ಸಾರಾಂಶ
ಕಾಂಗ್ರೆಸ್ ಸರ್ಕಾರ ಯಾವುದೇ ಸಂದರ್ಭದಲ್ಲಿ ಪತನವಾಗುವ ಸಾಧ್ಯತೆಗಳಿವೆ ಎಂದು ಸಂಸದ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದರು.
ಬೆಳಗಾವಿ : ಕಾಂಗ್ರೆಸ್ ಸರ್ಕಾರ ಯಾವುದೇ ಸಂದರ್ಭದಲ್ಲಿ ಪತನವಾಗುವ ಸಾಧ್ಯತೆಗಳಿವೆ ಎಂದು ಸಂಸದ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದರು.
ನಗರದ ಮಹಾವೀರ ಭವನದಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ 50 ವರ್ಷವಾದ ಹಿನ್ನೆಲೆಯಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಸರ್ವಾಧಿಕಾರಿ ಧೋರಣೆ ಇನ್ನು ಮುಂದುವರೆದಿದೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಗೆ ಅನುದಾನವೇ ಇಲ್ಲ. ಭ್ರಷ್ಟಾಚಾರ ಮೀತಿ ಮೀರಿದ್ದು, ಅವರ ಪಕ್ಷದ ಶಾಸಕರೇ ಈಗ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್ ಎಂದರೆ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಪಕ್ಷ. ಪರಿಸ್ಥಿತಿ ಬದಲಾವಣೆಯಾದರೂ ಅದರ ಮನಸ್ಥಿತಿ ಮಾತ್ರ ಇನ್ನು ಬದಲಾವಣೆಯಾಗಿಲ್ಲ ಎಂದು ದೂರಿದರು.ಕೇವಲ ಎರಡು ರಾಜ್ಯಗಳಲ್ಲಿ ಮಾತ್ರ ಇಂದು ಕಾಂಗ್ರೆಸ್ ಅಧಿಕಾರದಲ್ಲಿ ಇದೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಸಂವಿಧಾನ ಕೋಮಾ ಸ್ಥಿತಿಯಲ್ಲಿತ್ತು.
ಇಂದಿರಾ ಗಾಂಧಿ ಅವಧಿಯಲ್ಲಿ ಪ್ರಜಾಪ್ರಭುತ್ವ ಜೈಲಿನಲ್ಲಿತ್ತು. ಆ ವೇಳೆ ಅಂಬೇಡ್ಕರ್ ಬದುಕಿದ್ದರೇ ಅವರನ್ನು ಕೂಡ ಜೈಲಿಗೆ ಹಾಕುತ್ತಿತ್ತು. ಅಂತಹ ಪರಿಸ್ಥಿತಿ ಇಂದಿರಾ ಗಾಂಧಿ ಸರ್ಕಾರದಲ್ಲಿತ್ತು ಎಂದರು.ಇಂದಿರಾ ಗಾಂಧಿ ಸರ್ವಾಧಿಕಾರಿ ಧೋರಣೆ ಪರವಾಗಿ ಬಾಲಾ ಅಲ್ಲಾಡುಸುತ್ತಿದ್ದೀರಿ. ನಾಯಿಗಳ ರೀತಿಯಲ್ಲಿ ವರ್ತನೆ ಮಾಡಿದರು. ನಾವು ಜನರ ಮಧ್ಯ ಘರ್ಜನೆ ಮಾಡುತ್ತಿದ್ದೇವು. ಪ್ರಜಾಪ್ರಭುತ್ವ ಉಳಿವಿಗಾಗ ಘರ್ಜನೆ ಮಾಡಿ ಜೈಲಿಗೆ ನಾವು ಹೋಗಿದ್ದೇವು. ನೀವು ಬಾಲಾ ಅಲ್ಲಾಡಿಸುವ ಕೆಲಸ ಮಾಡಿದೀರಿ. ಬಿಸ್ಕೆಟ್ ಆಸೆಗೆ ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರಿದೀರಿ.
ಈಗ ಸಂವಿಧಾನ ಹಿಡಿದುಕೊಂಡು ನಮಗೆ ಪಾಠ ಮಾಡುತ್ತೀರಾ? ನಿಮಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.ನಮ್ಮನ್ನು ನಾಯಿ ಎಂದು ಕರೆಯುತ್ತೀರಿ. ನಾವು ದೇಶಕ್ಕೆ, ಸಂವಿಧಾನಕ್ಕೆ ನಿಯತ್ತಿರುವ ನಾಯಿಗಳು. ನೀವು ಸರ್ವಾಧಿಕಾರಿ ಇಂದಿರಾ ಗಾಂಧಿ ಪರ ಬಾಲಾ ಅಲ್ಲಾಡಿಸುತ್ತಿದ್ದೀರಿ ಎಂದರು.ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅರವಿಂದ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಉಜ್ವಲಾ ಬಡವನಾಚೆ ಮೊದಲಾದವರು ಪಾಲ್ಗೊಂಡಿದ್ದರು.