಿವಿಧ ಯೋಜನೆಗಳನ್ನು ಜಾರಿಗೆ ಮಾಡುತ್ತಿದೆ. ಆದರೆ, ರಾಜ್ಯ ಸರ್ಕಾರ ಧರ್ಮಾದಾರಿತ ರಾಜಕಾರಣ ಮಾಡುತ್ತಿದ್ದು, ಇದೊಂದು ಬಂಡ ಸರ್ಕಾರವಾಗಿದೆ. ಸ್ಪೀಕರ್ ತಂದೆ ಸ್ಥಾನದಲ್ಲಿರುವವರು. ಆದರೆ, ಮಂಗಳೂರಿನಲ್ಲಿ ಕೊಲೆಯಾದ ವ್ಯಕ್ತಿಯನ್ನು ಯು.ಟಿ.ಖಾದರ್ ಅವರು ಹೊಗಳುವ ಕೆಲಸ ಮಾಡುತ್ತಾರೆ. ಇದು ಸರಿಯಲ್ಲ. ಎಲ್ಲರ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಅಂಬೇಡ್ಕರ್ ಸಂವಿಧಾನದಂತೆ ಕೆಲಸ ಮಾಡಬೇಕು ಎಂದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್, ಪ್ರಮುಖರಾದ ಅಜಿಲ್ ಕೃಷ್ಣ ಸುದ್ದಿಗೋಷ್ಠಿಯಲ್ಲಿದ್ದರು.